
ಬಳ್ಳಾರಿ: ಅರವಿಂದ್ ಆತ್ಮ*ಹತ್ಯೆಗೆ ಪ್ರಿನ್ಸಿಪಾಲ್ ಮತ್ತು ಹೆಚ್ಓಡಿ ಕಾರಣ ಎಂದು ಡಿಪ್ಲೋಮಾ ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶ್ರದ್ದಾಂಜಲಿ ಸಭೆ ಬಳಿಕ ಟೇಬಲ್, ಗ್ಲಾಸ್ ಒಡೆದು ಹಾಕಿ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮೃತ ಅರವಿಂದ್ ಗುಗ್ಗರಹಟ್ಟಿಯ ನಿವಾಸಿಯಾಗಿದ್ದು, ಬಳ್ಳಾರಿಯ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿದ್ದನು. ಮಂಗಳವಾರ ಅರವಿಂದ್ ನೇಣು ಬಿಗಿದುಕೊಂಡಿದ್ದನು. ಇಂದು ಅರವಿಂದ್ ಸಾವಿನ ಸಂಬಂಧ ವಿದ್ಯಾರ್ಥಿಗಳು ಹೈಡ್ರಾಮಾ ಮಾಡಿದ್ದಾರೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು. ಈ ಸಂಬಂಧ ಅರವಿಂದ್ ಪೋಷಕರನ್ನು ಕಾಲೇಜಿಗೆ ಕರೆಸಲಾಗಿತ್ತು. ಈ ರೀತಿ ಗಲಾಟೆ ಮಾಡುವ ಹುಡುಗರನ್ನು ನಮ್ಮ ಕಾಲೇಜಿನಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಮಗನಿಗೆ ಇದು ಕೊನೆಯ ಎಚ್ಚರಿಕೆ ಎಂದು ಅರವಿಂದ್ ಪೋಷಕರಿಗೆ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಹೆಚ್ಓಡಿ ಹೇಳಿದ್ದರು.
ಈ ಘಟನೆಯಿಂದಾದ ಅವಮಾನದಿಂದಲೇ ಅರವಿಂದ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸ್ಥಳಕ್ಕೆ ಅಡಳಿತ ಮಂಡಳಿ ಬರಬೇಕು. ಅರವಿಂದ್ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದರು.
ಈ ಕುರಿತು ಮಾತನಾಡಿರುವ ಅರವಿಂದ್ ಸೋದರ ಗಣೇಶ್, ಗಲಾಟೆ ಸಂಬಂಧ ಪೋಷಕರನ್ನು ಕಾಲೇಜಿಗೆ ಕರೆಸಿಕೊಳ್ಳಲಾಗಿತ್ತು. ಈ ವೇಳೆ ಮುಂದಿನ ಬಾರಿ ಅಡ್ಮಿಷನ್ ಕೊಡಲ್ಲ ಅಂತೇಳಿ ಹೆದರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಿನ್ಸಿಪಾಲ್ ಕಾಲಿಗೆ ಬಿದ್ದು ಅರವಿಂದ್ ತಾಯಿ ಕ್ಷಮೆ ಕೇಳಿದ್ದಾರೆ. ಪ್ರಿನ್ಸಿಪಾಲ್ ಮಾನವೀಯತೆ ಮರೆತು ಪೋಷಕರೊಂದಿಗೆ ನಡೆದುಕೊಂಡಿದ್ದಾರೆ. ಇದರಿಂದ ನೊಂದು ಸೋದರ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಾಸ್ಟೆಲಲ್ಲಿ ಮಲಗಿದ್ದವರ ಮೇಲೆ ಬಳ್ಳಾರಿ ವಿದ್ಯಾರ್ಥಿ ರಾಡ್ ದಾಳಿ! ಒಂದು ಬಲಿ, 9 ಮಂದಿಗೆ ಗಾಯ
ಸ್ಥಳಕ್ಕಾಗಮಿಸಿದ ಬ್ರೂಸ್ ಪೇಟ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದ್ರೆ ಘಟನೆ ಸಂಬಂಧ ಕಾಲೇಜು ಆಡಳಿತ ಮಂಡಳಿಯಿಂದ ಇಲ್ಲಿವರೆಗೆ ಯಾವುದೇ ಹೇಳಿಕೆ ಬಂದಿಲ್ಲ.
ಇದನ್ನೂ ಓದಿ: ಅಖಂಡ ಬಳ್ಳಾರಿ ಜಿಲ್ಲೆಗೆ ₹2372 ಕೋಟಿ ವೆಚ್ಚದಲ್ಲಿ ಎರಡು ಹೊಸ ರೈಲು ಮಾರ್ಗ, ಅಭಿವೃದ್ಧಿಯ ಹೊಸ ಶಕೆ