ಗಂಡ ಇಷ್ಟ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; 'ಯಾರಿಗೆ ಬೇಕು ಈ ಲೋಕ'ವೆಂದು ಲೈವ್‌ನಲ್ಲಿ ನೇಣಿಗೆ ಶರಣಾದ ಗೃಹಿಣಿ!

Published : Dec 22, 2025, 04:22 PM IST
Ballari Self death

ಸಾರಾಂಶ

ಬಳ್ಳಾರಿಯ ಹುಸೇನ್ ನಗರದಲ್ಲಿ ಮುನ್ನಿ ಎಂಬ 23 ವರ್ಷದ ಗೃಹಿಣಿ ವಿಡಿಯೋ ಮಾಡುತ್ತಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವೈಮನಸ್ಸು ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಬಳ್ಳಾರಿ (ಡಿ.22): ಜಿಲ್ಲೆಯ ಹುಸೇನ್ ನಗರದಲ್ಲಿ ಅತ್ಯಂತ ಮನಕಲಕುವ ಘಟನೆಯೊಂದು ನಡೆದಿದ್ದು, ಯುವ ಗೃಹಿಣಿಯೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಲೇ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಜೀವನದ ನೋವುಗಳನ್ನು ವಿಡಿಯೋದಲ್ಲಿ ಹೇಳಿಕೊಳ್ಳುತ್ತಲೇ ಪ್ರಾಣ ಕಳೆದುಕೊಂಡ ಈ ಲೈವ್ ಆತ್ಮ*ಹತ್ಯೆ ಪ್ರಕರಣ ಇಡೀ ನಗರವನ್ನು ಬೆಚ್ಚಿಬೀಳಿಸಿದೆ.

ಘಟನೆಯ ವಿವರ

ಬಳ್ಳಾರಿಯ ಹುಸೇನ್ ನಗರ ನಿವಾಸಿ ಮುನ್ನಿ (23) ಆತ್ಮ*ಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಮುನ್ನಿ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ಕೌಟುಂಬಿಕ ಕಾರಣಗಳಿಂದಾಗಿ ಕಳೆದ ಆರು ತಿಂಗಳಿನಿಂದ ಪತಿಯಿಂದ ದೂರವಿದ್ದ ಮುನ್ನಿ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಅವಧಿಯಲ್ಲಿ ಅವರಿಗೆ ಮೊಹಮ್ಮದ್ ಶೇಕ್ಷಾವಲ್ಲಿ ಎಂಬ ಯುವಕನ ಪರಿಚಯವಾಗಿ ಸ್ನೇಹ ಬೆಳೆದಿತ್ತು.

ವೀಡಿಯೋ ಮಾಡಿ ಸಾವಿಗೆ ಶರಣು

ಆತ್ಮ*ಹತ್ಯೆಗೂ ಮುನ್ನ ಮುನ್ನಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಅದರಲ್ಲಿ ತನಗಾದ ನೋವು ಮತ್ತು ಸಂಕಟಗಳನ್ನು ವಿವರಿಸುತ್ತಲೇ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡುವವರ ಕಣ್ಣಾಲಿಗಳು ಒದ್ದೆಯಾಗುವಂತಿವೆ. ಕಳೆದ ಆರು ತಿಂಗಳಿಂದ ಪತಿಯಿಂದ ದೂರವಿದ್ದ ಸಂಕಟದ ನಡುವೆಯೇ, ಈ ಹೊಸ ಸ್ನೇಹದಲ್ಲೂ ವೈಮನಸ್ಸು ಉಂಟಾಗಿದ್ದು ಸಾವಿಗೆ ಪ್ರೇರಣೆಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕುಟುಂಬಸ್ಥರ ಗಂಭೀರ ಆರೋಪ

ಮುನ್ನಿ ಅವರ ಸಾವಿಗೆ ಮೊಹಮ್ಮದ್ ಶೇಕ್ಷಾವಲ್ಲಿ ಅವರೇ ನೇರ ಕಾರಣ ಎಂದು ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಇವರಿಬ್ಬರ ನಡುವೆ ಇತ್ತೀಚೆಗೆ ದೊಡ್ಡ ಮಟ್ಟದ ವೈಮನಸ್ಸು ಉಂಟಾಗಿತ್ತು. ಇದೇ ಕಾರಣಕ್ಕೆ ಮನನೊಂದ ಮುನ್ನಿ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ. ಶೇಕ್ಷಾವಲ್ಲಿ ಮುನ್ನಿ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದನೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ದೂರು ದಾಖಲು

ಸ್ಥಳಕ್ಕೆ ಭೇಟಿ ನೀಡಿದ ಬಳ್ಳಾರಿಯ ಗಾಂಧಿ ನಗರ ಠಾಣೆಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮುನ್ನಿ ರೆಕಾರ್ಡ್ ಮಾಡಿದ ವಿಡಿಯೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರೀತಿ ಅಥವಾ ಸ್ನೇಹದ ಹೆಸರಿನಲ್ಲಿ ನಡೆದ ವಂಚನೆಯೇ ಅಥವಾ ವೈಯಕ್ತಿಕ ಕಲಹವೇ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸೂಚನೆ: ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ನಿಮಗೇನಾದರೂ ಮಾನಸಿಕ ಒತ್ತಡವಿದ್ದರೆ ಅಥವಾ ಇಂತಹ ಆಲೋಚನೆಗಳು ಬರುತ್ತಿದ್ದರೆ ತಕ್ಷಣವೇ ಸಹಾಯವಾಣಿಗಳಿಗೆ ಕರೆ ಮಾಡಿ (ಉದಾ: 104 ಅಥವಾ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯಿರಿ).

PREV
Read more Articles on
click me!

Recommended Stories

ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಂಗಮ: ಶ್ರೀ ಶ್ರೀ ರವಿಶಂಕರ್ ನೇತೃತ್ವದಲ್ಲಿ 1.21 ಕೋಟಿ ಜನರಿಂದ ಏಕಕಾಲಕ್ಕೆ ಧ್ಯಾನ!
ಡಿಜಿಟಲ್ ಬ್ಯಾನ್ ಮಾಡಿ ದೇಶಕ್ಕೆ ಮಾದರಿಯಾದ ಗಡಿಗ್ರಾಮ: ಪ್ರತಿನಿತ್ಯ ಮೊಬೈಲ್, ಟಿವಿ 2 ಗಂಟೆ ಬಂದ್!