Latest Videos

ಅಯೋಧ್ಯೆ ರಾಮಮಂದಿರ ರಾಜಕೀಯ ಜೂಜಾಟ ಕೇಂದ್ರ: ಹಿರಿಯ ಸಾಹಿತಿ ದೇವನೂರ ಮಹಾದೇವ

By Kannadaprabha NewsFirst Published Jan 16, 2024, 2:00 AM IST
Highlights

ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮಮಂದಿರ ರಾಜಕೀಯ ಜೂಜಾಟದ ಕೇಂದ್ರ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು. 

ಮೈಸೂರು (ಜ.16): ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮಮಂದಿರ ರಾಜಕೀಯ ಜೂಜಾಟದ ಕೇಂದ್ರ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು. ನಗರದ ಅಬ್ದುಲ್ ನಜೀರ್ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಂಸ್ಥೆಯಲ್ಲಿ ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಬಯಲು ಬಳಗ ಆಯೋಜಿಸಿದ್ದ 90ರ ನಂತರದ ಕರ್ನಾಟಕ ರಾಜ್ಯ ಮಟ್ಟದ ವಿಚಾರ ಕಮಟ 2ನೇ ದಿನದ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಳ್ಳಿ ಹಳ್ಳಿಯಲ್ಲಿನ ರಾಮಮಂದಿರಗಳು ಸಾಮಾನ್ಯವಾಗಿ ಜೂಜಾಟದ ಕೇಂದ್ರಗಳು. ಈಗ ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾದ ರಾಮಮಂದಿರವೂ ರಾಜಕಾರಣದ ಜೂಜಾಟದ ಕೇಂದ್ರ. 

ಇಂದು ಮೌಲ್ಯ ಮತ್ತು ಅಪಮೌಲ್ಯದ ನಡುವೆ ಘರ್ಷಣೆ ನಡೆಯುತ್ತಿದೆ. ಅಪೂರ್ಣ ರಾಮ ಮಂದಿರ ಉದ್ಘಾಟನೆ ದೇಶದ ಮೆದುಳು ತಿನ್ನುತ್ತಿದೆ. ಸನಾತನಕ್ಕೆ ಮೌಲ್ಯ ಇರುವಂತೆ ಅಪಮೌಲ್ಯಗಳಿವೆ ಎಂದರು. ಸನಾತನ ಎಂಬುದು ಹಿಂದಿನಿಂದ ಬಂದದ್ದು. ಅತಿ ಆಸೆ ಗತಿಕೇಡು ಎಂಬ ಮಾತು ಸನಾತನವಾದದ್ದು. ಗರ್ವಭಂಗ ಇನ್ನೊಂದು ಮಾತು. ಇದು ಆಂಜನೇಯನನ್ನು ಅಲುಗಾಡಿಸಲಾಗದ ಭೀಮ, ಮಗನಿಂದಲೇ ಸೋತ ಅರ್ಜುನ ಇತ್ಯಾದಿ ಉದಾಹರಣೆ ಕೊಡಬಹುದು. ಹಾಗೇಯೇ ಹಿಂದೂ ಅನ್ನುವುದು ಸಹಜ. ಹಿಂದೂತ್ವ ಎನ್ನುವುದು ನಾನತ್ವ ಎಂದು ಅವರು ಬಣ್ಣಿಸಿದರು.

ಚುನಾವಣೆ ಸಮಯದಲ್ಲಿ ಮಾತ್ರ ರಾಮಮಂದಿರ ಚರ್ಚೆ: ಸಚಿವ ಸಂತೋಷ ಲಾಡ್

ರಾಮ ನ್ಯಾಯದ ಗಂಟೆ ಕಟ್ಟಿಸಿದ್ದ. ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳು ಗಂಟೆ ಎಳೆದು ನ್ಯಾಯ ಕೇಳಬಹುದಿತ್ತು. ಈಗ ಉದ್ಘಾಟನೆ ಆಗಲಿರುವ ದೇಗುಲದ 4 ದಿಕ್ಕಿನಲ್ಲೂ 4 ಗಂಟೆ ಕಟ್ಟಿಸಬೇಕು. ಮಾತು ಕೊಟ್ಟವರು ಮಾತು ನಡೆಸೋದು ಮೌಲ್ಯ. ಮಾತನ್ನು ಕಾಲು ಕಸ ಮಾಡಬಾರದು ಎಂದು ಅವರು ತಿಳಿಸಿದರು. ಮನುಷ್ಯರನ್ನು ಮೌಲ್ಯಮಾಪನ ಮಾಡದ ನಾವುಗಳು ಎಚ್ಚರ ಕಳೆದುಕೊಂಡಿದ್ದೇವೆ. ಆದಿವಾಸಿ ಸಮುದಾಯ ಎಚ್ಚರವಾಗಿದೆ. ಇವರು ತಮ್ಮ ದೇವರನ್ನು ಮೌಲ್ಯಮಾಪನ ಮಾಡುತ್ತಾರೆ. ಆದಿವಾಸಿಗಳು ಕೊಟ್ಟ ಮಾತು ತಪ್ಪಿದ, ಕಷ್ಟಕ್ಕೆ ಆಗದ ದೈವವನ್ನೇ ದೇಗುಲದಿಂದ ಆಚೆ ಹಾಕುತ್ತಾರೆ. 

ಪ್ಲೇಗ್ ಬಂದು ಪ್ರಾಣದ ಹಂಗು ತೊರೆದು ಹೋರಾಡುವ ಡಾ. ಖಾನ್ ದೈವವಾಗಿ ಪೂಜಿಸಲ್ಪಡುತ್ತಾನೆ. ಆದಿವಾಸಿಗಳ ಈ ಬಳುವಳಿಯನ್ನು ತಮದಾಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. 2024ರ ನಿರ್ಣಾಯಕ ಲೋಕಸಭಾ ಚುನಾವಣೆ ನಮ ಮುಂದಿದೆ. ಈಗ ಪಾರ್ಲಿಮೆಂಟ್ ಮೌಲ್ಯಮಾಪನ ಮಾಡಬೇಕು. ಹಾಲಿ ಜನಪ್ರತಿನಿಧಿಗಳ ಮೌಲ್ಯಮಾಪನ ಮಾಡಿದರೆ ಶೇ. 90 ಸದಸ್ಯರನ್ನು ಸಂಸತ್ತಿನಿಂದ ಹೊರಹಾಕಬೇಕಾಗುತ್ತದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಇದಾಗಬೇಕು ಎಂದರು.

ಶಿವಲಿಂಗೇಗೌಡ ಸ್ಪರ್ಧೆ ಇಲ್ಲದೆ ಕಾಂಗ್ರೆಸ್‌ ಗೆಲುವಿಲ್ಲ: ಮಾಜಿ ಸಚಿವ ಬಿ.ಶಿವರಾಮು

2024ರ ಚುನಾವಣೆಗೂ ಮುನ್ನ ಉದ್ಯೋಗ, ಆರೋಗ್ಯ ಸಹಿತ ಎಲ್ಲವನ್ನೂ ಮೌಲ್ಯಮಾಪನ ಮಾಡಬೇಕು. ಏನನ್ನು ಪೂರೈಸಿದರು ಏನನ್ನೂ ಪೂರೈಸಲಿಲ್ಲ ಚರ್ಚೆಯ ವಿಷಯಗಳಾಗಬೇಕು ಎಂದು ಅವರು ಹೇಳಿದರು. ಎರಡನೇ ದಿನದ 2ನೇ ಗೋಷ್ಠಿಯಲ್ಲಿ ಸಿದ್ದನಗೌಡ ಪಾಟೀಲ- ರಾಜಕೀಯ, ಮಾವಳ್ಳಿ ಶಂಕರ್- ದಲಿತ ಚಳವಳಿ, ಸಬಿಹಾ ಭೂಮಿಗೌಡ- ಮಹಿಳಾ ಚಳವಳಿ, ಬಗಲಪುರ ನಾಗೇಂದ್ರ-ರೈತ ಚಳವಳಿ ವಿಷಯ ಮಂಡಿಸಿದರು. ಬಂಜಗೆರೆ ಜಯಪ್ರಕಾಶ್ ಇದ್ದರು.

click me!