ದತ್ತಪೀಠದಲ್ಲಿ ಗೋರಿ ದ್ವಂಸ ಹಾಗೂ ಭಗವಾಧ್ವಜ ನೆಟ್ಟ ಪ್ರಕರಣ, 7 ವರ್ಷದ ನಂತ್ರ ಮೊದಲ ವಿಚಾರಣೆ!

By Suvarna NewsFirst Published Jan 8, 2024, 6:34 PM IST
Highlights

ದತ್ತಪೀಠದಲ್ಲಿ ಗೋರಿ ದ್ವಂಸ ಹಾಗೂ ಭಗವದ್ವಜ ನೆಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ವರ್ಷದ ನಂತ್ರ ಮೊದಲ ವಿಚಾರಣೆ ನಡೆದಿದೆ. ಅರೋಪಿತರು  ಚಿಕ್ಕಮಗಳೂರು ಜೆಎಂಎಫ್ ಸಿ ನ್ಯಾಯಲಯಕ್ಕೆ ಹಾಜರಾಗಿದ್ದು, ವಿಚಾರಣೆಯನ್ನ ಕೋರ್ಟ್  ಫೆಬ್ರವರಿ 7 ಕ್ಕೆ ಮುಂದೂಡಿದೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜ.8): 2017ರಲ್ಲಿ ದತ್ತಜಯಂತಿ ವೇಳೆ ದತ್ತಪೀಠದಲ್ಲಿ ಗೋರಿ ದ್ವಂಸ ಪ್ರಕರಣ ಸಂಬಂಧ ಪೊಲೀಸರು 2023ರ ಅಕ್ಟೋಬರ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದ ಪ್ರಕರಣದ ವಿಚಾರಣೆಯನ್ನ ಚಿಕ್ಕಮಗಳೂರು ಜೆ.ಎಂ.ಎಫ್.ಸಿ. ಕೋರ್ಟ್ ಫೆಬ್ರವರಿ 7ಕ್ಕೆ ಮುಂದೂಡಿದೆ.

2017ರ ಡಿಸೆಂಬರ್ 3 ರಂದು ದತ್ತಜಯಂತಿ ವೇಳೆ ಹಿಂದೂ ಕಾರ್ಯಕರ್ತರು ಗೋರಿಗಳ ದ್ವಂಸ ಹಾಗೂ ನಿಷೇಧಿತ ಪ್ರದೇಶದಲ್ಲಿ ಭಗವಾಧ್ವಜ ಕಟ್ಟಿದ್ದಾರೆಂದು 14 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಆ ಪ್ರಕರಣ ಸಂಬಂಧ ಪೊಲೀಸರು ಸರ್ಕಾರ ಅನುಮತಿ ನೀಡಿದ ಬಳಿಕ ಕೋರ್ಟಿಗೆ 2023ರ ಅಕ್ಟೋಬರ್ ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಚಾರ್ಜ್ ಶೀಟ್ ಸಲ್ಲಿಕೆ ಹಿನ್ನೆಲೆ ಕೊರ್ಟ್ 14 ಜನರಿಗೂ ಇಂದು ಕೋರ್ಟಿಗೆ ಬರುವಂತೆ ಸಮನ್ಸ್ ನೀಡಿತ್ತು. 14 ಜನರಲ್ಲಿ ಇಂದು ಕೋರ್ಟಿಗೆ 12 ಜನ ಹಾಜರಾಗಿದ್ದರು. 

ವಿಚಾರಣೆಯನ್ನ ಫೆಬ್ರವರಿ 7 ಕ್ಕೆ ಮುಂದೂಡಿದ‌ ಕೋರ್ಟ್  : 
ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಸರ್ಕಾರ ದ್ವೇಷಪೂರಿತವಾಗಿ ಪೊಲೀಸರ ಮೂಲಕ ಈಗ ಚಾರ್ಜ್ ಶೀಟ್ ಸಲ್ಲಿಸಿ ಹಿಂದೂ ಕಾರ್ಯಕರ್ತರ ಹೋರಾಟವನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಇಂದು ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣವನ್ನ ಮುಂದಿನ ತಿಂಗಳು 7ನೇ ತಾರೀಖಿಗೆ ಮುಂದೂಡಿದೆ. 

ವಿಚಾರಣೆ ಬಳಿಕ ಆರೋಪಿಗಳ ಪರ ವಕೀಲ ಸುಧಾಕರ್ ಪೊಲೀಸರ ದೋಷಾರೋಪ ಪಟ್ಟಿಯಲ್ಲಿ ಸಾಕಷ್ಟು ಲೋಪದೋಷಗಳಿವೆ. ವಿಳಂಬ ತನಿಖೆ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಕೇಸ್ ಹಾಕಿದ್ದಾರೆ.   ಆದರೆ, ಅಲ್ಲಿ ಆಗಿರುವ ಘಟನೆಗೂ ಪೊಲೀಸರು ಹಾಕಿರುವ ಕೇಸಿಗೂ ಸಂಬಂಧವೇ ಇಲ್ಲ. ಅಂದು ದತ್ತಪೀಠದ ಘಟನೆ ಬಗ್ಗೆ ಪೊಲೀಸರು ಎಲ್ಲಾ ವಿಡಿಯೋ ಮಾಡಿದ್ದಾರೆ. ಆದರೆ, ಕೋರ್ಟಿಗೆ ಕೇವಲ ಫೋಟೋಗಳ ಸಿಡಿ ನೀಡಿದ್ದಾರೆ.

ವಿಳಂಬದ ಜೊತೆ ಸಾಕಷ್ಟು ಲೋಪದೋಷಗಳಿರುವ ಪೊಲೀಸರ ಚಾರ್ಜ್ ಶೀಟನ್ನ ಹೈಕೋರ್ಟಿನಲ್ಲಿ ಚಾಲೆಂಜ್ ಮಾಡ್ತೀವಿ ಎಂದಿದ್ದಾರೆ‌.ಪ್ರಕರಣದ ಎ1 ಆರೋಪಿ  ತುಡುಕೂರು ಮಂಜು ಮಾತಾಡಿ 2017ರಲ್ಲಿ ಸುಳ್ಳು ಪ್ರಕರಣವನ್ನು ದಾಖಲಿಸಿದ್ದರು,ಆ ಪ್ರಕರಣಕ್ಕೆ ಮತ್ತೆ ಇದೀಗ ಜೀವ ತುಂಬುವ ಕೆಲಸವನ್ನು ಇಂದಿನ ಸರ್ಕಾರ , ಗೃಹ ಇಲಾಖೆ ಮಾಡಿದೆ. ಹಲವು ವರ್ಷಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಸಿದೆ.ನಾವು ಇದನ್ನು ಪ್ರಶ್ನೆಸಿ ಹೈ ಕೋರ್ಟ್ ಮೊರೆ ಹೋಗಲಿದ್ದೇವೆ ಎಂದರು.

click me!