
ಬೆಳಗಾವಿ: ಚಿಕ್ಕೋಡಿ ತಾಲೂಕಿನ ರಾಜಕೀಯದಲ್ಲಿ ಇದೀಗ ಹೊಸ ವಿವಾದ ಸಿಡಿದೆದ್ದಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಮುಗಿದ ಕೆಲವೇ ದಿನಗಳ ನಂತರ, ಅಸಮಾಧಾನದ ಅಲೆ ಉಂಟಾಗಿದೆ. ಕಾಗವಾಡ ಶಾಸಕ ರಾಜು ಕಾಗೆ ಅವರ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಬೆಂಬಲಿಗರು ಗಂಭೀರ ಆರೋಪಗಳನ್ನು ಮಾಡಿದ್ದು, ಈ ಘಟನೆ ಇದೀಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಥಣಿ ತಾಲೂಕಿನ ಮಲೀಕ್ ಜಾನ್ ನದಾಫ್ ಎಂಬವರು ಸವದಿ ಬೆಂಬಲಿಗರು ಶಾಸಕರಾದ ರಾಜು ಕಾಗೆ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಗೆ ಮತ್ತು ನದಾಫ್ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ಕ್ಲಿಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಡಿಯೋದಲ್ಲಿ ನದಾಫ್ ಅವರು, “ಕಾಗೇ ಸಾಹೇಬ್ರೇ, ನೀವು ನಮ್ಮ ಸಾವ್ಕಾರಗ (ಲಕ್ಷ್ಮಣ ಸವದಿ) ಬೆನ್ನಾಗ ಚೂರಿ ಹಾಕಿದಿರಿ! ಜೋಡೆತ್ತು ಜೋಡೆತ್ತು ಅಂತಾ ಹೋಗಿ, ಕೊನೆಯಲ್ಲಿ ನಮ್ಮವರನ್ನೇ ದ್ರೋಹ ಮಾಡಿದ್ದೀರಿ,” ಎಂದು ಆಕ್ರೋಶ ವ್ಯಕ್ತಪಡಿಸಿರುವುದು ಕೇಳಿ ಬರುತ್ತದೆ.
ನದಾಫ್ ಅವರ ಈ ಮಾತು ಕೇಳುತ್ತಿದ್ದಂತೆಯೇ ಶಾಸಕ ರಾಜು ಕಾಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದು ಆಡಿಯೋದಲ್ಲಿ ಸ್ಪಷ್ಟವಾಗುತ್ತದೆ. “ನೀನು ಯಾರು ಅಂತ ನಿನಗೆ ಗೊತ್ತಾ? ನಾನು ಯಾರಿಗೆ ಏನು ಮಾಡಿದ್ದೇನೆ ಅಂತ ನನಗೇ ಗೊತ್ತು, ಎಂದು ಶಾಸಕರು ಕಿಡಿಕಾರಿದ್ದಾರೆ. ಇಬ್ಬರ ನಡುವಿನ ಕಟು ಮಾತಿನ ಸಂಭಾಷಣೆ ಕ್ಷಣಾರ್ಧದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ.
ಈ ಸಂಭಾಷಣೆಯ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಈ ಘಟನೆಯಿಂದ ಬೀಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆ ನಂತರದ ಅಸಮಾಧಾನಗಳು ಮತ್ತೆ ಮೇಲಕ್ಕೆ ಬಂದಿವೆ. ಸವದಿ ಬೆಂಬಲಿಗರು ಕಾಗೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸ್ಪಷ್ಟವಾಗಿದೆ.
ಮಲೀಕ್ ಜಾನ್ ನದಾಫ್ ಅವರು ಲಕ್ಷ್ಮಣ ಸವದಿ ಅವರ ನಿಕಟ ಸಹಚರರು ಎಂದು ಗುರುತಿಸಲ್ಪಟ್ಟಿದ್ದಾರೆ. ಬ್ಯಾಂಕ್ ಚುನಾವಣೆಯಲ್ಲಿ ನಡೆದ ಒಳಗಣ್ಣಿನ ರಾಜಕೀಯದ ಹಿನ್ನೆಲೆಯಲ್ಲಿ, ನದಾಫ್ ಅವರು ಶಾಸಕರ ನಡೆಗೆ ವಿರೋಧ ವ್ಯಕ್ತಪಡಿಸಿರುವುದಾಗಿ ಮೂಲಗಳು ಹೇಳುತ್ತಿವೆ.
ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶದ ನಂತರ, ಕಾಗೆ–ಸವದಿ ಶಿಬಿರಗಳ ನಡುವೆ ಬಿರುಕು ಮೂಡಿದೆ ಎಂಬುದು ಈಗ ಸ್ಪಷ್ಟವಾಗಿದೆ. ಇಬ್ಬರೂ ಒಂದೇ ಪಕ್ಷದಲ್ಲಿದ್ದರೂ, ಪರಸ್ಪರ ನಂಬಿಕೆ ಕುಸಿದಂತಿದೆ. ಈ ವಿವಾದದ ಆಡಿಯೋ ಸೋರಿಕೆಯ ನಂತರ, ಜಿಲ್ಲೆಯ ರಾಜಕೀಯ ವಲಯದಲ್ಲಿ ನಡುಕ ಸೃಷ್ಟಿಯಾಗಿದೆ.
ಪಕ್ಷದ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಪಕ್ಷದ ಒಳವಲಯದವರು ತಿಳಿಸಿದ್ದಾರೆ. ಇದರ ನಡುವೆ ಸ್ಥಳೀಯರು ಇಬ್ಬರೂ ಹಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.
ಚಿಕ್ಕೋಡಿಯ ರಾಜಕೀಯದಲ್ಲಿ ಈ ಘಟನೆಯು ಹೊಸ ಸಿಡಿಲು ತರಿಸಿದ್ದು, ಡಿಸಿಸಿ ಬ್ಯಾಂಕ್ ಚುನಾವಣೆ ನಂತರದ ಅಸಮಾಧಾನಗಳು ಈಗ ತೆರೆಮರೆಗೆ ಬರುತ್ತಿರುವಂತಿದೆ. ಕಾಗವಾಡ ಶಾಸಕ ರಾಜು ಕಾಗೆ ಮತ್ತು ಸವದಿ ಶಿಬಿರದ ಬೆಂಬಲಿಗರ ನಡುವಿನ ಈ ಮಾತಿನ ಚಾಟಿ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.