ಜೋಳದ ರಾಶಿಗುಡ್ಡದಲ್ಲಿ ಕರಡಿ ಪ್ರತ್ಯಕ್ಷ: ಆತಂಕದಲ್ಲಿ ಹೊಸಪೇಟೆ ಜನತೆ

By Kannadaprabha NewsFirst Published May 6, 2020, 9:59 AM IST
Highlights

ಜೋಳದರಾಶಿ ಗುಡ್ಡ ತುದಿಯಿಂದ ವಿವೇಕಾನಂದ ನಗರದ ಉದ್ಯಾನವನದ ಹತ್ತಿರ ಸುಳಿದಾಡಿದ ಕರಡಿ| ಬೆಳಗು ಆಗು​ತ್ತಿ​ದ್ದಂತೆ ಜೋಳದ ರಾಶಿ ಗುಡ್ಡದ ಮೂಲಕ ಕಣ್ಮರೆಯಾದ ಚಿರತೆ| ಕರಡಿ ಶೋಧನೆಗಾಗಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ|

ಹೊಸಪೇಟೆ(ಮೇ.06): ನಗರದ ಜೋಳದರಾಶಿ ಗುಡ್ಡದಲ್ಲಿ ಕರಡಿಯೊಂದು ಮಂಗಳವಾರ ಬೆಳಗಿನ ಜಾವ ಪ್ರತ್ಯಕ್ಷವಾಗಿದೆ. ಲಾಕ್‌ಡೌನ್‌ ನಡುವೆಯೂ ವಾಕಿಂಗ್‌ಗೆ ತೆರಳಿದ್ದ ಕೆಲ ಜನರ ಕಣ್ಣಿಗೆ ಕರಡಿ ಗೋಚರವಾಗಿದೆ. ಮೊದಲು ಜೋಳದರಾಶಿ ಗುಡ್ಡ ತುದಿಯಿಂದ ವಿವೇಕಾನಂದ ನಗರದ ಉದ್ಯಾನವನದ ಹತ್ತಿರ ಸುಳಿದಾಡಿದ ಕರಡಿ ಪುನಃ ಬೆಳಗು ಆಗು​ತ್ತಿ​ದ್ದಂತೆ ಜೋಳದ ರಾಶಿ ಗುಡ್ಡದ ಮೂಲಕ ಕಣ್ಮರೆಯಾಗಿದೆ.

ನಗರದ ಹೊರವಲಯದ ಸಂಡೂರು ರಸ್ತೆಯಲ್ಲಿರುವ ಜೋಳದ ರಾಶಿ ಗುಡ್ಡಕ್ಕೆ ನಿತ್ಯ ಜನರು ವಾಯುವಿಹಾರಕ್ಕೆ ಹೋಗುತ್ತಾರೆ. ಅಲ್ಲದೆ, ಗುಡ್ಡದ ಕೆಳ ಭಾಗದಲ್ಲಿ ಇರುವ ವಿವೇಕಾನಂದ ನಗರದಲ್ಲಿ ಕರಡಿ ಕಾಣಿಸಿಕೊಂಡಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕತ್ತಲಲ್ಲಿ ಕಪ್ಪು ಕರಡಿ: ಗ್ರಾಮದೊಳಗೆ ಇವುಗಳ ಸಂಚಾರ ನೋಡಿ

ಹೊಸಪೇಟೆಯ ಅರಣ್ಯ ಇಲಾಖೆಯ ಸುಮಾರು 15ಕ್ಕೂ ಹೆಚ್ಚು ಸಿಬ್ಬಂದಿಗಳು ಮಂಗಳವಾರ ಸಂಜೆ ಜೋಳದರಾಶಿ ಗುಡ್ಡದ ಪ್ರದೇಶದಲ್ಲಿ ಕರಡಿ ಶೋಧನೆಗಾಗಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆ ಕರಡಿ ಪ್ರತ್ಯಕ್ಷವಾಗಿದೆ ಎನ್ನುವ ದೂರವಾಣಿ ಕರೆಯೊಂದು ಬಂದ ತಕ್ಷಣವೇ ನಮ್ಮ ಸಿಬ್ಬಂದಿಯನ್ನು ಕಳುಹಿಸಿ ಕರಡಿಯನ್ನು ಶೋಧನೆ ನಡೆಸಲಾಯಿತು. ನಂತರ ಅರಣ್ಯ ಇಲಾಖೆಯಿಂದ ಶಬ್ಧ ಮಾಡಿಕೊಂಡು ತೆರಳಿ ಕರಡಿಯನ್ನು ಅರಣ್ಯ ಪ್ರದೇಶದಲ್ಲಿ ಶೋಧನಾ ಕಾರ್ಯ ನಡೆಸಲಾಯಿತು. ಆದರೆ ಅಷ್ಟರ ವೇಳೆಗೆ ಕರಡಿ ಅರಣ್ಯ ಪ್ರದೇಶವನ್ನು ಸೇರಿಕೊಂಡಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿ ಬಸವರಾಜ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
 

click me!