ಹಾಸನಾಂಬೆ ಸನ್ನಿಧಿಯಲ್ಲಿ ನಡೆಯಿತು ಪವಾಡ: ಇದು ಮೈಸೂರು ಮಹಿಳೆಯ ₹4 ಲಕ್ಷದ ಮಾಂಗಲ್ಯ ಸರದ ಕಥೆ!

Published : Oct 21, 2025, 05:08 PM IST
Hasanamba Temple Gold Chain

ಸಾರಾಂಶ

ಹಾಸನಾಂಬೆ ದೇವಿಯ ದರ್ಶನೋತ್ಸವದಲ್ಲಿ, ಮೈಸೂರಿನ ಮಹಿಳೆಯೊಬ್ಬರು ಕಳೆದುಕೊಂಡಿದ್ದ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಮತ್ತೊಬ್ಬ ಭಕ್ತರು ಪ್ರಾಮಾಣಿಕವಾಗಿ ಹಿಂತಿರುಗಿಸಿದ್ದಾರೆ. ಈ ಘಟನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹಾಸನ (ಅ.21): ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವದಲ್ಲಿ ಅಪರೂಪದ ಪ್ರಾಮಾಣಿಕತೆ ಘಟನೆಯೊಂದು ನಡೆದಿದೆ. ದೇವಾಲಯದ ಆವರಣದಲ್ಲಿ ಕಳೆದುಹೋಗಿದ್ದ ಬರೋಬ್ಬರಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಮತ್ತೊಬ್ಬ ಭಕ್ತರು ಪತ್ತೆ ಹಚ್ಚಿ, ಅದನ್ನು ಕಳೆದುಕೊಂಡ ಮಹಿಳೆಗೆ ಮರಳಿಸಿದ್ದಾರೆ.

ಪ್ರಾಮಾಣಿಕತೆ ಮೆರೆದ ಭಕ್ತನಿಗೆ ಸಾರ್ವಜನಿಕರ ಮೆಚ್ಚುಗೆ

ಮೈಸೂರಿನಿಂದ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ದೇವಿಯ ದರ್ಶನ ಪಡೆಯುವ ವೇಳೆ ತಮ್ಮ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಈ ಸರವನ್ನು ದೇವಾಲಯದ ಆವರಣದಲ್ಲಿ ದರ್ಶನಕ್ಕೆ ಬಂದಿದ್ದ ಮತ್ತೊಬ್ಬ ಭಕ್ತರು ಪತ್ತೆ ಮಾಡಿದ್ದು, ತಕ್ಷಣವೇ ಅದನ್ನು ದೇವಾಲಯದ ಆಡಳಿತ ಮಂಡಳಿಗೆ ತಲುಪಿಸಿದರು. ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಈ ಚಿನ್ನದ ಸರವನ್ನು, ಭಕ್ತರು ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ಕಾರ್ಯಕರ್ತರ ಮೂಲಕ ದೇವಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ, ಸರ ಕಳೆದುಕೊಂಡಿದ್ದ ಮೈಸೂರಿನ ಮಹಿಳೆಯನ್ನು ಸಂಪರ್ಕಿಸಿ, ಗುರುತಿನ ಚೀಟಿ ಪರಿಶೀಲಿಸಿ ಅವರಿಗೆ ಮರಳಿಸಲಾಯಿತು.

ತಮ್ಮ ಚಿನ್ನದ ಸರ ಮರಳಿ ಸಿಕ್ಕಿದ್ದಕ್ಕೆ ಮಹಿಳೆ ಸಂತಸ ವ್ಯಕ್ತಪಡಿಸಿದರು. ಭಕ್ತರ ಈ ಅಪೂರ್ವ ಪ್ರಾಮಾಣಿಕತೆಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ದರ್ಶನೋತ್ಸವದ ಪಾವಿತ್ರ್ಯತೆ ಮತ್ತು ಭಕ್ತರ ಸದ್ಗುಣಕ್ಕೆ ಸಾಕ್ಷಿಯಾಗಿದೆ. ಇನ್ನು ಹಾಸನಾಂಬ ದರ್ಶನೋತ್ಸವದ 12ನೇ ದಿನವಾದ ಇಂದು ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

12ನೇ ದಿನ ಕಡಿಮೆಯಾದ ಭಕ್ತರ ದಂಡು

ಇದೇ ವೇಳೆ, ವಾರ್ಷಿಕ ಹಾಸನಾಂಬ ದರ್ಶನೋತ್ಸವದ 12ನೇ ದಿನವಾದ ಇಂದು (ಅ.21) ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಸಾಮಾನ್ಯವಾಗಿ ರಜಾ ದಿನಗಳು ಮತ್ತು ವಾರಾಂತ್ಯಗಳಲ್ಲಿ ತುಂಬಿ ತುಳುಕುತ್ತಿದ್ದ ಸರತಿ ಸಾಲುಗಳು, ಇಂದು ಬೆಳಗ್ಗೆ ಖಾಲಿ ಖಾಲಿಯಾಗಿ ಕಂಡುಬಂದವು. ಕಳೆದ 11 ದಿನಗಳವರೆಗೆ ದೀರ್ಘಾವಧಿಯವರೆಗೆ ಕಾದು ದರ್ಶನ ಪಡೆಯಬೇಕಿದ್ದ ಭಕ್ತರು, ಇಂದು ಕೇವಲ 30 ನಿಮಿಷಗಳಲ್ಲೇ ಧರ್ಮ ದರ್ಶನದ ಮೂಲಕ ದೇವಿ ದರ್ಶನ ಪಡೆಯಲು ಸಾಧ್ಯವಾಯಿತು. 1,000 ರೂಪಾಯಿ ಹಾಗೂ 300 ರೂಪಾಯಿ ಮೌಲ್ಯದ ವಿಶೇಷ ದರ್ಶನದ ಟಿಕೆಟ್‌ಗಳ ಸಾಲುಗಳೂ ಬಹುತೇಕ ಖಾಲಿಯಾಗಿದ್ದವು.

ದೀಪಾವಳಿ ರಜೆ ಹಾಗೂ ದರ್ಶನೋತ್ಸವವು ಕೊನೆಯ ಹಂತ ತಲುಪುತ್ತಿರುವ ಕಾರಣದಿಂದಾಗಿ ಭಕ್ತರ ದಂಡು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ಭಕ್ತರ ಸಂಖ್ಯೆ ಇಳಿದಿರುವುದು, ಸ್ಥಳೀಯ ಪೊಲೀಸರು ಮತ್ತು ಆಡಳಿತ ಮಂಡಳಿಯ ಮೇಲಿನ ಒತ್ತಡವನ್ನು ಕೊಂಚ ತಗ್ಗಿಸಿದೆ. ಆದರೂ, ಜಿಲ್ಲಾಡಳಿತವು ದರ್ಶನೋತ್ಸವ ಮುಕ್ತಾಯಗೊಳ್ಳುವವರೆಗೂ ಎಲ್ಲ ರೀತಿಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್