ಜಾರಕಿಹೊಳಿ ಕ್ಷೇತ್ರದಲ್ಲಿ ಈಗ ಅಳಿಯನೇ ಬಾಸ್!| ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ್ ಚಾಲನೆ
ಬೆಳಗಾವಿ[ಜೂ.26]: ಮಾವನಿಲ್ಲದ ಕ್ಷೇತ್ರದಲ್ಲಿ ಅಳಿಯನೇ ಬಾಸ್. ಇದು, ಸದ್ಯ ಗೋಕಾಕ್ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಚಿತ್ರಣ. ಸಚಿವ ಸ್ಥಾನ ಕೈ ತಪ್ಪಿದ ಮೇಲೆ ಕಾಂಗ್ರೆಸ್ ಮುಖಂಡರೊಂದಿಗೆ ಮುನಿಸಿಕೊಂಡಿರುವ ಶಾಸಕ ರಮೇಶ್ ಜಾರಕಿಹೊಳಿ ಅವರು ಯಾರ ಕೈಗೂ ಸಿಗದೆ ತೆರೆಮರೆಯಲ್ಲಿದ್ದಾರೆ. ಮಾತ್ರವಲ್ಲ, ಕ್ಷೇತ್ರದಲ್ಲಿ ಯಾರ ಕಣ್ಣಿಗೂ ಬೀಳುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
ಈ ಮಧ್ಯೆ ರಮೇಶ್ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಅವರ ಅಳಿಯ, ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ.
ಸೋಮವಾರವಷ್ಟೇ ಕ್ಷೇತ್ರದ ಮಲ್ಲಾಪೂರ ಪಿ.ಜಿ.ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಉದ್ಘಾಟನೆ, ದಿವ್ಯಾಂಗರಿಗೆ ತ್ರಿಚಕ್ರ ವಾಹನ ವಿತರಣೆ, 17 ಹೊಲಿಗೆ ಯಂತ್ರ ವಿತರಣೆ, 20 ಗ್ಯಾಸ್ ಸಿಲಿಂಡರ್ ವಿತರಣೆ, ಪ್ರಭುದೇವ ವೃತ್ತದಿಂದ ರೈಲ್ವೆ ಗೇಟ್ವರೆಗೆ ಹೊಸ ರಸ್ತೆ ಉದ್ಘಾಟನೆ, ಮಡಿವಾಳ ಮುಖ್ಯರಸ್ತೆಯಿಂದ ಸುಡಗಾಡ ಸಿದ್ಧರ ಮನೆವರೆಗೆ ರಸ್ತೆ ನಿರ್ಮಾಣ, ತರಕಾರಿ ಮಾರುಕಟ್ಟೆಯಲ್ಲಿ 4 ಹೈಮಾಸ್ಕ್ ವಿದ್ಯುತ್ ಬಲ್್ಬ ಅಳವಡಿಕೆ, ಜನತಾ ಪ್ಲಾಟ್, ದನಗಳ ಪೇಟೆಯಲ್ಲಿ 2 ಸಮುದಾಯ ಭವನ ಉದ್ಘಾಟನೆ ನೆರವೇರಿಸಿದ್ದಾರೆ.