ಮಂಗಳೂರು: ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ..!

By Kannadaprabha NewsFirst Published Sep 11, 2019, 10:42 AM IST
Highlights

ಮಂಗಳೂರಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ ಮನೆ ಮಾಡಿತ್ತು. ಪೊಲೀಸ್ ಸಿಬ್ಬಂದಿ ಹೂ, ಹಣ್ಣು, ಬಗೆ ಬಗೆಯ ತಿಂಡಿಗಳ ತಟ್ಟೆಯೊಂದಿಗೆ ಹಾಜರಾಗಿದ್ರು. ಪೊಲೀಸ್ ಠಾಣೆಯಲ್ಲಿ ತುಳುನಾಡಿನ ಸೀಮಂತ ಸಂಪ್ರದಾಯ ಅದ್ಧೂರಿಯಾಗಿಯೇ ನಡೆದಿದೆ.

ಮಂಗಳೂರು(ಸೆ.11): ತುಳುನಾಡ ಕಟ್ಟು ಕಟ್ಟಳೆಗಳಲ್ಲಿ ಸೀಮಂತ ಕೂಡಾ ಒಂದು. ಮದುವೆಯಾದ ಹೆಣ್ಮಗಳು ಗರ್ಭಿಣಿಯಾದ ಏಳನೇ ತಿಂಗಳಲ್ಲಿ ಸೀಮಂತ ಹಾಕುವ ಕ್ರಮವಿದೆ. ಮಂಗಳವಾರ ಇಂಥ ಸೀಮಂತ ವಿಟ್ಲ ಪೊಲೀಸ್‌ ಠಾಣೆಯಲ್ಲಿಯೂ ಅದ್ಧೂರಿಯಾಗಿಯೇ ನಡೆಯಿತು.

ಅಂದ ಹಾಗೆ ಸೀಮಂತ ನಡೆದಿದ್ದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಕಳೆದ ಎರಡು ವರ್ಷದಿಂದ ಹೋಮ್‌ ಗಾರ್ಡ್‌ ಸಿಬ್ಬಂದಿ ಆಗಿರುವ ಪ್ರಸ್ತುತ ತುಂಬು ಗರ್ಭಿಣಿ ಮಲ್ಲಿಕಾ ಅವರಿಗೆ.

'ಮಂಗಳೂರಿನ ಫ್ಲೈಓವರ್ ನೋಡಿದ್ರೆ ನಳಿನ್ ಕೆಲಸ ಗೊತ್ತಾಗುತ್ತೆ'..!

ಕೊಡಂಗಾಯಿ ಪಳ್ಳಿಗದ್ದೆ ಕೊರಗಪ್ಪ ಗೌಡ ಇಂದಿರಾ ದಂಪತಿ ಪುತ್ರಿಯಾಗಿರುವ ಮಲ್ಲಿಕಾ ಅವರನ್ನು ಪುತ್ತೂರು ಕೆಮ್ಮಾಯಿಯ ಕೇಶವರಿಗೆ ವಿವಾಹ ಮಾಡಿಕೊಡಲಾಗಿತ್ತು. ಗಂಡನ ಮನೆಯಲ್ಲಿ ಕಳೆದ ತಿಂಗಳೇ ಸೀಮಂತವಾಗಿತ್ತು. ಆದರೆ ವಿಟ್ಲ ಪೊಲೀಸರು ತುಂಬು ಗರ್ಬಿಣಿ ಮಲ್ಲಿಕಾರಿಗೆ ಠಾಣೆಯಲ್ಲೇ ಸೀಮಂತ ಮಾಡುವ ಮೂಲಕ ವೈಶಿಷ್ಟ್ಯತೆ ಮೆರೆದಿದ್ದಾರೆ.

ವಿಟ್ಲ ಠಾಣಾಧಿಕಾರಿ ಯಲ್ಲಪ್ಪ ಹಾಗೂ ಸಿಬ್ಬಂದಿಗಳು ಮಲ್ಲಿಕಾ ಅವರಿಗೆ ಅದ್ಧೂರಿ ಸೀಮಂತ ಮಾಡಿಸಿದರು. ಮಹಿಳಾ ಪೊಲೀಸರು ಹಣೆಗೆ ಕುಂಕುಮದ ತಿಲಕವಿಟ್ಟು ತಲೆಗೆ ಚೆಂಡು ಮಲ್ಲಿಗೆ ತೊಡಿಸಿದರು. ಹೂವು ಸೀರೆ ಕೊಟ್ಟರು. ಎಲೆ ಅಡಕೆಯನ್ನು ಕೈಗೆ ನೀಡಿದರು. ಸಿಹಿ ವಿತರಿಸಿದರು. ಒಟ್ಟಿನಲ್ಲಿ ಗೌಜಿಯ ಸೀಮಂತಕ್ಕೆ ವಿಟ್ಲ ಠಾಣೆ ಸಾಕ್ಷಿಯಾಯಿತು.
ತುಳು ಟ್ವೀಟ್ ಅಭಿಯಾನಕ್ಕೆ ಅಣ್ಣಾಮಲೈ ಬೆಂಬಲ..!

click me!