
ಬೆಳಗಾವಿ (ಡಿ.17): ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಾವುದೇ ಹಿಂಜರಿಕೆ ಇಲ್ಲದೇ ಅನುಮಾನಗಳಿಗೆ ಪ್ರಶ್ನೆಗಳನ್ನು ಕೇಳಿ ತಮ್ಮಲ್ಲಿರುವ ಆತಂಕಗಳನ್ನು ಸರಿಪಡಿಸಿಕೊಳ್ಳಬೇಕೆಂದು ಶಿಕ್ಷಣ ಇಲಾಖೆಯ ಎಸಿಎಸ್ ವಿ ರಶ್ಮಿ ಮಹೇಶ್ ರವರು ಕಿವಿ ಮಾತು ಹೇಳಿದರು. ಅವರು ಬೆಳಗಾವಿ ಜಿಲ್ಲೆಯ ಚನ್ನಮ್ಮ ಕಿತ್ತೂರಿನ ಕಿತ್ತೂರ ರಾಣಿ ಚೆನ್ನಮ್ಮ ಸೈನಿಕ ಶಾಲೆಯ 54ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ತಂತ್ರಜ್ಞಾನ ಯುಗದಲ್ಲಿ ನಾವಿದ್ದೇವೆ. ಸಾಕಷ್ಟು ಮಾಹಿತಿಗಳನ್ನು ನಾವು ಅಂತರ್ಜಾಲದಲ್ಲಿ ಹುಡುಕಾಡಬಹುದು.
ಅವುಗಳನ್ನು ಯಾವುದು ನಮ್ಮ ಅನುಕೂಲಕ್ಕ ಬರುತ್ತದೆಯೊ ಅದನ್ನು ಮಾತ್ರ ಓದಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಶಿಕ್ಷಣ ಪಡೆದುಕೊಂಡು ಉತ್ತಮವಾದ ಬದುಕನ್ನು ಸೃಷ್ಟಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಈಗ ಕಲಿಯಲು ಸಾಕಷ್ಟು ಅವಕಾಶಗಳಿಗೆ ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಬದುಕಿನಲ್ಲಿ ಉತ್ತಮವಾದ ಮತ್ತು ದೊಡ್ಡದಾದ ಗುರಿಯನ್ನು ಇಟ್ಟುಕೊಳ್ಳಬೇಕು ಮತ್ತು ಸತತ ಶ್ರಮವಹಿಸಿ ಸಾಧಕರಾಗಬೇಕೆಂದು ತಿಳಿಸಿದರು.
ಈ ಸಮಾರಂಭದಲ್ಲಿ ಅತ್ಯುತ್ತಮವಾದ ಸಾಧನೆಮಾಡಿದ ಶಿಕ್ಷಕಿಯರಿಗೆ ಮತ್ತು ಸಿಬ್ಬಂದಿವರ್ಗದವರಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ಪದಕ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ವೇದಿಕೆಯ ಸಮಾರಂಭದ ಮುಂಚೆ ಸಭೆಗೆ ಆಗಮಿಸಿದ್ದ ಮುಖ್ಯ ಅತಿಥಿಗಳು ಶಾಲಾ ವಿದ್ಯಾರ್ಥಿವೃಂದದಿಂದ ಪಥಸಂಚಲನ ಗೌರವ ವಂದನೆ ಸ್ವೀಕರಿಸಿದರು. ಪಥಸಂಚನಲದ ನಂತರ ವಿದ್ಯಾರ್ಥೀನಿಯರುಗಳು ವಿವಿಧ ಪ್ರಕಾರದ ಶೌರ್ಯ, ಕಲೆ, ಸಂಸ್ಕೃತಿ, ಮತ್ತು ಯೋಗ, ಮಲ್ಲಕಂಬ ಹೀಗೆ ಹತ್ತು ಹಲವಾರು ಪ್ರದರ್ಶನಗಳನ್ನು ನೀಡಿ ಅತಿಥಿಗಳ ಮತ್ತು ಪಾಲಕರ ಮೆಚ್ಚುಗೆ ಪಡೆದುಕೊಂಡರು.
ಪ್ರಾಚಾರ್ಯರಾದ ಕರ್ನಲ್ ಡಾ.ರಾಹುಲ್ ಶರ್ಮಾ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಎ.ಕೆ.ಕೊಟ್ರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅರುಣಾ ಅಕ್ಕಿ, ಕಾರ್ಯಾಧ್ಯಕ್ಷ ಡಾ.ವಿರೇಂದ್ರ ತೆಗ್ಗಿನಮನೆ, ಸದಸ್ಯ ಕಾರ್ಯದರ್ಶಿ ಹಾಗೂ ಶಾಸಕರಾದ ಮಹಾಂತೇಶ ಕೌಜಲಗಿ, ಶಿಕ್ಷಣ ಇಲಾಖೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಆಯುಕ್ತೆ ಶಾಲಿನಿ, ಶಾಲೆಯ ಕ್ಯಾಪ್ಟನ್ ಕೆಡೆಟ್ ಅಪೂರ್ವ ಎನ್ ಡಿ ಉಪಸ್ಥಿತರಿದ್ದರು.