
ಬೆಂಗಳೂರು : ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಾಮಾಣಿಕವಾಗಿ ಸೇವೆ ಮಾಡುತ್ತಿದ್ದು, ತಮ್ಮ ಮೇಲೆ ಸುಳ್ಳು ಹಾಗೂ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಪ್ರತಿಕ್ರಿಯಿಸಿದ್ದಾರೆ.
ಇ-ಖಾತಾ ವ್ಯವಸ್ಥೆ ಪಾರದರ್ಶಕವಾಗಿರಬೇಕು, ನಾಗರಿಕ ಪರವಾಗಿರಬೇಕು ಮತ್ತು ತೊಂದರೆ-ಮುಕ್ತವಾಗಿರಬೇಕು, ಭ್ರಷ್ಟಾಚಾರ, ದುಷ್ಕೃತ್ಯ ಅಥವಾ ಕಿರುಕುಳಕ್ಕೆ ಯಾವುದೇ ಸಹಿಷ್ಣುತೆ ಇರಬಾರದು ಎಂದು ಕಾರ್ಯ ನಿರ್ವಹಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಸುಮಾರು 1 ಲಕ್ಷ ಅಂತಿಮ ಇ-ಖಾತಾ ನೀಡಲಾಗಿದ್ದು, ಸುಮಾರು 25 ಸಾವಿರ ಅರ್ಜಿ ತಿರಸ್ಕರಿಸಲಾಗಿದೆ, ಅವುಗಳಲ್ಲಿ ಹಲವು ತಪ್ಪು ಅಥವಾ ಆಧಾರರಹಿತ ಕಾರಣಗಳಿಗಾಗಿ ತಿರಸ್ಕರಿಸಲ್ಪಟ್ಟಿವೆ ಎಂದು ಕಂಡುಬಂದಿದೆ.
ಪ್ರಸ್ತುತ ವಿಶೇಷ ನಿರಾಕರಣೆ ಲೆಕ್ಕಪರಿಶೋಧನೆ ನಡೆಯುತ್ತಿದೆ ಅಕ್ರಮಗಳಿಗೆ ಕಾರಣವೆಂದು ಕಂಡು ಬಂದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಮದಿಂದಾಗಿ ಜಿಬಿಎ ಅಧಿಕಾರಿಗಳು ಮತ್ತು ನೌಕರರ ಸಂಘವು ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದೆ. ಈ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿಗೆ ಮನವಿ
ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಅಧಿಕಾರಿ, ನೌಕರರಿಗೆ ಅವಾಚ್ಯಕ ಶಬ್ದಗಳಿಂದ ಬೈದು ನಿಂದಿಸಿ, ಮಾನಸಿಕ ಚಿತ್ರಹಿಂಸೆ, ಕಿರುಕುಳ ನೀಡುತ್ತಿರುವುದರಿಂದ ಕಂದಾಯ ಅಧಿಕಾರಿ,ನೌಕರರ ಅಳಲು,ನೋವನ್ನು ಆಲಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಯ ನೀಡುವಂತೆ ಜಿಬಿಎ -ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ.