ಕೊಪ್ಪಳ: ಜನಿಸಿದಾಗ ಹೆಣ್ಣಾಗಿದ್ದ ಕೂಸು, ಮೃತಪಟ್ಟಾಗ ಗಂಡಾಯಿತಾ?

By Kannadaprabha NewsFirst Published Oct 2, 2024, 11:10 PM IST
Highlights

ಜನಿಸಿದಾಗ ತಾಯಿ ಮತ್ತು ಸಂಬಂಧಿಕರಿಗೆ ಹೆಣ್ಣು ಮಗು ಎಂದೇ ಹೇಳಲಾಗಿದೆ. ಆದರೆ, ಮಂಗಳವಾರ ಚಿಕಿತ್ಸೆಗೆಂದು ದಾಖಲಾಗಿದ್ದ ಮಗು ಸಾವನ್ನಪ್ಪಿದೆ ಎಂದು ಮರಳಿ ಮೃತ ಕೂಸಿನ ಶವ ನೀಡಿದ್ದಾರೆ. ಆದರೆ ಗಂಡು ಶಿಶುವಿನ ಶವ ನೀಡಿದ್ದರಿಂದ ಪಾಲಕರು ಮತ್ತು ಸಂಬಂಧಿಕರಿಗೆ ತೀವ್ರ ಆಘಾತವಾಗಿದೆ. ನಮ್ಮ ಮಗು ಹೆಣ್ಣು ಮಗುವಾಗಿದ್ದು, ಇದು ಅಲ್ಲವೇ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. 

ಕೊಪ್ಪಳ(ಅ.02):  ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದಾಗ ಹೆಣ್ಣಾಗಿದ್ದ ಕೂಸು, ಚಿಕಿತ್ಸೆಗೆಂದು ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ನೀಡಿದಾಗ ಗಂಡಾಗಿರುವ ಯಡವಟ್ಟು ಜಿಲ್ಲಾ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ತಬ್ಬಿಬ್ಬಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ. 24 ಗಂಟೆಯೊಳಗೆ ವರದಿ ನೀಡುವಂತೆಯೂ ಸೂಚನೆ ನೀಡಲಾಗಿದೆ.

ಆಗಿದ್ದೇನು?:

Latest Videos

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಳ್ಳಿ ಗ್ರಾಮದ ನಿವಾಸಿ ಗೌರಿ ಎಂಬವರು ಕೊಪ್ಪಳ ನಗರದಲ್ಲಿರುವ ತಾಯಿ ಮತ್ತು ಹೆರಿಗೆ ಆಸ್ಪತ್ರೆಗೆ ಸೆ. 23ರಂದು ದಾಖಲಾಗುತ್ತಾಳೆ. ಸೆ. 25ರಂದು ಹೆರಿಗೆಯಾಗುತ್ತದೆ. ಹೆರಿಗೆಯಾದ ಬಳಿಕ ಜನಿಸಿದ ಕೂಸು ತೂಕ ಕಡಿಮೆ ಇರುವುದರಿಂದ ಮಕ್ಕಳ ಘಟಕಕ್ಕೆ ಮಗುವನ್ನು ರವಾನೆ ಮಾಡಲಾಗುತ್ತದೆ.

ಸಿಎಂರಿಂದ ಭಂಡತನ ಪ್ರದರ್ಶನ, ಆಪಾದನೆ ಬಂದ ಮೇಲೆ ಮರಳಿ ಕೊಡೋ ಚಾಳಿ ಬೆಳೆಸಿಕೊಂಡ ಸಿದ್ದು: ದೊಡ್ಡನಗೌಡ ಪಾಟೀಲ್

ಜನಿಸಿದಾಗ ತಾಯಿ ಮತ್ತು ಸಂಬಂಧಿಕರಿಗೆ ಹೆಣ್ಣು ಮಗು ಎಂದೇ ಹೇಳಲಾಗಿದೆ. ಆದರೆ, ಮಂಗಳವಾರ ಚಿಕಿತ್ಸೆಗೆಂದು ದಾಖಲಾಗಿದ್ದ ಮಗು ಸಾವನ್ನಪ್ಪಿದೆ ಎಂದು ಮರಳಿ ಮೃತ ಕೂಸಿನ ಶವ ನೀಡಿದ್ದಾರೆ. ಆದರೆ ಗಂಡು ಶಿಶುವಿನ ಶವ ನೀಡಿದ್ದರಿಂದ ಪಾಲಕರು ಮತ್ತು ಸಂಬಂಧಿಕರಿಗೆ ತೀವ್ರ ಆಘಾತವಾಗಿದೆ. ನಮ್ಮ ಮಗು ಹೆಣ್ಣು ಮಗುವಾಗಿದ್ದು, ಇದು ಅಲ್ಲವೇ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಅಚ್ಚರಿ ಎಂದರೆ ಮಗುವಿನ ದಾಖಲೆಯಲ್ಲಿಯೂ ಸಹ ಹೆಣ್ಣು ಮಗು ಎಂದೇ ನಮೂದಿಸಲಾಗಿದೆ. ಇದು, ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದ್ದು, ಪಾಲಕರು ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಮ್ಮ ಮಗು ನಮಗೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

ಹೊಸಪೇಟೆ- ಹುಬ್ಬಳ್ಳಿ ಚತುಷ್ಪಥ ರೈಲು ಮಾರ್ಗ ಶೀಘ್ರ ನಿರ್ಮಾಣ: ರಾಜಶೇಖರ ಹಿಟ್ನಾಳ

ಸಮಿತಿ ರಚನೆ: 

ಘಟನೆಯಿಂದ ಎಚ್ಚೆತ್ತಿರುವ ತಾಯಿ ಮತ್ತು ಹೆರಿಗೆ ಆಸ್ಪತ್ರೆಯ ವೈದ್ಯರು ಈ ಕುರಿತು ಸಮಿತಿ ರಚನೆ ಮಾಡಿದ್ದಾರೆ. ತಪ್ಪಾಗಿದ್ದು ಎಲ್ಲಿ ಎನ್ನುವುದನ್ನು ಪತ್ತೆ ಮಾಡಿ, 24 ಗಂಟೆಯೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿ, ಈಗ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಮೃತ ಮಗುವಿನ ಮೂಲ ಪತ್ತೆ ಮಾಡುವ ಕಾರ್ಯ ಭರದಿಂದ ನಡೆದಿದೆ.

ಗೌರಿ ಅವರಿಗೆ ಜನಿಸಿದ ಮಗುವೇ ಮೃತಪಟ್ಟಿದೆಯಾ ಅಥವಾ ಬೇರೆ ಸಾವನ್ನಪ್ಪಿದ ಮಗು ನೀಡಿದರಾ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ. ಗಂಡು ಮಗುವೆ ಆಗಿದ್ದು, ಅದನ್ನು ನಮೂದಿಸುವಾಗ ತಪ್ಪಾಗಿದೆ. ಆದರೂ ಈ ಬಗ್ಗೆ ತನಿಖೆ ನಡೆಸಿ, 24 ಗಂಟೆಯೊಳಗೆ ವರದಿ ನೀಡಲು ತನಿಖಾ ಸಮಿತಿಗೆ ನೀಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಶಸ್ತ್ರ ಚಿಕಿತ್ಸಕ ಕೃಷ್ಣಾ ಓಂಕಾರ ತಿಳಿಸಿದ್ದಾರೆ.  

click me!