
ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಪ್ಪ-ಅಮ್ಮನನ್ನು ಹತ್ಯೆ ಮಾಡಿದ ಮಗನೇ ಈಗ ಅವರಿಬ್ಬರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾನೆ. ಕಳೆದ ಫೆಬ್ರವರಿ 11 ರಂದು ನಿವೃತ್ತ ನೇವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಮತ್ತು ಶ್ಯಾಮಲಾ ಭಟ್ ಅವರನ್ನು ಪುತ್ರನೇ ಕೊಲೆ ಮಾಡಿದ್ದ, ಎಚ್ಎಎಲ್ ಠಾಣೆ ವ್ಯಾಪ್ತಿಯ ವಿಜ್ಞಾನ ನಗರ ನಿವಾಸಿಗಳಾದ ನವೀನ್ ಚಂದ್ರ ಭಟ್ (60) ಮತ್ತು ದಂತ ವೈದ್ಯ ಶ್ಯಾಮಲಾ ಭಟ್ (55) ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಪುತ್ರ ರೋಹನ್ ಚಂದ್ರ ಭಟ್ (32) ಎಂಬಾತನನ್ನು ಬುಧವಾರ ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದರು. ಆರೋಪಿ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಕಳೆದ ಕೆಲ ವರ್ಷಗಳಿಂದ ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹೀಗಾಗಿ ಬಂಧನದ ಬಳಿಕ ಆತನನ್ನು ನಗರದ ನಿಮ್ಹಾನ್ಸ್ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದರು.
ಇನ್ನು ಸಹೋದರನಿಂದ ಹತ್ಯೆಯಾದ ತಂದೆ-ತಾಯಿಯ ಮರಣೋತ್ತರ ಪರೀಕ್ಷೆ ಪುತ್ರಿಯ ಸಮ್ಮುಖದಲ್ಲಿ ಶನಿವಾರ ನಡೆಯಿತು. ಮತ್ತೊಂದೆಡೆ ಪಾಲಕರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ತನ್ನ ಸಹೋದರನಿಗೆ ಅವಕಾಶ ನೀಡುವಂತೆ ಕೋರಿ ಸಹೋದರಿ ರಶ್ಮಿ ಚಂದ್ರ ಭಟ್ ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ತಾನೇ ಕೊಲೆ ಮಾಡಿರುವ ತಂದೆ-ತಾಯಿಯ ಅಂತ್ಯ ಸಂಸ್ಕಾರವನ್ನು ಆರೋಪಿ ಪುತ್ರ ರೋಹನ್ ಭಟ್ ನೆರವೇರಿಸಲಿದ್ದಾನೆ.
ಈ ಹಿನ್ನೆಲೆಯಲ್ಲಿ ನಿವೃತ್ತ ನೇವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಮತ್ತು ಶ್ಯಾಮಲಾ ಭಟ್ ಅಂತ್ಯ ಸಂಸ್ಕಾರ ನೆರವೇರಿಸುವ ಸಲುವಾಗಿ ನಿಮ್ಹಾನ್ಸ್ ನಿಂದ ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಆರೋಪಿಯನ್ನು ಪೊಲೀಸರು ಕರೆತಂದಿದ್ದು, ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಪುತ್ರನಿಂದಲೇ ಅಂತ್ಯ ಸಂಸ್ಕಾರ ನೆರವೇರಿದೆ.
ಆರೋಪಿ ರೋಹನ್ ಚಂದ್ರ ಭಟ್ ನ ತಂಗಿಯಾಗಿರುವ ರಶ್ಮಿ ಚಂದ್ರ ಭಟ್ ಅಮೆರಿಕಾದಿಂದ ಶುಕ್ರವಾರ ನಗರಕ್ಕೆ ಆಗಮಿಸಿದ್ದು, ಇವರ ಸಮ್ಮುಖದಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದರು. ತಮ್ಮ ಪಾಲಕರಾದ ನವೀನ್ ಚಂದ್ರ ಭಟ್(60), ಶ್ಯಾಮಲಾ ಭಟ್(55) ಅವರ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡುವಂತೆ ರಶ್ಮಿ ಕೋರ್ಟ್ಗೆ ಅರ್ಜಿ ಸಲ್ಲಿದ್ದರು. ನಮ್ಮ ತಂದೆ ತಾಯಿಗೆ ರೋಹನ್ ಏಕೈಕ ಪುತ್ರನಾಗಿದ್ದು, ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ನೆರವೇರಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಆರೋಪಿಯು ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ. ಆದರೆ ಆತನ ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್ಗಾಗಿ ಕಾಯುತ್ತಿದ್ದೇವೆ. ಅದು ನಮ್ಮ ಕೈಸೇರಿದ ಕೂಡಲೇ ಆತನನ್ನು ನಮ್ಮ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಆರೋಪಿಯು ಚಾಕುವಿನಿಂದ ಚುಚ್ಚಿ ತಂದೆ ತಾಯಿಯನ್ನು ಕೊಂದಿದ್ದನು. ಪಕ್ಕದ ಮನೆಯವರು ನೋಡಿ ಪೊಲೀಸ್ ದೂರು ನೀಡಿದ್ದರು.