ಬಿಜೆಪಿ ಜಯಭೇರಿ: ಹರಕೆ ತೀರಿಸಿ ಬಬ್ಬುಸ್ವಾಮಿಗೆ ನೇಮೋತ್ಸವ

By Web DeskFirst Published Feb 1, 2019, 11:58 PM IST
Highlights

ಉಡುಪಿ ಜಿಲ್ಲೆಯ ಬಿಜೆಪಿ ಮುಖಂಡರು ಹರಕೆ ತೀರಿಸಿದ್ದಾರೆ. ಬಿಜೆಪಿ 5 ಸ್ಥಾನಗಳನ್ನು ಗೆದ್ದಿದ್ದಕ್ಕೆ ನೇಮೋತ್ಸವ ನಡೆಸಿಕೊಡಲಾಗಿದೆ.

ಉಡುಪಿ[ಫೆ.01]   ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಈ ಕಾರಣಕ್ಕೆ ಶುಕ್ರವಾರ ಕಡಿಯಾಳಿಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯ ಸಮೀಪದ ಕುಂಜಿಬೆಟ್ಟು ಬಬ್ಬುಸ್ವಾಮಿ ದೈವಕ್ಕೆ ಧರ್ಮನೇಮೋತ್ಸವ ನಡೆಸಲಾಯಿತು.

ಈ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೇ ಬಬ್ಬುಸ್ವಾಮಿಗೆ ನೇಮ (ದೈವವು ಪಾತ್ರಿಯ ಮೈಮೇಲೆ ಆವೇಶಗೊಂಡು, ವಾದ್ಯ, ನರ್ತನದ ಮೂಲಕ ರಾತ್ರಿ ಇಡೀ ನಡೆಯುವ ಜನಪದ ಆರಾಧನೆ) ಮತ್ತು ಸಾರ್ವಜನಿಕ ಅನ್ನಸಂಪರ್ತಣೆ ನಡೆಸುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಈ ಹರಕೆ ಹೇಳಿದ್ದರು.

ರಾಮಮಂದಿರಕ್ಕಾಗಿ ಸರಣಿ ಉಪವಾಸಕ್ಕೆ ಸಿದ್ಧರಾಗಿ: ಪೇಜಾವರ ಸ್ವಾಮೀಜಿ ಕರೆ

ಅದರಂತೆ ಶುಕ್ರವಾರ ಮದ್ಯಾಹ್ನ ಕಡಿಯಾಳಿ ಮಹಿಷಮರ್ದಿನಿ ದೇವಾಲಯದಲ್ಲಿ ಹೂವಿನ ಪೂಜೆ ಕೂಡ ನಡೆಸಿ, ಸುಮಾರು 6 ಸಾವಿರ ಮಂದಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಸಂಜೆ ಬಬ್ಬುಸ್ವಾಮಿಯ ಕತ್ತಿ, ಗಂಟೆ ಇತ್ಯಾದಿ ಭಂಡಾರವನ್ನು ವೈಭವದ ಮೆರವಣಿಗೆಯಲ್ಲಿ ತರಲಾಯಿತು. ರಾತ್ರಿಯಿಡೀ ಮುಂಜಾನೆವರೆಗೆ ವಿಜೃಂಭಣೆಯಿಂದ ನೇಮ ನಡೆಯಿತು. 

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಮೆಂಡನ್, ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ಇತರ ಶಾಸಕರು, ಮುಖಂಡರು ಭಾಗವಹಿಸಿದ್ದರು.

click me!