'ಜಮೀನು ಕೊಟ್ಟ ರೈತರಿಗೆ ಅವರ ಜಾಗದಲ್ಲೇ ಬಿಡಿಎ ನಿವೇಶನ'

By Kannadaprabha NewsFirst Published Jan 21, 2021, 7:12 AM IST
Highlights

ಬಡಾವಣೆ ಅಭಿವೃದ್ಧಿಗೆಂದು ಗ್ರಾಮಗಳ ಸಂಪರ್ಕ ರಸ್ತೆಯನ್ನು ಕಿತ್ತು ಹಾಕಲಾಗಿದೆ. ಕೂಡಲೇ ಗ್ರಾಮಗಳಿಗೆ ಸಂಪರ್ಕ ರಸ್ತೆಯನ್ನು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಭರವಸೆ

ಬೆಂಗಳೂರು(ಜ.21): ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆಂದು ರೈತರು ತಮ್ಮ ಕೃಷಿ ಭೂಮಿ ನೀಡಿದ್ದಾರೆ. ಇಂತಹ ರೈತರಿಗೆ ಅವರದ್ದೇ ಭೂಮಿಯಲ್ಲಿ ಲಭ್ಯವಿದ್ದರೆ ಪರಿಹಾರ ರೂಪದ ಅಭಿವೃದ್ಧಿ ಪಡಿಸಿದ ನಿವೇಶನ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಭರವಸೆ ನೀಡಿದ್ದಾರೆ.

ಬುಧವಾರ ಬಿಡಿಎ ಕಚೇರಿಯಲ್ಲಿ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆಂದು ಭೂಮಿ ನೀಡಿದ ರೈತರೊಂದಿಗೆ ಸಭೆ ನಡೆಸಿದರು. ಬಿಡಿಎ ಆಯುಕ್ತ ಡಾ.ಎಚ್‌.ಆರ್‌.ಮಹದೇವ, ಕಾರ್ಯದರ್ಶಿ ವಾಸಂತಿ ಅಮರ್‌, ನಾಡಪ್ರಭು ಕೆಂಪೇಗೌಡ ಬಡಾವಣೆ ಹೋರಾಟ ಸಮಿತಿ ಅಧ್ಯಕ್ಷ ಚನ್ನಪ್ಪ ಸೇರಿದಂತೆ ಇತರ ರೈತರು ಉಪಸ್ಥಿತರಿದ್ದರು.

ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..!

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌, ರೈತರ ಭೂಮಿಯಲ್ಲಿ ನಿವೇಶನಗಳ ಹಂಚಿಕೆ ಪೂರ್ಣಗೊಂಡಿದ್ದರೆ, ಆ ಜಾಗದ ಸಮೀಪದಲ್ಲೇ ನಿವೇಶನಗಳನ್ನು ರೈತರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಕೆಂಪೇಗೌಡ ಬಡಾವಣೆಗೆ ಭೂಮಿಯನ್ನು ನೀಡಿರುವ ಗ್ರಾಮಗಳ ಸ್ಮಶಾನಕ್ಕೆ ಎರಡು ಎಕರೆ ಭೂಮಿಯನ್ನು ಮೀಸಲಿಡಲು ಮತ್ತು ಮಕ್ಕಳಿಗೆ ಆಟದ ಮೈದಾನಕ್ಕೆ ಭೂಮಿ ನೀಡಲು ಸೂಚನೆ ನೀಡಲಾಗಿದೆ. ಅಲ್ಲದೇ ಬಡಾವಣೆ ಅಭಿವೃದ್ಧಿಗೆಂದು ಗ್ರಾಮಗಳ ಸಂಪರ್ಕ ರಸ್ತೆಯನ್ನು ಕಿತ್ತು ಹಾಕಲಾಗಿದೆ. ಕೂಡಲೇ ಗ್ರಾಮಗಳಿಗೆ ಸಂಪರ್ಕ ರಸ್ತೆಯನ್ನು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದರು.
 

click me!