ಗಣೇಶನ ಶೋಭಯಾತ್ರೆ: ಬೆಂಗಳೂರಿನಲ್ಲಿ ಸಂಚಾರ ಬದಲಾವಣೆ, ಎಲ್ಲೆಲ್ಲ ಮಾರ್ಗ ಬಂದ್‌?

Published : Aug 31, 2025, 11:21 AM IST
lord ganesha 0001

ಸಾರಾಂಶ

ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮೆರವಣಿಗೆ ಹಿನ್ನೆಲೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಚೆಪ್ಪೋ ವರದಿಯ ಪ್ರಕಾರ, ಸಾಂಪ್ರದಾಯಿಕ ವಸ್ತುಗಳ ಆರ್ಡರ್‌ಗಳಲ್ಲಿ ಏರಿಕೆ ಕಂಡುಬಂದಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರವು ಈ ಬಾರಿಯ ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ತೇಲುತ್ತಿದೆ. ನಗರದ ಅನೇಕ ಭಾಗಗಳಲ್ಲಿ ಗಣೇಶ ಮೂರ್ತಿಗಳನ್ನು ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾಗಿದ್ದು, ಹಬ್ಬದ ವೈಭವವನ್ನು ಹೆಚ್ಚಿಸಲು ಭರ್ಜರಿ ಮೆರವಣಿಗೆ (procession) ಗಳ ಸಿದ್ಧತೆಗಳು ಕೂಡ ಜೋರಾಗಿ ನಡೆಯುತ್ತಿವೆ. ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ, ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ವಿಶೇಷವಾಗಿ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಲವು ಮಾರ್ಗಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಲಾಗಿದ್ದು, ಪ್ರಯಾಣಿಕರಿಗಾಗಿ ಪರ್ಯಾಯ ಮಾರ್ಗಗಳನ್ನು ಪೊಲೀಸರು ಸೂಚಿಸಿದ್ದಾರೆ.

ಸಂಚಾರ ಬದಲಾವಣೆ ಹಾಗೂ ಪರ್ಯಾಯ ಮಾರ್ಗಗಳು ಇಂತಿದೆ

ಮೆರವಣಿಗೆ ಪ್ರಾರಂಭವಾದ ನಂತರ ಚಿಕ್ಕಪೇಟೆ ಮುಖ್ಯರಸ್ತೆ ಮೂಲಕ ಸಾಗಿ ಬಂದು ಬಿವಿಕೆ ಅಯ್ಯಂಗಾರ್ ರಸ್ತೆಗೆ ಸಂಪರ್ಕಿಸಬೇಕಾದ ವಾಹನಗಳನ್ನು ಮೈಸೂರು ಬ್ಯಾಂಕ್ ವೃತ್ತದ ಮುಖಾಂತರ ಕೆ.ಜಿ.ರಸ್ತೆ ಮೂಲಕ ಬಿವಿಕೆ ಅಯ್ಯಂಗಾರ್ ರಸ್ತೆಗೆ ಸೇರಿಸಬಹುದು. ಅದೇ ರೀತಿ ಓಟಿಸಿ ರಸ್ತೆಯನ್ನು ಪ್ರವೇಶಿಸಿದ ನಂತರ ಬಳಪೇಟೆ ಮುಖ್ಯರಸ್ತೆಗೆ ಸಂಪರ್ಕಿಸಬೇಕಾದ ವಾಹನಗಳು, ಬಿವಿಕೆ ಅಯ್ಯಂಗಾರ್ ರಸ್ತೆಯಿಂದ ಆರ್.ಟಿ.ಸ್ಟ್ರೀಟ್ ಮೂಲಕ ಬಳಪೇಟೆ ರಸ್ತೆಯನ್ನು ಸೇರುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಚಿಕ್ಕಪೇಟೆ ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ, ಕೆವಿ ಟೆಂಪಲ್ ಸ್ಟ್ರೀಟ್ ಪ್ರವೇಶಿಸಿ ಆರ್.ಸ್ಟ್ರೀಟ್ ರಸ್ತೆಗೆ ಹೋಗುವವರಿಗೆ ಸುಲ್ತಾನ್ ಪೇಟೆ ರಸ್ತೆಯನ್ನು ಮುಚ್ಚಲಾಗಿದ್ದು, ಈ ಮಾರ್ಗವನ್ನು ಬಳಸುವ ವಾಹನಗಳಿಗೆ ಮೈಸೂರು ರಸ್ತೆಯ ಮುಖಾಂತರ ಟೌನ್ ಹಾಲ್ – ಕೆ.ಜಿ ರಸ್ತೆಯಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಮತ್ತೊಂದು ಬದಲಾವಣೆಯಂತೆ, ಮೆರವಣಿಗೆ ಅವೆನ್ಯೂ ರಸ್ತೆಗೆ ಪ್ರವೇಶಿಸಿದ ತಕ್ಷಣ, ದೊಡ್ಡಪೇಟೆ ವೃತ್ತದಿಂದ ಅವೆನ್ಯೂ ರಸ್ತೆ ಕಡೆಗೆ ತೆರಳುವ ವಾಹನಗಳನ್ನು ಚಿಕ್ಕಪೇಟೆ ವೃತ್ತದ ಕಡೆಗೆ ತಿರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಾದ್ಯಂತ ಭಕ್ತಿ ಹಾಗೂ ಸಡಗರ

ಸಂಚಾರ ನಿರ್ಬಂಧಗಳ ನಡುವೆಯೂ ನಗರದ ಜನರು ಗಣೇಶ ಚತುರ್ಥಿಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಿದ್ದಾರೆ. ಪ್ರತಿಯೊಂದು ಬೀದಿ, ಪ್ರತಿಯೊಂದು ಬಡಾವಣೆ ಬಣ್ಣ ಬಣ್ಣದ ಅಲಂಕಾರಗಳು, ವಿದ್ಯುತ್ ದೀಪಾಲಂಕಾರಗಳು ಮತ್ತು ಶೋಭಾಯಾತ್ರೆಗಳಿಂದ ಕಂಗೊಳಿಸುತ್ತಿದೆ. ಕುಟುಂಬಗಳು ಭಕ್ತಿ, ಸಡಗರ ಹಾಗೂ ಸಾಂಪ್ರದಾಯಿಕ ಮೌಲ್ಯಗಳನ್ನು ಕಾಪಾಡುತ್ತಾ ಹಬ್ಬವನ್ನು ಹೃದಯಪೂರ್ವಕವಾಗಿ ಆಚರಿಸುತ್ತಿವೆ.

ಚೆಪ್ಪೋ (Zepto) ವರದಿ , ಸಾಂಪ್ರದಾಯಿಕ ವಸ್ತುಗಳ ಬೇಡಿಕೆಯಲ್ಲಿ ಏರಿಕೆ

ಈ ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿನ ಮತ್ತೊಂದು ವಿಶೇಷತೆ ಗಮನ ಸೆಳೆದಿದೆ. ಭಾರತದ ವೇಗವಾಗಿ ಬೆಳೆಯುತ್ತಿರುವ ತ್ವರಿತ ವಾಣಿಜ್ಯ ವೇದಿಕೆಯಾದ ಚೆಪ್ಪೋ (Zepto)ಯ ದತ್ತಾಂಶ ಪ್ರಕಾರ, ಈ ಬಾರಿಯ ಗಣೇಶ ಚತುರ್ಥಿಯಲ್ಲಿ ಸಾಂಪ್ರದಾಯಿಕ ವಸ್ತುಗಳ ಆರ್ಡರ್‌ಗಳಲ್ಲಿ (orders) ದಾಖಲೆಮಟ್ಟದ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಹಬ್ಬಕ್ಕೆ ಸಂಬಂಧಿಸಿದಂತೆ ಹೂವು, ಹಣ್ಣು, ಪೂಜೆ ಸಾಮಗ್ರಿಗಳು, ಸಿಹಿತಿಂಡಿಗಳು ಮತ್ತು ಅಲಂಕಾರ ಸಾಮಗ್ರಿಗಳ ಖರೀದಿಯಲ್ಲಿ ಬೆಂಗಳೂರಿನ ಜನತೆ ಮುಂಚೂಣಿಯಲ್ಲಿದ್ದಾರೆ.ಚ ಈ ಅಂಕಿ–ಅಂಶಗಳು ಬೆಂಗಳೂರಿನ ಹಬ್ಬದ ಉತ್ಸಾಹವನ್ನು ಮಾತ್ರವಲ್ಲದೆ, ಡಿಜಿಟಲ್ ಯುಗದಲ್ಲಿ ಸಹ ಸಾಂಪ್ರದಾಯಿಕ ಮೌಲ್ಯಗಳನ್ನು ಜನರು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತವೆ. ಇನ್ನು ಬೆಂಗಳೂರಿನಲ್ಲಿ ಸೆ.1ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಒಟ್ಟಿನಲ್ಲಿ, ಈ ಬಾರಿಯ ಗಣೇಶ ಚತುರ್ಥಿಯ ಹಬ್ಬವು ಬೆಂಗಳೂರಿನಲ್ಲಿ ಭಕ್ತಿ, ಸಂಭ್ರಮ ಹಾಗೂ ಆಧುನಿಕತೆ–ಸಾಂಪ್ರದಾಯಿಕತೆಗಳ ಸಮ್ಮಿಶ್ರಣದೊಂದಿಗೆ ಅದ್ಧೂರಿಯಾಗಿ ಸಾಗುತ್ತಿದೆ. ಸಂಚಾರ ನಿಯಂತ್ರಣಗಳಿದ್ದರೂ, ನಾಗರಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ತಮ್ಮ ಪ್ರಯಾಣವನ್ನು ಮುಂದುವರೆಸುತ್ತಿದ್ದಾರೆ. ಇತ್ತ, ಆನ್‌ಲೈನ್ ವೇದಿಕೆಗಳ ಮೂಲಕ ಹಬ್ಬದ ಸಾಂಪ್ರದಾಯಿಕ ವಸ್ತುಗಳ ಖರೀದಿಯಲ್ಲಿ ಕಂಡುಬಂದಿರುವ ಏರಿಕೆ, ನಗರದ ಜನರ ಹಬ್ಬದ ಉತ್ಸಾಹವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.

 

PREV
Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ