Covid Crisis: ಇನ್ಮುಂದೆ ಮಾಸ್ಕ್‌ ಧರಿಸದಿದ್ರೆ 250 ದಂಡ..!

By Girish GoudarFirst Published Apr 28, 2022, 5:26 AM IST
Highlights

*  ಕೊರೋನಾ 4ನೇ ಅಲೆ ಭೀತಿ ಹಿನ್ನೆಲೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
*  ಸಾರ್ವಜನಿಕರ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ
* ಮಾಸ್ಕ್‌ ನಿಯಮ ಉಲ್ಲಂಘಿಸಿದವರಿಗೆ ಬಿಬಿಎಂಪಿಯಿಂದ 250 ದಂಡ
 

ಬೆಂಗಳೂರು(ಏ.28):  ಕೋವಿಡ್‌ 4ನೇ ಅಲೆಯ(Covid 4th Wave) ಭೀತಿ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್‌(Mask) ಧರಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸದೇ ಇದ್ದವರಿಗೆ ಮೇ 2 ರಿಂದ 250 ರು. ದಂಡ ವಿಧಿಸಲು ಬಿಬಿಎಂಪಿ(BBMP) ತೀರ್ಮಾನಿಸಿದೆ

ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್‌ ಚಂದ್ರ, ನಗರದಲ್ಲಿ ಗಣನೀಯವಾಗಿ ಕೋವಿಡ್‌(Covid-19) ಸೋಂಕು ಏರಿಕೆಯಾಗುತ್ತಿದ್ದು, ಕಳೆದೊಂದು ವಾರದಿಂದ ನಗರದ ಸೋಂಕಿತರ ಪತ್ತೆ ಪ್ರಮಾಣ ಸರಾಸರಿ 90ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾರ್ಷಲ್‌ಗಳು ಮಾರುಕಟ್ಟೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿ ಎಲ್ಲ ಜನನಿಬಿಡ ಸ್ಥಳದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮೇ 2 ರಿಂದ ಮಾಸ್ಕ್‌ ಧರಿಸದವರಿಗೆ ತಲಾ 250 ರು. ದಂಡ ವಿಧಿಸುವ ನಿಯಮ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಕೋವಿಡ್ ಹೆಚ್ಚಾಗುವ ಬಗ್ಗೆ ಎಚ್ಚರಿಕೆ, ವರ್ಷಕ್ಕೊಂದು ಡೋಸ್ ಪಡೆಯುವ ಬಗ್ಗೆ ಸುಧಾಕರ್ ಹೇಳಿದ್ದು ಹೀಗೆ

ನಿಯಮ ಪಾಲನೆ ಕಡ್ಡಾಯ:

ಕೋವಿಡ್‌ ನಿಯಮಗಳಾದ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್‌ ಅಳವಡಿಕೆ ಹಾಗೂ ಥರ್ಮಲ್‌ ಸ್ಟ್ರೀನಿಂಗ್‌ ಮಾಡುವುದನ್ನುನಿಲ್ಲಿಸುವಂತೆ ಪಾಲಿಕೆಯಿಂದ ಸೂಚಿಸಿಲ್ಲ. ನಗರದ ಎಲ್ಲ ಶಾಪಿಂಗ್‌ ಮಾಲ್‌ಗಳು, ಸೂಪರ್‌ ಮಾರ್ಕೆಟ್‌ಗಳು, ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ ಮತ್ತು ಎಲ್ಲ ಮಾರುಕಟ್ಟೆಗಳಲ್ಲಿ ಮಾಸ್‌್ಕ ಧರಿಸುವುದು ಪುನಃ ಕಡ್ಡಾಯಗೊಳಿಸಲಾಗುತ್ತದೆ. ಈಗಾಗಲೇ ಮಾರ್ಷಲ್‌ಗಳು ಎಲ್ಲೆಡೆ ಭೇಟಿ ನೀಡಿ ಸರ್ಕಾರದ ಆದೇಶವನ್ನು ತೋರಿಸಿ ಸೂಚನೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಯಮ ಪಾಲಿಸದ ಉದ್ಯಮ ಅಥವಾ ಮಳಿಗೆಗಳ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

7.5 ಲಕ್ಷ ಮಂದಿಗೆ ಬೂಸ್ಟರ್‌ ಡೋಸ್‌ ಬಾಕಿ

ಬೆಂಗಳೂರಿನಲ್ಲಿ(Bengaluru) ಶೇ.100ರಷ್ಟು ಮೊದಲ ಡೋಸ್‌ ಮತ್ತು ಶೇ.96ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ(Vaccine) ಪಡೆದಿದ್ದಾರೆ. ಉಳಿದಂತೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವೃದ್ಧರು ಸೇರಿ 12 ಲಕ್ಷ ಜನರು ಬೂಸ್ಟರ್‌ ಡೋಸ್‌ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ 4.5 ಲಕ್ಷ ಮಂದಿ ಬೂಸ್ಟರ್‌ ಡೋಸ್‌ ಪಡೆದಿದ್ದು, ಉಳಿದವರು ಪಡೆಯಬೇಕಾಗಿದೆ 3ನೇ ಅಲೆಯ ವೇಳೆ ಬಹುತೇಕ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದ್ದರಿಂದ ಲಸಿಕೆ ಪಡೆಯುವುದು 3 ತಿಂಗಳು ವಿಳಂಬ ಆಗಲಿದೆ. ಹೀಗಾಗಿ, ಆರೋಗ್ಯ ಕಾರ್ಯಕರ್ತರ ಬೂಸ್ಟರ್‌ ಡೋಸ್‌ ಲಸಿಕೆ ನೀಡಿಕೆಗೆ ಹಿನ್ನಡೆ ಉಂಟಾಗಿದೆ ಎಂದು ಡಾ.ಕೆ.ವಿ. ತ್ರಿಲೋಕ್‌ಚಂದ್ರ ತಿಳಿಸಿದರು.
 

click me!