ಸಕಲೇಶಪುರ ಘಾಟ್‌ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿ, ಶೀಘ್ರವೇ ಬೆಂಗಳೂರು-ಮಂಗಳೂರು ವಂದೇ ಭಾರತ್‌ ಆರಂಭ

Published : Aug 21, 2026, 12:44 PM IST
Bengaluru Mangaluru Vande Bharat Express

ಸಾರಾಂಶ

ಬಹುನಿರೀಕ್ಷಿತ ಮಂಗಳೂರು-ಬೆಂಗಳೂರು 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನ ಕಠಿಣ ಘಾಟ್ ವಿಭಾಗದ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ರೈಲಿನ ಎಲ್ಲಾ ಪರೀಕ್ಷೆಗಳು ಮುಗಿದಿದ್ದು, ಉನ್ನತ ಅನುಮೋದನೆಗಳ ನಂತರ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.

ಮಂಗಳೂರು: ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸಲಿರುವ ಬಹುನಿರೀಕ್ಷಿತ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನ ಅತ್ಯಂತ ಕಠಿಣ ಹಾಗೂ ಸವಾಲಿನ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್‌ ನಡುವಿನ ಕಡಿದಾದ ಘಾಟ್ ವಿಭಾಗದಲ್ಲಿ ನಡೆಸಲಾದ ಎಲ್ಲಾ ಹಂತಗಳ ಪ್ರಾಯೋಗಿಕ ಪರೀಕ್ಷೆಗಳು ಗುರುವಾರಕ್ಕೆ ಮುಕ್ತಾಯಗೊಂಡಿವೆ.

ವಿವಿಧ ಹಂತಗಳಲ್ಲಿ ನಡೆದ ಸತತ ಪರೀಕ್ಷೆ:

ಆಗಸ್ಟ್ 12ರಂದು ಸಕಲೇಶಪುರ-ಸುಬ್ರಹ್ಮಣ್ಯ ರೋಡ್‌ ನಡುವಿನ ಘಾಟ್ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಪರೀಕ್ಷಾರ್ಥ ಸಂಚಾರ ನಡೆದಿತ್ತು. ತದನಂತರ ಆಗಸ್ಟ್ 13, 17, 18, 19 ಮತ್ತು 20ರಂದು ಸತತವಾಗಿ ಪರೀಕ್ಷೆಗಳನ್ನು ನಡೆಸಲಾಯಿತು. ಈ ಪ್ರಕ್ರಿಯೆಯ ವೇಳೆ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ (GM) ಅವರೂ ಖುದ್ದಾಗಿ ಭಾಗವಹಿಸಿ ಸಂಚಾರ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದರು.

ಗುರುವಾರ ಈ ಮಾರ್ಗದಲ್ಲಿ ಕೊನೆಯ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿದ ರೈಲು, ಸುಬ್ರಹ್ಮಣ್ಯದಿಂದ ಮಂಗಳೂರಿನತ್ತ ಪ್ರಯಾಣ ಬೆಳೆಸಿದೆ. ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿದ ಈ ರೈಲನ್ನು ನೈರುತ್ಯ ರೈಲ್ವೆಗೆ ಒಪ್ಪಿಸುವ ಸಲುವಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯ ಉನ್ನತ ಮಟ್ಟದ ಅನುಮೋದನೆಗಳು ಲಭ್ಯವಾದ ತಕ್ಷಣವೇ ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಪ್ರಯಾಣಿಕರಿದ್ದಾರೆ.

ಘಾಟ್ ಮಾರ್ಗಕ್ಕಾಗಿಯೇ ರೂಪುಗೊಂಡ ವಿಶೇಷ ವಂದೇ ಭಾರತ್ ರೇಕ್:

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವಿನ ಸುಮಾರು 55 ಕಿ.ಮೀ. ಉದ್ದದ ಘಾಟ್ ವಿಭಾಗದಲ್ಲಿ 1:50 ರಷ್ಟು ತೀವ್ರತರವಾದ ಇಳಿಜಾರು ಮತ್ತು ಏರುಗತಿಗಳಿವೆ. ಸಾಮಾನ್ಯ ರೈಲುಗಳಿಗೆ ಈ ಘಾಟ್ ಪ್ರದೇಶದಲ್ಲಿ ವೇಗ ನಿಯಂತ್ರಿಸಲು ಹೆಚ್ಚುವರಿ ಇಂಜಿನ್‌ಗಳಾದ 'ಬ್ಯಾಂಕರ್ ಲೋಕೋಮೋಟಿವ್'ಗಳನ್ನು ಜೋಡಿಸಲಾಗುತ್ತದೆ. ಆದರೆ, ವಂದೇ ಭಾರತ್ ರೇಕ್‌ನ ವಿಶಿಷ್ಟ ತಾಂತ್ರಿಕ ವಿನ್ಯಾಸದಿಂದಾಗಿ ಅದಕ್ಕೆ ಬ್ಯಾಂಕರ್ ಲೋಕೋಗಳನ್ನು ಜೋಡಿಸಲು ಸಾಧ್ಯವಿಲ್ಲ.

ಈ ತಾಂತ್ರಿಕ ಸವಾಲನ್ನು ಮೆಟ್ಟಿಬರಲು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ICF) ಘಾಟ್ ಮಾರ್ಗದ ಸಂಚಾರಕ್ಕಾಗಿಯೇ ವಿಶೇಷವಾದ 20 ಬೋಗಿಗಳ ವಂದೇ ಭಾರತ್ ರೇಕ್ ಅನ್ನು ಸಿದ್ಧಪಡಿಸಲಾಗಿದೆ. ಈ ರೇಕ್ ಮೈಸೂರಿಗೆ ಆಗಮಿಸಿದ ಬಳಿಕ, ಆಗಸ್ಟ್ 11ರಂದು ಅಲ್ಲಿ ಸ್ಥಿರ ಪರೀಕ್ಷೆಗೊಳಪಟ್ಟು, ಅದೇ ರಾತ್ರಿ ಸಕಲೇಶಪುರಕ್ಕೆ ತರಲಾಗಿತ್ತು.

ಸುರಕ್ಷತೆ ಮತ್ತು 'ಎಇಬಿ' ತಂತ್ರಜ್ಞಾನದ ಪರೀಕ್ಷೆ:

ರೈಲ್ವೆ ಸಚಿವಾಲಯದ ಆರ್‌ಡಿಎಸ್‌ಒ (RDSO - Research Designs and Standards Organisation) ತಜ್ಞರ ತಂಡವು ಈ ಪ್ರಾಯೋಗಿಕ ಸಂಚಾರದ ಉಸ್ತುವಾರಿ ವಹಿಸಿತ್ತು. ರೈಲಿನ ವೇಗ ನಿಯಂತ್ರಣ, ಚಾಲನಾ ಸಾಮರ್ಥ್ಯ ಮತ್ತು ತುರ್ತು ಸಂದರ್ಭದಲ್ಲಿ ಬ್ರೇಕ್ ಹಾಕಿದಾಗ ರೈಲು ನಿಲ್ಲುವ ಅಂತರ ಸೇರಿದಂತೆ ಹಲವು ತಾಂತ್ರಿಕ ಅಂಶಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಸ್ವಯಂಚಾಲಿತ ತುರ್ತು ಬ್ರೇಕ್ : ಈ ವಿಶೇಷ ರೈಲಿನಲ್ಲಿ ಸ್ವಯಂಚಾಲಿತ ತುರ್ತು ಬ್ರೇಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ವೇಗದ ಮಿತಿ: ಘಾಟಿ ವಿಭಾಗದ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಸುರಕ್ಷತಾ ಆಯುಕ್ತರು (CRS) ಗಂಟೆಗೆ ಗರಿಷ್ಠ 30 ಕಿ.ಮೀ. ವೇಗದ ಮಿತಿಯನ್ನು ನಿಗದಿಪಡಿಸಿದ್ದಾರೆ. ರೈಲು ಈ ವೇಗವನ್ನು ಮೀರದಂತೆ ಎಇಬಿ ವ್ಯವಸ್ಥೆಯನ್ನು ಪೂರ್ವನಿಯೋಜಿತವಾಗಿ ಹೊಂದಿಸಲಾಗಿದೆ.

ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿರುವುದರಿಂದ, ಶೀಘ್ರದಲ್ಲೇ ಕರಾವಳಿ ಕರ್ನಾಟಕ ಮತ್ತು ಬೆಂಗಳೂರು ನಡುವೆ ಅತ್ಯಾಧುನಿಕ ವಂದೇ ಭಾರತ್ ರೈಲು ಸೇವೆ ಅಧಿಕೃತವಾಗಿ ಚಾಲನೆಗೊಳ್ಳಲಿದೆ.

PREV
Read more Articles on
click me!

Recommended Stories

Brave MESCOM staff: ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಜೀವ ಪಣಕ್ಕಿಟ್ಟು ವಿದ್ಯುತ್ ತಂತಿ ಜೋಡಿಸಿದ ಮೆಸ್ಕಾಂ ಸಿಬ್ಬಂದಿ! ವೈರಲ್
Ballari Politics: ಮತ್ತೆ ರಾಜ್ಯದ ಗಮನ ಸೆಳೆದ ಬಳ್ಳಾರಿ ರಾಜಕೀಯ; ಬಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಮೇಲ್ಮನೆ, ಕೆಳಮನೆಯಲ್ಲೂ ಗದ್ದಲ!