'ಗಂಡನ ಬಿಟ್ಟು ಇರಲಾರೆ, ತವರಿನಲ್ಲೂ ಉಳಿಯಲಾರೆ..' ಅತ್ತೆಯ ಕಿರುಕುಳಕ್ಕೆ ಬೇಸತ್ತು ಸಾವು ಕಂಡ ಗೃಹಿಣಿ

Published : May 19, 2026, 08:48 PM IST
Ballari Death

ಸಾರಾಂಶ

ಬಳ್ಳಾರಿಯ ಕಂಪ್ಲಿಯಲ್ಲಿ, ಪತಿ ಮತ್ತು ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಐಶ್ವರ್ಯ ಎಂಬ ಗೃಹಿಣಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದರೂ, ನಿರಂತರ ಗೃಹಹಿಂಸೆಯಿಂದ ನೊಂದು ತವರುಮನೆಯಲ್ಲಿ ನೇಣಿಗೆ ಶರಣಾಗಿದ್ದು, ಡೆತ್‌ನೋಟ್ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಳ್ಳಾರಿ (ಮೇ.19): ಪತಿ ಹಾಗೂ ಅತ್ತೆಯ ಅತಿಯಾದ ಮಾನಸಿಕ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬರು ತವರು ಮನೆಯಲ್ಲಿ ಮನನೊಂದು ನೇಣಿಗೆ ಶರಣಾಗಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ. ಕಂಪ್ಲಿಯ ನಿವಾಸಿ ಐಶ್ವರ್ಯ (24) ಆ*ತ್ಮಹ*ತ್ಯೆ ಮಾಡಿಕೊಂಡ ದುರ್ದೈವಿ ಗೃಹಿಣಿ. ಘಟನೆಗೆ ಸಂಬಂಧಿಸಿದಂತೆ ಕಂಪ್ಲಿ ಠಾಣೆಯ ಪೊಲೀಸರು ಪತಿ ಪ್ರದೀಪ್ ಕುಮಾರ್ ಹಾಗೂ ಆತನ ತಾಯಿಯನ್ನು ತಕ್ಷಣವೇ ಬಂಧಿಸಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಪಶುವೈದ್ಯ ಪ್ರದೀಪ್

ಮೃತ ಐಶ್ವರ್ಯಳನ್ನು ಕಂಪ್ಲಿ ಪಟ್ಟಣದ ನಿವಾಸಿಯಾದ ಪ್ರದೀಪ್ ಕುಮಾರ್ ಎಂಬಾತ ಪ್ರೀತಿಸಿ ಮದುವೆಯಾಗಿದ್ದ. ಪ್ರದೀಪ್ ಕುಮಾರ್ ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯನಾಗಿ (Veterinary Doctor) ಕಾರ್ಯನಿರ್ವಹಿಸುತ್ತಿದ್ದಾನೆ. ಪ್ರೀತಿಸಿ ಹಸೆಮಣೆ ಏರಿದ್ದರೂ ಸಹ, ಮದುವೆಯಾದ ಮೊದಲ ದಿನದಿಂದಲೇ ಐಶ್ವರ್ಯಳಿಗೆ ಗಂಡನ ಮನೆಯಲ್ಲಿ ನೆಮ್ಮದಿ ಇರಲಿಲ್ಲ ಎಂದು ತಿಳಿದುಬಂದಿದೆ.

ಅತ್ತೆಯ ಕಿರುಕುಳಕ್ಕೆ ಮೂಕಪ್ರೇಕ್ಷಕನಾಗಿದ್ದ ಪತಿ

ಮದುವೆಯಾದ ದಿನದಿಂದಲೂ ಅತ್ತೆ ಹಾಗೂ ಪತಿ ಪ್ರದೀಪ್ ಕುಮಾರ್ ಸೇರಿಕೊಂಡು ಐಶ್ವರ್ಯಳಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅತ್ತೆ ಸಣ್ಣಪುಟ್ಟ ವಿಷಯಗಳಿಗೂ ಕಿರಿಕಿರಿ ಮಾಡುತ್ತಾ ಮಾನಸಿಕವಾಗಿ ಹಿಂಸಿಸುತ್ತಿದ್ದರೂ, ಪ್ರೀತಿಯಿಂದ ಕೈಹಿಡಿದಿದ್ದ ಪತಿ ಪ್ರದೀಪ್ ಮಾತ್ರ ಪತ್ನಿಯ ಬೆಂಬಲಕ್ಕೆ ನಿಲ್ಲದೆ ಮೂಕಪ್ರೇಕ್ಷಕನಾಗಿದ್ದನು. ಇದರಿಂದಾಗಿ ಐಶ್ವರ್ಯ ತೀವ್ರ ಆಘಾತ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ದಿನದಿಂದ ದಿನಕ್ಕೆ ಹೆಚ್ಚಾದ ಈ ಗೃಹಹಿಂಸೆಯನ್ನು ಸಹಿಸಲಾರದೇ ಕೊನೆಗೆ ಅವರು ಆ*ತ್ಮಹ*ತ್ಯೆಯ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ತವರು ಮನೆಗೆ ಬಂದು ಆ*ತ್ಮಹ*ತ್ಯೆ; ಡೆತ್‌ನೋಟ್‌ನಲ್ಲಿ ಕಣ್ಣೀರಿನ ಕಥೆ

ಗಂಡನ ಮನೆಯ ಕಿರುಕುಳ ತಾಳಲಾರದೆ ಐಶ್ವರ್ಯ ಇತ್ತೀಚೆಗೆ ಕಂಪ್ಲಿಯಲ್ಲೇ ಇರುವ ತಮ್ಮ ತವರು ಮನೆಗೆ ಬಂದಿದ್ದರು. ಅಲ್ಲಿಯೇ ತೀವ್ರವಾಗಿ ಮನನೊಂದ ಅವರು ಸೋಮವಾರ ನೇಣಿಗೆ ಶರಣಾಗಿದ್ದಾರೆ. ಆ*ತ್ಮಹ*ತ್ಯೆಗೂ ಮುನ್ನ ಐಶ್ವರ್ಯ ಬರೆದಿಟ್ಟಿರುವ ಡೆತ್‌ನೋಟ್ ಈಗ ಲಭ್ಯವಾಗಿದ್ದು, ಅದರಲ್ಲಿ ತಮ್ಮ ಸಾವಿಗೆ ಅತ್ತೆ ಮತ್ತು ಗಂಡನೇ ನೇರ ಕಾರಣ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

"ನನಗೆ ನನ್ನ ಗಂಡನನ್ನು ಬಿಟ್ಟು ಬದುಕುವುದಕ್ಕೆ ಆಗುತ್ತಿಲ್ಲ. ಹಾಗಂತ ನಿರಂತರ ಕಿರುಕುಳ ನೀಡುವ ಅವರ ಮನೆಗೆ ಮರಳಿ ಹೋಗಲು ಸಾಧ್ಯವಿಲ್ಲ. ಇತ್ತ ಶಾಶ್ವತವಾಗಿ) ತವರು ಮನೆಯಲ್ಲಿ ಇರಲೂ ಸಹ ನನ್ನ ಮನಸ್ಸು ಒಪ್ಪುತ್ತಿಲ್ಲ" ಎಂದು ಐಶ್ವರ್ಯ ತಮ್ಮ ಡೆತ್‌ನೋಟ್‌ನಲ್ಲಿ ಕಣ್ಣೀರು ಕೋಡಿ ಹರಿಸಿದ್ದಾರೆ..

ಕಿರುಕುಳ ನೀಡಿದ ಪತಿ ಹಾಗೂ ಅತ್ತೆ ಕಂಪ್ಲಿ ಪೊಲೀಸರ ವಶಕ್ಕೆ

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಂಪ್ಲಿ ಠಾಣೆಯ ಪೊಲೀಸರು ಐಶ್ವರ್ಯ ಬರೆದಿದ್ದ ಡೆತ್‌ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೃತರ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪಶುವೈದ್ಯ ಪ್ರದೀಪ್ ಕುಮಾರ್ ಹಾಗೂ ಆತನ ತಾಯಿಯ ವಿರುದ್ಧ ಆ*ತ್ಮಹ*ತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರನ್ನೂ ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.

 

PREV
Read more Articles on
click me!

Recommended Stories

ಗಂಗಾವತಿ ಕಾಂಗ್ರೆಸ್‌ನಲ್ಲಿ ಭಿನ್ನಮತ? ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಗಂಭೀರ ಆರೋಪ
ದುಬಾರೆ ಘಟನೆ ಬೆನ್ನಲ್ಲೇ ಬಿಗ್ ಆಕ್ಷನ್: ಮೈಸೂರು ದಸರಾದಿಂದ ಕಂಜನ್ ಆನೆ ಶಾಶ್ವತ ವಜಾ