Bengaluru: ಫುಟ್‌ಪಾತ್‌ನಲ್ಲಿ ನಿರ್ಮಿಸಿದ್ದ ಶೆಡ್‌ ತೆರವುಗೊಳಿಸಿದ ಮುಖ್ಯ ಆಯುಕ್ತ ತುಷಾರ್‌

Published : Oct 20, 2022, 01:40 PM IST
Bengaluru: ಫುಟ್‌ಪಾತ್‌ನಲ್ಲಿ ನಿರ್ಮಿಸಿದ್ದ ಶೆಡ್‌ ತೆರವುಗೊಳಿಸಿದ ಮುಖ್ಯ ಆಯುಕ್ತ ತುಷಾರ್‌

ಸಾರಾಂಶ

ನಗರದ ವಿಶ್ವೇಶ್ವರಪುರ ಜೈನ ಮಂದಿರ ರಸ್ತೆಯಲ್ಲಿ ಪಾದಚಾರಿ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. 

ಬೆಂಗಳೂರು (ಅ.20): ನಗರದ ವಿಶ್ವೇಶ್ವರಪುರ ಜೈನ ಮಂದಿರ ರಸ್ತೆಯಲ್ಲಿ ಪಾದಚಾರಿ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. ಬುಧವಾರ ದಕ್ಷಿಣ ವಲಯ ವ್ಯಾಪ್ತಿಯ ಮಿನರ್ವ ವೃತ್ತದಿಂದ ಸೌತ್‌ ಎಂಡ್‌ ವೃತ್ತದವರೆಗೆ 7 ಕಿ.ಮೀ. ಉದ್ದದ ರಸ್ತೆ, ಪಾದಚಾರಿ ಮಾರ್ಗವನ್ನು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದ ತಂಡ ಪರಿಶೀಲನೆ ನಡೆಸಿದರು. ಈ ವೇಳೆ ಜೈನ ಮಂದಿರ ರಸ್ತೆಯಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನಿಡಲು ನಿರ್ಮಿಸಲಾಗಿದ್ದ, ತಾತ್ಕಾಲಿಕ ಶೆಡ್‌ಅನ್ನು ಗಮನಿಸಿ ಕೂಡಲೇ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದಕ್ಕೆ ಅಧಿಕಾರಿಗಳು ಪರಿಶೀಲನೆ ಮುಗಿದ ಕೂಡಲೇ ತೆರವು ಮಾಡುವುದಾಗಿ ಉತ್ತರಿಸಿದರು. 

ಆದರೆ ಅದಕ್ಕೊಪ್ಪದ ಮುಖ್ಯ ಆಯುಕ್ತರು, ನಾನು ಪರಿಶೀಲಿಸಿ ಹೋದ ಮೇಲೆ, ಸಮಸ್ಯೆ ನಿವಾರಣೆಗೆ ನೀವ್ಯಾರು ಕ್ರಮ ಕೈಗೊಳ್ಳುವುದಿಲ್ಲ. ನಾನಿರುವಾಗಲೇ ಒತ್ತುವರಿ ತೆರವು ಮಾಡಿ ಎಂದು ಹೇಳಿ ಸ್ಥಳಕ್ಕೆ ಜೆಸಿಬಿ ತರಿಸಿ ಪಾದಚಾರಿ ಮಾರ್ಗ ಒತ್ತುವರಿ ತೆರವಾಗುವಂತೆ ಮಾಡಿದರು. ಈ ವೇಳೆ ಶಾಸಕ ಉದಯ್‌ ಬಿ.ಗರುಡಾಚಾರ್‌, ವಲಯ ಆಯುಕ್ತ ಜಯರಾಮ್‌ ರಾಯಪುರ, ವಲಯ ಜಂಟಿ ಆಯುಕ್ತ ಜಗದೀಶ್‌ ನಾಯ್‌್ಕ, ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌, ಮುಖ್ಯ ಎಂಜಿನಿಯರ್‌ ಮೋಹನ್‌ ಕೃಷ್ಣಾ, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ಇತರರಿದ್ದರು.

Bengaluru: ಡಾ.ರಾಜ್‌ ರಸ್ತೆ ದುರಸ್ತಿಗೆ ಬಿಬಿಎಂಪಿ ಆಯುಕ್ತ ತುಷಾರ್‌ ಸೂಚನೆ

ದಂಡ ವಿಧಿಸಲು ಸೂಚನೆ: ಮಿನರ್ವ ವೃತ್ತದ ಪಾದಚಾರಿ ಮಾರ್ಗದಲ್ಲಿನ ಕಲ್ಲು ಕುಸಿದಿರುವುದು ಮತ್ತು ಹಾಳಾಗಿರುವುದನ್ನು ಗಮನಿಸಿದ ಮುಖ್ಯ ಆಯುಕ್ತರು, ದುರಸ್ತಿ ಮಾಡಿಸುವಂತೆ ಸೂಚಿಸಿದರು. ಜತೆಗೆ ಪಾದಚಾರಿ ಮಾರ್ಗದಲ್ಲಿ ದ್ವಿ ಚಕ್ರ ವಾಹನಗಳನ್ನು ನಿಲ್ಲಿಸಿದ್ದನ್ನು ಕಂಡು, ವಾಹನ ಮಾಲಿಕರಿಗೆ ದಂಡ ವಿಧಿಸುವಂತೆ ಸೂಚಿಸಿದರು. ಜತೆಗೆ ವಲಯ ವ್ಯಾಪ್ತಿಯ ಪಾದಚಾರಿ ಮಾರ್ಗದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಿರುವ ಕುರಿತು ವರದಿ ನೀಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ತಿಳಿಸಿದರು.

ಬಸ್‌ ಗುದ್ದಿದ ವೇಗ ಪರಿಗಣಿಸಿ ಪರಿಹಾರ ನೀಡಲು ಪರಿಶೀಲನೆ: ನಗರದ ಸುಜಾತ ಟಾಕೀಸ್‌ ಸಮೀಪ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಮೃತಪಟ್ಟಮಹಿಳೆ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಪರಿಶೀಲನೆ ನಡೆಸುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಜಾತ ಟಾಕೀಸ್‌ ರಸ್ತೆಯಲ್ಲಿ ಗುಂಡಿಗಳಿರುವುದನ್ನು ಒಪ್ಪಿಕೊಂಡರು. ಮಹಿಳೆ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಪೊಲೀಸರ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ. 

ಬೆಂಗ್ಳೂರಿನ 200 ಕಡೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ

ಜೊತೆಗೆ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಎಷ್ಟು ವೇಗದಲ್ಲಿ ಬಂದು ಅಪಘಾತ ಮಾಡಿದ ಎಂಬಿತ್ಯಾದಿ ಮಾಹಿತಿಯನ್ನು ಪಡೆಯಲಿದ್ದೇವೆ. ಆ ನಂತರ ಪರಿಹಾರ ನೀಡುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದರು. ವಾಟಾಳ್‌ ನಾಗರಾಜ್‌ ರಸ್ತೆಯಲ್ಲಿ ಅಧಿಕಾರಿಗಳು ಸದ್ಯಕ್ಕೆ ಗುಂಡಿ ಮುಚ್ಚಿದ್ದಾರೆ. ವರ್ಷಕ್ಕೆ ರಸ್ತೆ ಗುಂಡಿ ಮುಚ್ಚುವುದಕ್ಕೆ .30 ಕೋಟಿ ವೆಚ್ಚ ಮಾಡಲಾಗುತ್ತಿದೆ. ಪ್ರತಿ ವರ್ಷ 30 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಈ ವರ್ಷ 22 ಸಾವಿರ ಗುಂಡಿ ಮುಚ್ಚಿದ್ದೇವೆ. ಮಳೆ ಸುರಿಯುತ್ತಿರುವುದರಿಂದ ಡಾಂಬರ್‌ ಬಳಸಿ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಹೀಗಾಗಿ ಸಿಮೆಂಟ್‌ ಮಿಶ್ರಣದಿಂದ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ ಎಂದರು.

PREV
Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು