ಸ್ಫೋಟಕ ಪತ್ತೆ​ದಾರಿ ನೈನಾ ಇನ್ನು ನೆನಪು ಮಾತ್ರ, ಭಾವುಕರಾದ ಸಿಬ್ಬಂದಿ

By Kannadaprabha NewsFirst Published Aug 25, 2019, 10:29 AM IST
Highlights

ಬೆಳಗಾವಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ಸದಾ ಜೊತೆಯಾಗಿದ್ದು, ಸ್ಫೋಟಕಗಳನ್ನು ಪತ್ತೆ ಹಚ್ಚುತ್ತಿದ್ದ ನೈನಾ ಕೊನೆಯುಸಿರೆಳೆದಿದೆ. 2015ರಿಂದ 2017ರವರೆಗೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭ​ವಿ​ಸ​ದಂತೆ ಕಾರ್ಯನಿರ್ವಹಿಸಿತ್ತು. ನೈನಾ ಅಗಲಿಕೆಗೆ ಇಲಾಖೆ ಸಿಬ್ಬಂದಿಯೂ ಭಾವುಕುರಾಗಿದ್ದಾರೆ.

ಬೆಳಗಾವಿ(ಆ.25): ನಗರ ಸೇರಿ​ದಂತೆ ಜಿಲ್ಲೆಯ ಪೊಲೀಸ್‌ ಇಲಾಖೆ ವ್ಯಾಪ್ತಿಯಲ್ಲಿನ ಹಲವು ಪ್ರಕರಣಗಳನ್ನು ಭೇದಿ​ಸಲು ಪೊಲೀ​ಸ​ರಿಗೆ ನೆರವಾಗಿದ್ದ ನೈನಾ ಶನಿ​ವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.

ನೈನಾ ಸಾವಿನ ಸುದ್ದಿ ತಿಳಿದ ಶ್ವಾನದಳದ ಸಿಬ್ಬಂದಿ ಕೂಡ ಭಾವುಕರಾದರು. ನಗರ ಪೊಲೀಸ್‌ ಇಲಾಖೆ ವತಿ​ಯಿಂದ ಆಯುಕ್ತ ಲೋಕೇಶಕುಮಾರ ಸಕಲ ಸರ್ಕಾರಿ ಗೌರವದೊಂದಿಗೆ ತಮ್ಮ ಗೃಹ ಕಚೇರಿ ಆವರಣದಲ್ಲಿ ಶನಿ​ವಾರ ಸರ್ಕಾರಿ ಗೌರ​ವ​ದೊಂದಿಗೆ ಅಂತ್ಯಕ್ರಿಯೆ ನೆರವೇರಿ​ಸಿ​ದರು.

ಯಾರು ಈ ನೈನಾ?:

ನೈನಾ ಯಾವುದೇ ಪೊಲೀಸ್‌ ಅಧಿಕಾರಿಯಲ್ಲ, ಸೆಲೆ​ಬ್ರಿ​ಟಿಯೂ ಅಲ್ಲ. ಲ್ಯಾಬ್ರಡರ ರಿಟ್ರಿವರ್‌ ತಳಿಗೆ ಸೇರಿದ್ದ ಶ್ವಾನ. 2009 ಅಕ್ಟೋಬರ್‌ 21ರಂದು ಜನಿಸಿದ ನೈನಾ (ಶ್ವಾನ). 2010 ಮೇ 25ರಿಂದ 2011 ಏಪ್ರಿಲ್‌ 5ರವರೆಗೆ ಬೆಂಗಳೂರಿನ ಆಡುಗೋಡಿಯಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್‌ ಶ್ವಾನದಳ ತರಬೇತಿ ಶಾಲೆ ಸಿಎಆರ್‌ (ದಕ್ಷಿಣ)ದಲ್ಲಿ ತರಬೇತಿ ಪಡೆದಿತ್ತು.

ಕಗ್ಗಂಟಾದ ಅಪರಾಧ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚುತ್ತಿದ್ದ ನೈನಾ:

ಕೊಲೆ, ದರೋಡೆ ಸೇರಿದಂತೆ ಜಿಲ್ಲೆಯ ಪೊಲೀ​ಸ​ರಿಗೆ ಕಗ್ಗಂಟಾದ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶ​ಸ್ವಿ​ಯಾ​ಗಿತ್ತು. ಹೀಗಾಗಿ ಪೊಲೀಸ್‌ ಇಲಾಖೆಯ ಶ್ವಾನದಳದ ಸಿಬ್ಬಂದಿಗೆ ಅಚ್ಚುಮೆಚ್ಚಾಗಿತ್ತು. 9 ವರ್ಷ 10 ತಿಂಗಳು ವಯ​ಸ್ಸಿನ ನೈನಾ ಶನಿವಾರ ಇಲಾಖೆಯನ್ನು ಅಗಲಿದೆ. ಅಪರಾಧ ಪತ್ತೆ ಹಚ್ಚುವ ಶ್ವಾನವನ್ನು ಸಿಬ್ಬಂದಿ ಎಂದೇ ಪರಿಗಣಿಸಿದ್ದ​ರಿಂದ ನೈನಾ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಸ್ಫೋಟಕ ಪತ್ತೆ ಹಚ್ಚೋದ್ರಲ್ಲಿ ಎಕ್ಸ್‌ಪರ್ಟ್:

ಬೆಳಗಾವಿ ನಗರದ ಪೊಲೀಸ್‌ ಇಲಾಖೆಯ ಶ್ವಾನದಳದಲ್ಲಿ ಕಳೆದ 4 ವರ್ಷಗಳ ಕಾಲ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪತ್ತೆದಾರಿಯಾಗಿ ನೈನಾ ಕಾರ್ಯನಿರ್ವಹಿಸಿತ್ತು. 2016 ಮೇ 11ರಂದು ದೇಸೂರ ರೈಲು ನಿಲ್ದಾಣದಲ್ಲಿ ಅಜ್ಮೇರ ಎಕ್ಸ್‌ಪ್ರೆಸ್‌ ರೈಲಿನಲ್ಲಿನ 5ನೇ ಬೋಗಿ​ಯದ್ದ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚುವಲ್ಲೂ ಸಫ​ಲ​ವಾ​ಗಿತ್ತು. ತನಿಖೆ ನಂತರ ಇದು ಸೈನಿಕರ ತರಬೇತಿಗೆ ಉಪಯೋಗಿಸುವ ಸ್ಫೋಟಕ ವಸ್ತುಗಳು ಎಂಬುದು ತಿಳಿದು ಬಂದಿತ್ತು.

ಅಧಿವೇಶನ ಸಂದರ್ಭದಲ್ಲಿ ಶಿಸ್ತಿನ ಕಾವಲುಗಾರ ನೈನಾ:

2015ರಿಂದ 2017ರವರೆಗೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭ​ವಿ​ಸ​ದಂತೆ ಕಾರ್ಯನಿರ್ವಹಿಸಿತ್ತು. ಇದ​ರಿಂದ ಪೊಲೀಸ್‌ ಅಧಿಕಾರಿಗಳಿಗೆ ನೈನಾ ಮೇಲೆ ಎಲ್ಲಿ​ಲ್ಲದ ನಂಬಿಕೆ, ಪ್ರೀತಿ. ಹೀಗಾಗಿ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಗಣ್ಯಾತಿಗಣ್ಯರು ಬೆಳಗಾವಿಗೆ ಆಗಮಿಸಿದಾಗ ಹಾಗೂ ಹೈಅಲರ್ಟ್‌ ಸಂದರ್ಭದಲ್ಲಿ ವಿಮಾನ, ರೈಲು, ಬಸ್‌ ನಿಲ್ದಾಣ, ಕೋರ್ಟ್‌, ಸರ್ಕಾರಿ ಕಚೇರಿ, ಆಸ್ಪ​ತ್ರೆ​ಗಳು, ಜನನಿಬಿಡ ಪ್ರದೇಶಗಳಲ್ಲಿ, ಪ್ರಾರ್ಥನಾ ಮಂದಿರ, ವಿವಿಧ ಪ್ರಮುಖ ಕಟ್ಟಡ ಹಾಗೂ ಜಲಾಶಯಗಳಲ್ಲಿ ಸ್ಫೋಟಕ ವಸ್ತುಗಳ ಪತ್ತೆಗೆ ಶ್ವಾನದ ದಳದ ಸಿಬ್ಬಂದಿ ಇದೇ ನೈನಾನನ್ನು ಬಳ​ಸು​ತ್ತಿ​ದ್ದರು.

ನಿವೃತ್ತಿ ಪಡೆ​ದಿದ್ದ ನೈನಾ:

ನಾಲ್ಕು ವರ್ಷಗಳ ಕಾಲ ಪೊಲೀಸ್‌ ಸ್ನೇಹಿಯಾಗಿ ಕಾರ್ಯನಿರ್ವಹಿಸಿದ್ದ ನೈನಾ (ಶ್ವಾನ) ಶ್ವಾನದಳದಲ್ಲಿರುವ ಇನ್ನುಳಿದ ಶ್ವಾನಕ್ಕಿಂತ ಅತ್ಯಂತ ಚುರುಕಾಗಿತ್ತು. ನೈನಾಗೆ ವಯಸ್ಸಾದ ಕಾರಣ ಈ ಹಿಂದಿನ ನಗರ ಪೊಲೀಸ್‌ ಆಯುಕ್ತ ಡಾ.ಡಿ.ಸಿ.ರಾಜಪ್ಪ ಅವರು 2018 ಮಾರ್ಚ್‌ 1ರಂದು ನಿವೃತ್ತಿ ಮಾಡಿದ್ದರು.

ಕರ್ನಾಟಕದಲ್ಲಿ ಮೊದಲ ತ್ರಿವಳಿ ತಲಾಖ್ ಕೇಸ್ ದಾಖಲು: ಎಲ್ಲಿ, ಯಾರು? ಇಲ್ಲಿದೆ ಮಾಹಿತಿ

ಅದನ್ನು ಸಾಕಲು ಶ್ವಾನದಳದ ಸಿಬ್ಬಂದಿಗೆ ನೀಡದೆ ಪೊಲೀಸ್‌ ಆಯುಕ್ತರ ನಿವಾಸದಲ್ಲೇ ಸ್ವಂತ ಖರ್ಚಿನಲ್ಲಿ ಸುಂದರವಾದ ಪುಟ್ಟಗೂಡು ನಿರ್ಮಿಸಿ ಸಾಕಿ ಸಲಹು​ತ್ತಿ​ದ್ದರು. ಡಾ.ಡಿ.ಸಿ. ರಾಜಪ್ಪ ಬೆಳಗಾವಿಯಿಂದ ಬೆಂಗಳೂರಿಗೆ ವರ್ಗವಾ​ದ ಬಳಿಕ ನಗರ ಪೊಲೀಸ್‌ ಆಯುಕ್ತರಾಗಿ ಆಗಮಿಸಿದ ಬಿ.ಎಸ್‌.ಲೋಕೇಶಕುಮಾರ ಅವರಿಗೂ ಇಲ್ಲೇ ಸಾಕುವಂತೆ ವಿನಂತಿಸಿದ್ದರು. ಇದ​ರಿಂದ ಅವರೂ ಮನೆಯ ಸದಸ್ಯನಂತೆ ನೈನಾ​ನನ್ನು ನೋಡಿಕೊಂಡಿದ್ದರು.

-ಜಗದೀಶ ವಿರಕ್ತಮಠ ಬೆಳಗಾವಿ

click me!