
ರಾಜಧಾನಿ ಬೆಂಗಳೂರು ರಸ್ತೆ ಸುರಕ್ಷತೆಯ ವಿಷಯದಲ್ಲಿ ದೇಶದಲ್ಲೇ ಅತ್ಯಂತ ಕಳವಳಕಾರಿ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ‘ಭಾರತದಲ್ಲಿ ರಸ್ತೆ ಅಪಘಾತಗಳು 2024’ ವರದಿಯ ಪ್ರಕಾರ, ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಈ ಕಪ್ಪು ಪಟ್ಟಿಯಲ್ಲಿ ದೇಶದ ರಾಜಧಾನಿ ದೆಹಲಿಯು 5,657 ಅಪಘಾತಗಳು ಮತ್ತು 1,551 ಸಾವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶದ ಜಬಲ್ಪುರವು 3,928 ಅಪಘಾತಗಳು ಹಾಗೂ 589 ಸಾವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 2023ರ ಅಂಕಿ-ಅಂಶಗಳಿಗೆ ಹೋಲಿಸಿದರೆ 2024ರಲ್ಲಿ ಒಟ್ಟಾರೆ ಅಪಘಾತಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದ್ದರೂ, ದೀರ್ಘಾವಧಿಯ ಅಂಕಿ-ಅಂಶಗಳು ಮಾತ್ರ ತೀವ್ರ ಆತಂಕವನ್ನು ಮೂಡಿಸುತ್ತಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಅಪಘಾತಗಳು ಹಾಗೂ ಸಾವುಗಳ ಸಂಖ್ಯೆಯಲ್ಲಿ ಶೇಕಡಾ 4.1 ರಷ್ಟು ಪ್ರಗತಿ ಕಂಡುಬಂದಿದೆ. ಅಂದರೆ 2023 ರಲ್ಲಿ ಬೆಂಗಳೂರಿನಲ್ಲಿ 4,974 ಅಪಘಾತಗಳು ಮತ್ತು 915 ಸಾವುಗಳು ದಾಖಲಾಗಿದ್ದರೆ, 2024 ರಲ್ಲಿ ಒಟ್ಟು 4,769 ರಸ್ತೆ ಅಪಘಾತಗಳು ಸಂಭವಿಸಿದ್ದು, 894 ಸಾವುಗಳು ಮತ್ತು 4,022 ಗಾಯಗಳಾಗಿವೆ. ಇದು 205 ಅಪಘಾತಗಳ ಇಳಿಕೆಯನ್ನು ತೋರಿಸುತ್ತದೆ. ಪ್ರಸ್ತುತ ವರ್ಷದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರೂ, ಕಳೆದ ನಾಲ್ಕು ವರ್ಷಗಳ ಒಟ್ಟಾರೆ ಪ್ರವೃತ್ತಿಯನ್ನು ಗಮನಿಸಿದರೆ ಅಪಘಾತಗಳ ಪ್ರಮಾಣ ತೀವ್ರವಾಗಿ ಏರಿದೆ. 2020 ರ ಸಾಲಿನಲ್ಲಿ ಕೇವಲ 3,233 ರಷ್ಟಿದ್ದ ರಸ್ತೆ ಅಪಘಾತಗಳ ಸಂಖ್ಯೆ, ಪ್ರಸ್ತುತ ವರ್ಷದ ವೇಳೆಗೆ ಬರೊಬ್ಬರಿ 4,769 ಕ್ಕೆ ತಲುಪಿರುವುದು ನಗರದ ಸಂಚಾರ ಸುರಕ್ಷತೆಯನ್ನು ಗಂಭೀರ ಪ್ರಶ್ನೆಯಾಗಿಸಿದೆ.
ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸವಾರರ ಅತಿ ವೇಗದ ಚಾಲನೆಯೇ ಅತಿ ದೊಡ್ಡ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಅತಿ ವೇಗದ ಚಾಲನೆಗೆ ಸಂಬಂಧಿಸಿದ ಅಪಘಾತಗಳ ವಿಭಾಗದಲ್ಲಿ ಬೆಂಗಳೂರು ಇಡೀ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಗರದಲ್ಲಿ ಕೇವಲ ಅತಿ ವೇಗದಿಂದಾಗಿ 4,290 ಅಪಘಾತಗಳು ಸಂಭವಿಸಿದ್ದು, ಇವುಗಳಲ್ಲಿ 776 ಜನರು ಜೀವ ಕಳೆದುಕೊಂಡಿದ್ದಾರೆ ಮತ್ತು 3,609 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವಿಭಾಗದಲ್ಲಿ ಜಬಲ್ಪುರ ನಗರವು 3,878 ಅಪಘಾತಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ನಗರದ ರಸ್ತೆಗಳ ಸ್ಥಿತಿಗತಿ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ಅಪಘಾತಗಳು ಸಂಭವಿಸುತ್ತಿರುವ ರೀತಿ ವಿಭಿನ್ನವಾಗಿದೆ. ಅಚ್ಚರಿಯೆಂದರೆ, ತಿರುವುಗಳಿಗಿಂತ ನೇರ ಮತ್ತು ಉತ್ತಮವಾಗಿರುವ ರಸ್ತೆಗಳಲ್ಲೇ ಅತಿ ಹೆಚ್ಚು ಅಪಘಾತಗಳು ಜರುಗಿವೆ. ನಗರದ ನೇರ ರಸ್ತೆಗಳಲ್ಲಿ ಒಟ್ಟು 4,161 ಅಪಘಾತಗಳು ಸಂಭವಿಸಿದ್ದು, 766 ಸಾವುಗಳು ಹಾಗೂ 3,463 ಗಾಯಗಳು ದಾಖಲಾಗಿವೆ. ಅದೇ ರೀತಿ ವಕ್ರ ಅಥವಾ ಕಡಿದಾದ ತಿರುವುಗಳಿರುವ ರಸ್ತೆಗಳಲ್ಲಿ 415 ಅಪಘಾತಗಳು ಸಂಭವಿಸಿದ್ದು, 87 ಜನರು ಮೃತಪಟ್ಟಿದ್ದಾರೆ. ಇನ್ನು ರಸ್ತೆ ಗುಂಡಿಗಳಿಂದ ಅಧಿಕೃತ ವರದಿಯ ಪ್ರಕಾರ ಕೇವಲ 2 ಅಪಘಾತಗಳು ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿ ಅಥವಾ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ರಸ್ತೆಗಳ ಬಳಿ 21 ಅಪಘಾತಗಳು ಸಂಭವಿಸಿದ್ದು, 6 ಸಾವುಗಳು ಹಾಗೂ 30 ಗಾಯಗಳಾಗಿವೆ.
ಸಾಮಾನ್ಯವಾಗಿ ಮಳೆ ಅಥವಾ ಮಂಜು ಮುಸುಕಿದ ವಾತಾವರಣದಲ್ಲಿ ಅಪಘಾತಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ. ಆದರೆ ಬೆಂಗಳೂರಿನಲ್ಲಿ ಇದರ ಉಲ್ಟಾ ವಾಸ್ತವ ಬಯಲಾಗಿದೆ. ಹಗಲು ಮತ್ತು ಬಿಸಿಲಿರುವ ಶುಭ್ರ ವಾತಾವರಣದಲ್ಲೇ ಅತಿ ಹೆಚ್ಚು ಅಂದರೆ 4,213 ಅಪಘಾತಗಳು ಸಂಭವಿಸಿದ್ದು, 755 ಸಾವುಗಳು ಸಂಭವಿಸಿವೆ. ರಸ್ತೆಗಳು ಖಾಲಿ ಇರುವುದು ಮತ್ತು ಚಾಲನೆಗೆ ಸೂಕ್ತ ವಾತಾವರಣ ಇರುವುದೇ ಸವಾರರ ಅತಿ ವೇಗಕ್ಕೆ ಪ್ರೇರಣೆಯಾಗುತ್ತಿದೆ ಎಂಬುದನ್ನು ಇದು ಸಾಬೀತುಪಡಿಸಿದೆ. ಇನ್ನುಳಿದಂತೆ ಮಂಜು ಮತ್ತು ಮಂಜಿನ ಪರಿಸ್ಥಿತಿಗಳು 375 ಅಪಘಾತಗಳಿಗೆ ಕಾರಣವಾಗಿದ್ದು, 97 ಸಾವುಗಳು ಮತ್ತು 355 ಗಾಯಗಳಾಗಿವೆ. ಮಳೆಯ ವಾತಾವರಣದಲ್ಲಿ 144 ಅಪಘಾತಗಳು ಸಂಭವಿಸಿದ್ದು, 32 ಸಾವುಗಳು ವರದಿಯಾಗಿವೆ.
ನಗರದ ಒಟ್ಟು ಅಪಘಾತಗಳಲ್ಲಿ ಬೈಕ್ ಸವಾರರು ಮತ್ತು ಪಾದಚಾರಿಗಳದ್ದೇ ಸಿಂಹಪಾಲಾಗಿದೆ. ಅತಿ ಹೆಚ್ಚು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳು ಭಾಗಿಯಾಗಿದ್ದು, 2,175 ಅಪಘಾತಗಳಲ್ಲಿ 467 ಸಾವುಗಳು ಮತ್ತು 2,091 ಗಾಯಗಳು ಸಂಭವಿಸಿವೆ. ಪಾದಚಾರಿ ಅಪಘಾತಗಳ ಸಂಖ್ಯೆ 216 ಆಗಿದ್ದರೂ, ಸಾವಿನ ಸಂಖ್ಯೆ ಮಾತ್ರ ಅಸಮಾನವಾಗಿ ಅತಿ ಹೆಚ್ಚಿದೆ. ವಾಹನಗಳ ಡಿಕ್ಕಿಯಿಂದಾಗಿ ಬರೊಬ್ಬರಿ 241 ಪಾದಚಾರಿಗಳು ಸಾವನ್ನಪ್ಪಿದ್ದಾರೆ ಮತ್ತು 1,039 ಜನರು ಗಾಯಗೊಂಡಿದ್ದಾರೆ. ಬೈಸಿಕಲ್ ಸಂಬಂಧಿತ ಅಪಘಾತಗಳು 47 ಆಗಿದ್ದು, 13 ಸಾವುಗಳು ಮತ್ತು 36 ಗಾಯಗಳಾಗಿವೆ. ಇದರೊಂದಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕೆ ನಗರದಲ್ಲಿ ಒಟ್ಟು 129 ಅಪಘಾತಗಳು ಸಂಭವಿಸಿದ್ದು, 45 ಮಂದಿ ಮೃತಪಟ್ಟು, 83 ಜನರು ಗಾಯಗೊಂಡಿದ್ದಾರೆ.
ಭಾರತದಾದ್ಯಂತ ಪೊಲೀಸ್ ಇಲಾಖೆಗಳು ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು 4,87,707 ರಸ್ತೆ ಅಪಘಾತಗಳು ವರದಿಯಾಗಿದ್ದು, 1,77,175 ಜನರು ಸಾವನ್ನಪ್ಪಿದ್ದಾರೆ ಮತ್ತು 4,71,441 ಜನರು ಗಾಯಗೊಂಡಿದ್ದಾರೆ. ವಿಶೇಷವೆಂದರೆ, ದೇಶದ ಒಟ್ಟು ಅಪಘಾತಗಳ ಪೈಕಿ ಶೇಕಡಾ 46.34 ರಷ್ಟು ಬೃಹತ್ ಪ್ರಮಾಣದ ಅಪಘಾತಗಳು ಕೇವಲ 10 ಪ್ರಮುಖ ಮಿಲಿಯನ್ ಪ್ಲಸ್ ಅಥವಾ 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲೇ ಸಂಭವಿಸುತ್ತಿವೆ. ಈ ಪಟ್ಟಿಯಲ್ಲಿ ದೆಹಲಿ, ಬೆಂಗಳೂರು, ಜಬಲ್ಪುರ, ಹೈದರಾಬಾದ್, ಚೆನ್ನೈ, ಇಂದೋರ್, ಮಲಪ್ಪುರಂ, ಕೊಚ್ಚಿ, ಜೈಪುರ ಮತ್ತು ಭೋಪಾಲ್ ನಗರಗಳು ಸೇರಿವೆ. ಈ ಅಂಕಿ-ಅಂಶಗಳು ಬೆಂಗಳೂರಿನಲ್ಲಿ ತುರ್ತಾಗಿ ಕಟ್ಟುನಿಟ್ಟಿನ ಟ್ರಾಫಿಕ್ ನಿಯಮಗಳು ಹಾಗೂ ರಸ್ತೆ ಸುರಕ್ಷತಾ ಜಾಗೃತಿಯ ಅಗತ್ಯತೆಯನ್ನು ಎತ್ತಿ ತೋರಿಸುತ್ತವೆ.