Bengaluru: ಮೆಟ್ರೋ ಅವಘಡ, ಮಾಲಿನ್ಯ ತಡೆಗೆ ತಜ್ಞರ ನೇಮಕ

Published : Mar 13, 2023, 11:54 AM IST
Bengaluru: ಮೆಟ್ರೋ ಅವಘಡ, ಮಾಲಿನ್ಯ ತಡೆಗೆ ತಜ್ಞರ ನೇಮಕ

ಸಾರಾಂಶ

ಮೆಟ್ರೋ ಕಾಮಗಾರಿ ಮಾರ್ಗಗಳಲ್ಲಿ ಅವಘಡ ಮತ್ತು ಮಾಲಿನ್ಯ ನಿಯಂತ್ರಿಸಲು ಮೆಟ್ರೋ ನಿಗಮ ಐಐಎಸ್‌ಸಿ ತಜ್ಞರಿಂದ ವರದಿ ಪಡೆಯಲು ನಿರ್ಧರಿಸಿದ್ದು, ಈ ಸಂಬಂಧ ರಚನೆಯಾಗಿರುವ ಮೂವರು ತಜ್ಞರ ತಂಡ ನಾಲ್ಕೈದು ದಿನಗಳಲ್ಲಿ ಪರಿಶೀಲನೆ ಆರಂಭಿಸಲಿದೆ. 

ಬೆಂಗಳೂರು (ಮಾ.13): ಮೆಟ್ರೋ ಕಾಮಗಾರಿ ಮಾರ್ಗಗಳಲ್ಲಿ ಅವಘಡ ಮತ್ತು ಮಾಲಿನ್ಯ ನಿಯಂತ್ರಿಸಲು ಮೆಟ್ರೋ ನಿಗಮ ಐಐಎಸ್‌ಸಿ ತಜ್ಞರಿಂದ ವರದಿ ಪಡೆಯಲು ನಿರ್ಧರಿಸಿದ್ದು, ಈ ಸಂಬಂಧ ರಚನೆಯಾಗಿರುವ ಮೂವರು ತಜ್ಞರ ತಂಡ ನಾಲ್ಕೈದು ದಿನಗಳಲ್ಲಿ ಪರಿಶೀಲನೆ ಆರಂಭಿಸಲಿದೆ. ಕಳೆದ ಜನವರಿಯಲ್ಲಿ ನಿರ್ಮಾಣ ಹಂತದ ಪಿಲ್ಲರ್‌ ಕುಸಿದು ತಾಯಿ ಮಗು ಮೃತಪಟ್ಟ ಪ್ರಕರಣ, ಎಂ.ಜಿ.ರಸ್ತೆಯಲ್ಲಿ ಭೂಗತ ಮಾರ್ಗ ಹಾದು ಹೋದ ಸನಿಹವೇ ಉಂಟಾದ ಭೂಕುಸಿತ, ಬ್ಯಾರಿಕೇಡ್‌ಗೆ ಕಾರಿನ ಡಿಕ್ಕಿ ಹಾಗೂ ಈಚೆಗೆ ಮೆಟ್ರೋ ಮಾರ್ಗದ ಮೇಲಿಂದ ಕಬ್ಬಿಣದ ರಾಡ್‌ಗಳು ಕಾರಿನ ಮೇಲೆ ಬಿದ್ದ ಪ್ರಕರಣ ಮೆಟ್ರೋ ಸುರಕ್ಷತೆ ಕುರಿತು ಪ್ರಶ್ನೆಗೆ ಕಾರಣವಾಗಿದೆ. 

ಇವೆಲ್ಲದರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಹೆಚ್ಚಿಸಲು ತಜ್ಞರ ವರದಿ ಪಡೆಯಲು ನಿಗಮ ಮುಂದಾಗಿದೆ. ಐಐಎಸ್‌ಸಿಯು ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಜೆ.ಎಂ.ಚಂದ್ರಕಿಶನ್‌, ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಸಹ ಪ್ರಾಧ್ಯಾಪಕ ಲಕ್ಷ್ಮೇನಾರಾಯಣ ರಾವ್‌ ಮತ್ತು ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದಲ್ಲಿ ಹಿಂದೆ ಕರ್ತವ್ಯದಲ್ಲಿದ್ದ ರಮೇಶ್‌ ಬಾಬು ನಾರಾಯಣಪ್ಪ ಅವರನ್ನು ಒಳಗೊಂಡ ತಂಡವನ್ನು ನಿಯೋಜಿಸಿದೆ. ಮುಂದಿನ ಎರಡೂವರೆ ತಿಂಗಳಲ್ಲಿ ಸುರಕ್ಷತೆ ಕುರಿತ ವರದಿ ನೀಡುವಂತೆ ಕೋರಿದ್ದು, ಈ ವರದಿ ಆಧರಿಸಿ ಬದಲಾವಣೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಜನರ ಜಮೀನಿನ ದರೋಡೆಕೋರನಂತೆ ಸರ್ಕಾರ ವರ್ತಿಸಬಾರದು: ಹೈಕೋರ್ಟ್‌

ಮಾರ್ಗಗಳು: ತಂಡವು ಕೆ.ಆರ್‌.ಪುರದಿಂದ ಸಿಲ್ಕ್‌ ಬೋರ್ಡ್‌ವರೆಗಿನ ನಿರ್ಮಾಣ ಹಂತದಲ್ಲಿರುವ ಹೊರ ವರ್ತುಲ ರಸ್ತೆ ಮಾರ್ಗ (ಒಆರ್‌ಆರ್‌), ಕೆ.ಆರ್‌.ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ವಿಮಾನ ನಿಲ್ದಾಣ ಮಾರ್ಗ ಹಾಗೂ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಸುರಂಗ ಮಾರ್ಗವನ್ನು ತಂಡ ಪರಿಶೀಲಿಸಲಿದೆ.

ಮಾಲಿನ್ಯ ನಿಯಂತ್ರಣ: ಇದಲ್ಲದೆ ಮೆಟ್ರೋ ಕಾಮಗಾರಿಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಅಧ್ಯಯನ ನಡೆಸಲಾಗುವುದು. ಸ್ಥಳದ ಸುತ್ತಮುತ್ತಲಿನ ಶಾಲಾ ಕಾಲೇಜು, ಆಸ್ಪತ್ರೆಗಳಿಗೆ ಉಂಟಾಗುತ್ತಿರುವ ತೊಂದರೆ, ರಾತ್ರಿ ವೇಳೆಯ ಕೆಲಸದಿಂದ ಎದುರಾಗುವ ಸಮಸ್ಯೆಗಳ ಬಗ್ಗೆಯೂ ವರದಿ ನೀಡಲಿದ್ದೇವೆ ಎಂದು ತಜ್ಞರು ತಿಳಿಸಿದ್ದಾರೆ. ಕೆಐಎ- ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನ 2ಎ ಮತ್ತು 2ಬಿ ಮೆಟ್ರೋ ಹಂತಗಳಲ್ಲಿ 12 ಮೀಟರ್‌ಗಿಂತ ಎತ್ತರದ ಪಿಲ್ಲರ್‌ ನಿರ್ಮಾಣ ಸ್ಥಗಿತಗೊಳಿಸಲಾಗಿದೆ. ಜತೆಗೆ ಪಿಲ್ಲರ್‌ ಚೌಕಟ್ಟುಗಳ ಬಲವರ್ಧನೆಗೆ ಕ್ರಮ ವಹಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ

ಏನೇನು ತಪಾಸಣೆ: ಸದ್ಯ ತಂಡ ಬಿಎಂಆರ್‌ಸಿಎಲ್‌ ಗುತ್ತಿಗೆದಾರರಿಗೆ ಒದಗಿಸಿದ ಮಾರ್ಗಸೂಚಿ ದಾಖಲೆಗಳ ಅಧ್ಯಯನ ಕೈಗೊಂಡಿದೆ. ಮೊದಲು ಯಾವ ಮಾರ್ಗದ ತಪಾಸಣೆ ಆರಂಭಿಸಬೇಕು ಎಂಬುದನ್ನು ನಿರ್ಧರಿಸಿ ಬರುವ ಶುಕ್ರವಾರದಿಂದ ಸ್ಥಳ ಪರಿಶೀಲನೆ ನಡೆಸಲಿದೆ. ಮೆಟ್ರೊ ಪಿಲ್ಲರ್‌, ವಯಡಕ್ಟ್ ಅಳವಡಿಕೆ ಸೇರಿ ಕಾಮಗಾರಿ ನಡೆವ ಸ್ಥಳಗಳಲ್ಲಿ ಗುತ್ತಿಗೆದಾರರು ಮಾರ್ಗಸೂಚಿಯಂತೆ ಬ್ಯಾರಿಕೇಡ್‌ ಇಟ್ಟಿದ್ದಾರೊ ಇಲ್ಲವೊ? ಸುರಕ್ಷತಾ ಫಲಕಗಳು ಅಳವಡಿಕೆ ಆಗಿದೆಯೆ? ಎಂಬುದನ್ನು ತಂಡ ಪರಿಶೀಲಿಸಲಿದೆ ಎಂದು ಪ್ರೊ.ಚಂದ್ರಕಿಶನ್‌ ತಿಳಿಸಿದರು. ಕಿರಿದಾದ ಮಾರ್ಗದಲ್ಲಿ ಸಾರ್ವಜನಿಕ ಸಂಚಾರಕ್ಕೆ ಉಂಟಾಗುತ್ತಿರುವ ಸಮಸ್ಯೆ, ಜಂಕ್ಷನ್‌ಗಳಲ್ಲಿ ಜನರ ಓಡಾಟವನ್ನು ಗಮನಿಸಲಾಗುವುದು. ಸ್ಥಳ ಪರಿಶೀಲನೆ ವೇಳೆ ಬಿಎಂಆರ್‌ಸಿಎಲ್‌ ಪ್ರತಿ ರೀಚ್‌ನ ಸೈಟ್‌ ಎಂಜಿನಿಯರ್‌ಗಳು ಇರಲಿದ್ದು, ಸುರಕ್ಷತೆ ಸಂಬಂಧ ಕೈಗೊಳ್ಳಬೇಕಾದ ಬದಲಾವಣೆ ಕುರಿತು ಅವರಿಗೆ ಸೂಕ್ತ ಸೂಚನೆ ನೀಡಲಾಗುವುದು ಎಂದು ಹೇಳಿದರು.

ಬೆಂ-ಮೈ ದಶಪಥ ಅಡಿಗಲ್ಲು ನಮ್ಮದೆ, ಉದ್ಘಾಟಿಸುತ್ತಿರೋದು ನಾವೇ: ಸಿಎಂ ಬೊಮ್ಮಾಯಿ

ಈವರೆಗೆ 38 ಬಲಿ: ಮೆಟ್ರೊ ನಿರ್ಮಾಣದ ಆರಂಭದಿಂದ ಈವರೆಗೆ 38 ಜನ ಮೃತಪಟ್ಟಿದ್ದು, 12 ಜನ ಗಾಯಗೊಂಡಿದ್ದಾರೆ. ಇವರಿಗೆ 3.15 ಕೋಟಿ ಪರಿಹಾರ ನೀಡಲಾಗಿದೆ. ಗುತ್ತಿಗೆದಾರರಿಗೆ 1.77 ಕೋಟಿ ದಂಡ ವಿಧಿಸಲಾಗಿದ್ದು, ಮೂವರು ಎಂಜಿನಿಯರ್‌ಗಳು ಅಮಾನತು ಆಗಿದ್ದಾರೆ ಎಂದು ಸರ್ಕಾರ ಕಳೆದ ಅಧಿವೇಶನದಲ್ಲಿ ತಿಳಿಸಿತ್ತು.

ಮೆಟ್ರೋ ಮಾರ್ಗದ ಸುರಕ್ಷತೆ, ಮಾಲಿನ್ಯ ನಿಯಂತ್ರಣ ಸಂಬಂಧ ಅಧ್ಯಯನ ನಡೆಸಲು ಮೂವರು ಸದಸ್ಯರ ತಂಡ ರಚನೆಯಾಗಿದೆ. ಎರಡೂವರೆ ತಿಂಗಳಲ್ಲಿ ಬಿಎಂಆರ್‌ಸಿಎಲ್‌ಗೆ ವರದಿ ನೀಡಲಿದ್ದೇವೆ.
-ಪ್ರೊ.ಚಂದ್ರಕಿಶನ್‌, ಐಐಎಸ್‌ಸಿ ಪ್ರಾಧ್ಯಾಪಕ

PREV
Read more Articles on
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
ದತ್ತಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಲಿ: ಸಿ.ಟಿ.ರವಿ ಆಗ್ರಹ