
ಗಂಗಾವತಿ (ಮೇ.19): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಮತ್ತು ಪಕ್ಷ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸರ್ವೇಶ್ ಹೊಟೆಲ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಸ್ಥಳೀಯರನ್ನು ಕಡೆಗಣಿಸುತ್ತಾ ಬಂದಿದ್ದಾರೆ.
ತಾವೊಬ್ಬ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ವರಿಷ್ಠರಿಗೆ ಕಾರ್ಯಕರ್ತರ ನೇಮಕ ಬಗ್ಗೆ ಶಿಫಾರಸ್ತು ಮಾಡಿದರೆ ಕಡೆಗಣಿಸುತ್ತಿದ್ದಾರೆಂದು ದೂರಿದರು. ತಮ್ಮ ತಂದೆ 5 ಭಾರಿ ಸಂಸದರಾಗಿ, ಶಾಸಕರಾಗಿ ಕಾಂಗ್ರೆಸ್ ಉಳಿವಿಗಾಗಿ ಹೋರಾಡಿದ ನಾಯಕರಾಗಿದ್ದಾರೆ. ತಾವು ಸಹ ಎರಡು ಭಾರಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾಗಿ, ಕಾಡಾ ಅದ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದೇನೆ. ಆದರೆ ಪಕ್ಷದ ಸಂಘಟನೆಯಲ್ಲಿದ್ದರು ಸಹ ವರಿಷ್ಟರು ಪಕ್ಷಕ್ಕೆ ದುಡಿಯದವರಿಗೆ ಕೆಲವೊಂದು ನಾಮನಿರ್ದೇಶನ ಮತ್ತು ಪಕ್ಷದ ಅಧಿಕಾರ ನೀಡಿರುವುದು ಕಾಂಗ್ರೆಸ್ ಅವನತಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಿಗೆ ತಾವು ಬೇರೆಯವರಿಗೆ ಶಿಫಾರಸ್ತು ಮಾಡಿದ್ದರು ಸಹ ನಾಗರಾಜ ನಂದಾಪುರ ಎನ್ನುವರಿಗೆ ನೇಮಕ ಮಾಡಿದ್ದಾರೆ ಎಂದು ದೂರಿದರು. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಾಕಷ್ಟು ಹಣ ಪಡೆದು ದಲ್ಲಾಳಿ ನಡೆದಿದೆ. ಇದಕ್ಕೆ ತಾವು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವದಿಲ್ಲ. ತಾವು ಹಿಂದೆ ಅಧಿಕಾರದಲ್ಲಿದ್ದಾಗ ಹಣದ ಆಸೆಗೆ ಹೋದವರು ನಾವಲ್ಲ. ಇತ್ತೀಚಿಗೆ ವರ್ಗಾವಣೆ ವ್ಯಾಪಾರ ನಡೆದಿದೆ ಎಂದರು.
ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಡರನ್ನು ವಿಶ್ವಾಸಕ್ಕೆ ಪಡೆದು ಸಚಿವ ಶಿವರಾಜ ತಂಗಡಗಿ ಮತ್ತು ಸಂಸದ ರಾಜಶೇಖರ್ ಹಿಟ್ನಾಳ್ ಅವರು ಅಧಿಕಾರ ಚಲಾವಣೆ ಮಾಡುವುದು ಬಿಟ್ಟು ಸಂಸದರು ಮತ್ತು ಸಚಿವರು ಕೂಡಿಕೊಂಡು ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಉದ್ಭವಿಸುವದಕ್ಕೆ ಕಾರಣರಾಗಿದ್ದಾರೆಂದು ಅರೋಪಿಸಿದರು. ಸಚಿವರು ಕೇವಲ ಕನಕಗಿರಿ ಸಂಬಂಧ ಅಲ್ಲಾ ಗಂಗಾವತಿಯ ಕೆಲ ಭಾಗವು ಸಹ ಸಚಿವರ ವ್ಯಾಪ್ತಿಗೆ ಬರುತ್ತದೆ. ಆದರೆ ಇವರು ಪಕ್ಷಕ್ಕೆ ದುಡಿದವರನ್ನು ಬಿಟ್ಟು ಅನ್ಯ ಪಕ್ಷದವರಿಗೆ ಮಣಿ ಹಾಕಿ ನೇಮಕ ಮಾಡಿದ್ದಾರೆಂದು ಅಕ್ರೋಶ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಬೂತ್ ಮಟ್ಟದ ಪ್ರತಿನಿಧಿಯನ್ನಾಗಿ ಸಂಸದ ರಾಜಶೇಖರ್ ಹಿಟ್ನಾಳ್ ಅವರನ್ನು ನೇಮಕ ಮಾಡಿದ್ದಾರೆ. ಗಂಗಾವತಿಯಲ್ಲಿ ಯಾವ ನಾಯಕರು ಇಲ್ಲವೇ ಎಂದು ಪ್ರಶ್ನೆಸಿದರು. ಆಯಾ ಕ್ಷೇತ್ರದ ಕಾಂಗ್ರೆಸ್ ಶಾಸಕರಿಗೆ ಬೂತ್ ಮಟ್ಟದ ಪ್ರತಿನಿಧಿಯಾಗಿ ಮಾಡಿದ್ದಾರೆ. ಪರಾಭವಗೊಂಡವರಿಗೆ ಏಕೆ ಅಧಿಕಾರ ನೀಡಿಲ್ಲ. ಸಂಸದರು ಇದನ್ನು ಅರ್ಥೈಸಿಕೊಳ್ಳ ಬೇಕಾಗಿತ್ತು ಎಂದರು. ಇನ್ನು ಎರಡು ವರ್ಷ ಅಧಿಕಾರ ಇದೆ. ಕಾಂಗ್ರೆಸ್ ನಾಯಕರುಗಳು ಸ್ಥಳೀಯರನ್ನು ಕಡೆಗಣಿಸಿದರೆ ಬರುವ ಚುನಾವಣೆಯಲ್ಲಿ ಕಾರ್ಯಕರ್ತರೆ ಪಾಠ ಕಲಿಸುವುದು ನೂರಕ್ಕೆ ನೂರು ಸತ್ಯ ಎಂದರು.