ಕಾಂಗ್ರೆಸ್ಸಿನಲ್ಲಿ ಗಾಂಧಿ ಕುಟುಂಬದ ಮನಸ್ಸು ಗೆದ್ದವರು ಸಿಎಂ ಆಗ್ತಾರೆ: ಸಂಸದ ಬೊಮ್ಮಾಯಿ

Published : May 04, 2026, 08:00 PM IST
Basavaraj Bommai

ಸಾರಾಂಶ

ಕಾಂಗ್ರೆಸ್ಸಿನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮನಸ್ಸು ಯಾರು ಗೆಲ್ಲುತ್ತಾರೆಯೋ ಅವರು ಸಿಎಂ ಆಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ (ಮೇ.04): ಕಾಂಗ್ರೆಸ್ಸಿನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮನಸ್ಸು ಯಾರು ಗೆಲ್ಲುತ್ತಾರೆಯೋ ಅವರು ಸಿಎಂ ಆಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ವಿಪರೀತ ಅಧಿಕಾರದ ಆಸೆಯಿಂದ ಕಾಂಗ್ರೆಸ್‌ ನಾಯಕರಲ್ಲಿ ತಿಕ್ಕಾಟ ಶುರುವಾಗಿದೆ. ಕ್ಯಾಬಿನೆಟ್ ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ಮೂರು ಬಾರಿ ಗೆದ್ದಿದ್ದೇವೆ, ನಮಗೆ ಸಚಿವ ಸ್ಥಾನ ಕೊಡಿ ಅಂತ ಕೇಳುತ್ತಾರೆ. ಹೊಸಬರು ತಮಗೂ ಸಚಿವ ಸ್ಥಾನ ಕೇಳುತ್ತಿದ್ದಾರೆ.

ಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ಹಿರಿಯರು. ಅವರು ತಮಗೆ ನ್ಯಾಯಸಮ್ಮತವಾಗಿ ಸಿಎಂ ಸ್ಥಾನ ಸಿಗಬೇಕು ಎಂಬ ನೋವು ಅವರ ಮನಸ್ಸಿನಲ್ಲಿದೆ. ಅದಕ್ಕಾಗಿ ಆ ಭಾವನೆ ವ್ಯಕ್ತಪಡಿಸಿದ್ದಾರೆ ಎಂದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಹೈಕಮಾಂಡ್ ಅಂದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಂತಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್ ಅಂದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಂತಾರೆ. ಇದೊಂದು ಕುಟುಂಬ ಆಧರಿತ ಪಕ್ಷ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರು ಕಳೆದ ಬಜೆಟ್‌ನಲ್ಲಿ ನೀಡಿದ್ದ ಸುಮಾರು ₹14 ಸಾವಿರ ಕೋಟಿ ಬಳಕೆ ಮಾಡಿಲ್ಲ. ಅದರ ಹಿಂದಿನ ವರ್ಷವೂ ಸುಮಾರು ₹10 ಸಾವಿರ ಕೋಟಿ ಬಳಕೆಯಾಗಿಲ್ಲ. ರಾಜಕೀಯವಾಗಿ ತಿಕ್ಕಾಟ ಮಾಡಿದರೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ? ಮುಖ್ಯಮಂತ್ರಿ ಒಂದು ಹೇಳಿದರೆ, ಉಪಮುಖ್ಯಮಂತ್ರಿ ಮತ್ತೊಂದು ಹೇಳುತ್ತಾರೆ, ಜನರ ದೃಷ್ಟಿಯಿಂದ ಈ ಸರ್ಕಾರ ಸಂಪೂರ್ಣ ನಿಂತು ಹೋಗಿದೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹650 ಕೋಟಿ: ಆಕ್ಷೇಪ

ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗಾಗಿ ₹650 ಕೋಟಿಗಳನ್ನು ನೀಡಬೇಕೆಂದು ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಇದೊಂದು ತುಘಲಕ್ ಸರ್ಕಾರದ ತೀರ್ಮಾನವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ.ಎಂ. ಹಿರೇಮಠ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಚಿವ ಸಂಪುಟದ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಮತ್ತೆ ₹650 ಕೋಟಿ ನೀಡಲು ತೀರ್ಮಾನ ಕೈಗೊಂಡಿದ್ದು, ಈ ಕಾಂಗ್ರೆಸ್‌ ಸರ್ಕಾರ ಪದೇ ಪದೇ ಅಲ್ಪಸಂಖ್ಯಾತರನ್ನು ಓಲೈಸಲು ಹಣವನ್ನು ನೀಡುತ್ತಿದೆ.

ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಮತಗಳನ್ನು ಹಾಕಿಲ್ಲವೇ? ಮೇಲಿಂದ ಮೇಲೆ ಹಿಂದೂಗಳಿಗೆ ಅಪಮಾನವನ್ನು ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಈ ಸರ್ಕಾರವನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ. ಹಿಂದೂಗಳ ಅಭಿವೃದ್ಧಿಗಾಗಿ 1 ಪೈಸೆಯನ್ನು ಕೂಡ ಕೊಡದೇ ಕೇವಲ ಅಲ್ಪಸಂಖ್ಯಾತರ ಓಲೈಸಲು ಪ್ರತಿವರ್ಷ ಸಾವಿರಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದಿದ್ದಾರೆ.

PREV
Read more Articles on
click me!

Recommended Stories

ದಾವಣಗೆರೆ ದಕ್ಷಿಣದಲ್ಲಿ 5,708 ಮತಗಳ ಅಂತರದಿಂದ ಸಮರ್ಥ ಶಾಮನೂರು! ಒಟ್ಟು ಮತ ಗಳಿಸಿದ್ದೆಷ್ಟು ಗೊತ್ತಾ?
ಶೃಂಗೇರಿ ಪೋಸ್ಟಲ್ ಬ್ಯಾಲೆಟ್ ಪೇಪರ್ ತಿದ್ದಿದ ಆರೋಪದಡಿ ಜೀವರಾಜ್ ವಿರುದ್ಧ FIR; ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ!