
ಚಾಮರಾಜನಗರ: ವನ್ಯಜೀವಿಗಳ ಸ್ವರ್ಗ, ದೇಶದ ಪ್ರತಿಷ್ಠಿತ ರಾಷ್ಟ್ರೀಯ ಉದ್ಯಾನವನಗಳಲ್ಲೊಂದಾದ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಈಗ ತೀವ್ರ ಆತಂಕಕಾರಿ ಮತ್ತು ಮುಜುಗರದ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಸಾರ್ವಜನಿಕರಿಗೆ ಮತ್ತು ಸ್ಥಳೀಯರಿಗೆ ಕಠಿಣ ನಿಯಮಗಳನ್ನು ವಿಧಿಸುವ ಬಂಡೀಪುರ ಕಾನನದೊಳಗೆ ರೌಡಿಶೀಟರ್ ಒಬ್ಬ ತನ್ನ ಗ್ಯಾಂಗ್ನೊಂದಿಗೆ ಬಿಂದಾಸ್ ಆಗಿ 'ಎಣ್ಣೆ ಪಾರ್ಟಿ' ನಡೆಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯ ಅತ್ಯಂತ ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾಗುವ ಕಳ್ಳಬೇಟೆ ತಡೆ ಶಿಬಿರದಲ್ಲೇ (Anti-Poaching Camp) ಈ ಮೋಜುಮಸ್ತಿ ನಡೆದಿರುವುದು ಇಡೀ ಇಲಾಖೆಯ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಮದ್ದೂರು ವಲಯದ ಹುಲಿಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಹಳೇ ಮೈಸೂರು ಭಾಗದ ಕುಖ್ಯಾತ ರೌಡಿಶೀಟರ್ ಸತೀಶ್ ಮತ್ತು ಆತನ ಸಂಗಡಿಗರು ಯಾವುದೇ ಭಯವಿಲ್ಲದೆ ಕಾಡಿನ ಪ್ರಾಣಿ ವಲಯದ ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅರಣ್ಯ ಇಲಾಖೆಯ ಎಲ್ಲಾ ಕಠಿಣ ನಿಯಮಗಳನ್ನು ಗಾಳಿಗೆ ತೂರಿ, ಹುಲಿಕಟ್ಟೆ ಕಳ್ಳಬೇಟೆ ತಡೆ ಶಿಬಿರದ ಆವರಣದಲ್ಲೇ ಮದ್ಯ ಹಾಗೂ ಮಾಂಸದ ಅಡುಗೆ ಸಿದ್ಧಪಡಿಸಿ ಭರ್ಜರಿ ಪಾರ್ಟಿ ಮಾಡಿದ್ದಾರೆ.
ಈ ಘಟನೆಯು ಹೊರಬೀಳುತ್ತಿದ್ದಂತೆ ಇಲಾಖೆಯ ಇಬ್ಬಗೆ ನೀತಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಡಿನ ಅಂಚಿನಲ್ಲಿ ವಾಸಿಸುವ ಬಡ ಜನ, ಆದಿವಾಸಿಗಳು ಕೇವಲ ಒಲೆ ಉರಿಸಲು ಕಾಡಿನಲ್ಲಿ ಬಿದ್ದಿರುವ ಒಣಗಿದ ಸೌದೆಯನ್ನು ತರಲು ಹೋದರೂ ಅವರ ಮೇಲೆ ಕೇಸ್ ದಾಖಲಿಸುವ, ದಂಡ ವಿಧಿಸುವ ಮತ್ತು ಕ್ರೂರವಾಗಿ ನಡೆಸಿಕೊಳ್ಳುವ ಅರಣ್ಯ ಇಲಾಖೆ ಸಿಬ್ಬಂದಿ, ಇಂತಹ ಸಮಾಜವಿರೋಧಿ ಶಕ್ತಿಗಳಿಗೆ ಕಾಡಿನೊಳಗೆ ರೆಡ್ ಕಾರ್ಪೆಟ್ ಹಾಸಿ ಬರಮಾಡಿಕೊಂಡಿದ್ದು ಏಕೆ? ಎಂಬ ಪ್ರಶ್ನೆ ಈಗ ಸಾರ್ವಜನಿಕರನ್ನು ಕಾಡುತ್ತಿದೆ. ಅಪರಾಧ ಹಿನ್ನೆಲೆಯುಳ್ಳ ರೌಡಿಶೀಟರ್ ಒಬ್ಬನಿಗೆ ಕಾಡಿನ ಅತ್ಯಂತ ರಕ್ಷಿತ ವಲಯಕ್ಕೆ ಪ್ರವೇಶ ಸಿಕ್ಕಿದ್ದಾದರೂ ಹೇಗೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.
ಕಾಡಿನೊಳಗೆ ಚಿರತೆ, ಹುಲಿ ಮತ್ತು ಆನೆಗಳ ಓಡಾಟವಿರುವ ಜಾಗದಲ್ಲಿ ಮದ್ಯದ ಬಾಟಲಿಗಳನ್ನು ಹಿಡಿದು ರೌಡಿಶೀಟರ್ ಸತೀಶ್ ಪಡೆ ಬೀಡು ಬಿಟ್ಟಿರುವುದರ ಹಿಂದೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಆರ್.ಎಫ್.ಒ (RFO) ಮಟ್ಟದ ಸಿಬ್ಬಂದಿಯ ನೇರ ಶಾಮೀಲಾತಿ ಇರುವ ಶಂಕೆ ದಟ್ಟವಾಗಿದೆ. ಇಲಾಖೆಯ ಆಂತರಿಕ ಒಪ್ಪಂದ ಅಥವಾ ಲಂಚದ ಆಮಿಷವಿಲ್ಲದೆ ಇಂತಹ ಕೃತ್ಯ ನಡೆಯಲು ಸಾಧ್ಯವೇ ಇಲ್ಲ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ. ಕಾಡಿನ ಭದ್ರತೆಗೆ ಧಕ್ಕೆ ತಂದು, ವನ್ಯಜೀವಿಗಳ ಜೀವಕ್ಕೆ ಸಂಚಕಾರ ತಂದೊಡ್ಡಿರುವ ಈ ಮೋಜುಮಸ್ತಿಯನ್ನು ಪರಿಸರವಾದಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಬಂಡೀಪುರ ಅರಣ್ಯ ಇಲಾಖೆಯ ಇಮೇಜ್ಗೆ ಧಕ್ಕೆ ತಂದಿರುವ ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ವನ್ಯಜೀವಿ ಆಸಕ್ತರು ಒತ್ತಾಯಿಸುತ್ತಿದ್ದಾರೆ. ಕಳ್ಳಬೇಟೆ ತಡೆಯಬೇಕಾದ ಶಿಬಿರಗಳೇ ಅಪರಾಧಿಗಳ ಪಾರ್ಟಿ ಅಡ್ಡಾಗಳಾಗಿ ಬದಲಾಗುತ್ತಿರುವುದು ದುರಂತ. ಈ ಭದ್ರತಾ ಲೋಪಕ್ಕೆ ಕಾರಣರಾದ ಆರ್.ಎಫ್.ಒ ಸೇರಿದಂತೆ ಪ್ರಭಾವಿ ಅಧಿಕಾರಿಗಳ ವಿರುದ್ಧ ಸರ್ಕಾರ ತಕ್ಷಣವೇ ಶಿಸ್ತುಕ್ರಮ ಜರುಗಿಸದಿದ್ದರೆ ಮುಂಬರುವ ದಿನಗಳಲ್ಲಿ ಬಂಡೀಪುರದ ರಕ್ಷಣೆ ಕೇವಲ ಕಾಗದದ ಮೇಲಷ್ಟೇ ಉಳಿಯಲಿದೆ.