ಬಿಸಿಲಿನಿಂದ ರಕ್ಷಣೆಗಾಗಿ ಸವಾರರಿಗೆ ಬಂತು ಟ್ರಾಫಿಕ್‌ ಸಿಗ್ನಲ್‌ನಲ್ಲಿ ನೆರಳಿನ ಟೆಂಟ್‌

Published : May 06, 2026, 10:23 AM IST
Belagavi

ಸಾರಾಂಶ

ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ವಾಹನ ಸವಾರರನ್ನು ರಕ್ಷಿಸಲು, ರಾಣಿ ಚನ್ನಮ್ಮ ವೃತ್ತದ ಸಿಗ್ನಲ್‌ನಲ್ಲಿ ನೆರಳಿನ ಟೆಂಟ್‌ಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಈ ಜಂಟಿ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ಇತರ ಭಾಗಗಳಿಗೂ ವಿಸ್ತರಿಸಲು ಬೇಡಿಕೆ ಹೆಚ್ಚಿದೆ.

ಬೆಳಗಾವಿ: ಬೆಳಗಾವಿ ನಗರದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಸದ್ಯ ನಿತ್ಯ 36ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗಿ, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚಾರ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವೃತ್ತದ ಸಿಗ್ನಲ್‌ ಪಾಯಿಂಟ್‌ನಲ್ಲಿ ವಾಹನ ಸವಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಟೆಂಟ್‌ಗಳನ್ನು (ನೆರಳಿನ ಪರದೆಗಳನ್ನು) ಅಳವಡಿಸಲಾಗಿದೆ.

ತಾತ್ಕಾಲಿಕ ಶೆಡ್‌ ನಿರ್ಮಾಣ

ನಗರದಲ್ಲಿ ಇದೇ ಮೊದಲ ಬಾರಿಗೆ ಕೈಗೊಳ್ಳಲಾದ ಈ ಕ್ರಮವನ್ನು ಬೆಳಗಾವಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸಂಯುಕ್ತವಾಗಿ ಜಾರಿಗೊಳಿಸಿವೆ. ಸಿಗ್ನಲ್‌ಗಾಗಿ ಕಾಯುವ ವೇಳೆ ಬಿಸಿಲಿನ ತಾಪದಿಂದ ಬಳಲುತ್ತಿದ್ದ ವಾಹನ ಸವಾರರಿಗೆ ತಾತ್ಕಾಲಿಕ ಶೆಡ್‌ಗಳ ಮೂಲಕ ಕೆಲ ಸಮಯದವರೆಗೆ ರಕ್ಷಣೆ ಒದಗಿಸಲಿದೆ. ಕಾಕತಿವೇಸ್‌ ರಸ್ತೆಯ ಭಾಗದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಈ ನೆರಳಿನ ವ್ಯವಸ್ಥೆಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ತೀವ್ರ ಬಿಸಿಲಿನಲ್ಲಿ ನಿಲ್ಲುವುದು ಕಷ್ಟವಾಗುತ್ತಿದ್ದಾಗ ಈ ಟೆಂಟ್‌ಗಳು ಅವರಿಗೆ ತಾತ್ಕಾಲಿಕ ವಿಶ್ರಾಂತಿ ನೀಡುವಂತಾಗಿವೆ. ಸಿಗ್ನಲ್‌ನಲ್ಲಿ ಕೆಲವು ನಿಮಿಷಗಳಾದರೂ ತಂಪಿನ ಅನುಭವ ಸಿಗುತ್ತಿರುವುದರಿಂದ ಸಾರ್ವಜನಿಕರಿಂದ ಈ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯಪುರದಲ್ಲಿ ಯಶಸ್ವಿ

ಈ ಯೋಜನೆ ಈಗಾಗಲೇ ವಿಜಯಪುರದಲ್ಲಿ ಯಶಸ್ವಿಯಾಗಿ ಜಾರಿಗೊಂಡಿದ್ದು, ಅದನ್ನು ಆಧರಿಸಿ ಅದೇ ಮಾದರಿಯಾಗಿ ತೆಗೆದುಕೊಂಡು ಬೆಳಗಾವಿಯಲ್ಲಿಯೂ ಅನುಷ್ಠಾನಗೊಳಿಸಲಾಗಿದೆ. ನಗರದಲ್ಲಿ ಉಷ್ಣಾಂಶ ಏರಿಕೆಯಿಂದ ಜನಜೀವನದ ಮೇಲೆ ಪರಿಣಾಮ ಬೀರುತ್ತಿರುವಾಗ ಇಂತಹ ಸಣ್ಣದಾದರೂ ಪರಿಣಾಮಕಾರಿ ಕ್ರಮಗಳು ಜನರಿಗೆ ಬಹಳ ನೆರವಾಗುತ್ತಿವೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಈ ವ್ಯವಸ್ಥೆ ಒಂದು ಭಾಗದಲ್ಲಷ್ಟೇ ಕಲ್ಪಿಸಲಾಗಿದೆ. ಇದರಿಂದ ನಗರದ ನಾಲ್ಕೂ ದಿಕ್ಕಿನ ರಸ್ತೆ ಮಾರ್ಗಗಳಲ್ಲಿಯೂ ಇದೇ ರೀತಿಯ ನೆರಳಿನ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಈ ಕ್ರಮವನ್ನು ವಿಸ್ತರಿಸಿದರೆ ಹೆಚ್ಚಿನ ಜನರಿಗೆ ಉಪಯೋಗವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ನಗರದ ಇತರೆ ಪ್ರಮುಖ ವೃತ್ತಗಳು ಮತ್ತು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿಯೂ ಈ ಮಾದರಿಯ ತಾತ್ಕಾಲಿಕ ಶೆಡ್‌ಗಳನ್ನು ಅಳವಡಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

PREV
Read more Articles on
click me!

Recommended Stories

8 ವರ್ಷ ಪ್ರೀತಿ, 3 ಗರ್ಭಪಾತ, 35 ಲಕ್ಷ; ಮಹಿಳಾ ಪೇದೆಯಿಂದ ಯಾದಗಿರಿ PSIಗೆ ಲವ್ ದೋಖಾ ಆರೋಪ?
ತಮಿಳುನಾಡಿನ ಚುನಾವಣೆಯಲ್ಲಿ ತುರುವೇಕೆರೆ ವ್ಯಕ್ತಿಗೆ ಗೆಲುವು; ಮೆಟ್ಟುಪಾಳ್ಯಂನಿಂದ ವಿಧಾನಸಭೆಗೆ ಪ್ರವೇಶ