ಚುನಾವಣೆ ಮುಂದಕ್ಕೆ, ಮುಂಬೈ ಸಹೋದರರನ್ನು ಕರೆಸಿಕೊಳ್ತೀವಿ: ನಳಿನ್

By Kannadaprabha NewsFirst Published May 26, 2020, 7:22 AM IST
Highlights

ಮುಂಬೈಯಲ್ಲಿರುವ ಕರಾವಳಿಯ ಜನರು ಕೂಡ ನಮ್ಮ ಸಹೋದರರು. ಅವರ ಕಷ್ಟಗಳು ನಮಗೆ ಗೊತ್ತಿವೆ. ಅದಕ್ಕಾಗಿ ಎಷ್ಟೇ ಕಷ್ಟವಾದರೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಪೂರ್ಣ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಉಡುಪಿ(ಮೇ 26): ರಾಜ್ಯದಲ್ಲಿ ಈಗ ಪಂಚಾಯಿತಿ ಚುನಾವಣೆ ನಡೆಸುವ ಪರಿಸ್ಥಿತಿ ಇಲ್ಲ. ಆದ್ದರಿಂದ ಸರ್ಕಾರ ಸಚಿವ ಸಂಪುಟ ತೀರ್ಮಾನದಂತೆ ಚುನಾವಣೆ ಮುಂದಕ್ಕೆ ಹಾಕಿದೆ. ಆದರೆ ಎಲ್ಲವನ್ನೂ ಎಲ್ಲರೊಂದಿಗೆ ಕೇಳಿಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿಕ್ಕಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿ, ಆಡಳಿತಾಧಿಕಾರಿಗಳನ್ನು ನೇಮಿಸುವ ಸರ್ಕಾರದ ತೀರ್ಮಾನವನ್ನು ಟೀಕಿಸಿರುವ ಡಿ.ಕೆ.ಶಿ. ಅವರ ಬಗ್ಗೆ ನಳಿನ್‌ ಕುಮಾರ್‌ ಸೋಮವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿದರು.

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಅಧ್ಯಕ್ಷ ಕಟೀಲ್ ನಡೆಗೆ ಅಪಸ್ವರ

ಕಾಂಗ್ರೆಸ್‌ ಪಕ್ಷ ಕೂಡ ರಾಜ್ಯದಲ್ಲಿ ಸರ್ಕಾರ ನಡೆಸಿದೆ. ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಅವರಿಗೂ ಗೊತ್ತಿದೆ. ಈಗ ಆರೇಳು ತಿಂಗಳು ಚುನಾವಣೆ ನಡೆಸುವಂತಿಲ್ಲ. ಆದ್ದರಿಂದ ಅವಧಿ ಮುಗಿದ ಪಂಚಾಯಿತಿ​ಗ​ಳಿಗೆ ಜಿಲ್ಲಾಧಿಕಾರಿ ನಾಮ ನಿರ್ದೇಶನ ಮಾಡಿ ಸಮಿತಿ ರಚಿಸಿ, ಅದರ ಮೂಲಕ ಆಡಳಿತ ನಡೆಸಬೇಕು ಎನ್ನುವುದು ಕಾಯ್ದೆಯಲ್ಲಿಯೇ ಇದೆ. ಅದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮುಂಬೈಯವರನ್ನು ಕರೆಸುತ್ತೇವೆ

ಮುಂಬೈಯಲ್ಲಿರುವ ಕರಾವಳಿಯ ಜನರು ಕೂಡ ನಮ್ಮ ಸಹೋದರರು. ಅವರ ಕಷ್ಟಗಳು ನಮಗೆ ಗೊತ್ತಿವೆ. ಅದಕ್ಕಾಗಿ ಎಷ್ಟೇ ಕಷ್ಟವಾದರೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಪೂರ್ಣ ವ್ಯವಸ್ಥೆಗಳನ್ನು ಮಾಡುತ್ತಿದೆ. ಅದಕ್ಕಾಗಿ ಕೆಲವು ದಿನಗಳ ಕಾಲ ಮಹಾರಾಷ್ಟ್ರ, ಕೇರಳ ಸಹಿತ ಕೆಲವು ಗಡಿಗಳನ್ನು ಬಂದ್‌ ಮಾಡಲಾಗಿದೆ. ಎಲ್ಲರನ್ನೂ ಕರೆತಂದು ಕ್ವಾರೈಂಟನ್‌ ಮಾಡುವುದಕ್ಕೆ ವ್ಯವಸ್ಥೆಯಾದ ತಕ್ಷಣ ಮುಂಬೈಯಲ್ಲಿ ಉಳಿದವರನ್ನೂ ಕರೆಸಲಾಗುತ್ತದೆ ಎಂದು ನಳಿನ್‌ಕು​ಮಾರ್‌ ಕಟೀಲ್‌ ತಿಳಿಸಿದರು.

ಕೋವಿಡ್‌ ಜೀವನದ ಭಾಗವಾಗ್ತದೆ

ಇನ್ನು ಮುಂದೆ ಕೋವೀಡ್‌ ಜೀವನದ ಒಂದು ಭಾಗವಾಗಿ ಹೋಗುತ್ತದೆ. ಆದ್ದರಿಂದ ಸಾಮಾಜಿಕ ಅಂತರ, ಮುಖ ಕವಚವನ್ನು ಕಡ್ಡಾಯ ಮಾಡಲಾಗುತ್ತಿದೆ. ಇದೇ ನಿಯಮದಂತೆ ದೇಶಿಯ ವಿಮಾನಗಳು ಪ್ರಾರಂಭವಾಗಿದೆ. ಹೊರರಾಜ್ಯದಿಂದ ಕ್ವಾರಂಟೈನ್‌ ಗೆ ಒಪ್ಪಿಗೆ ಇದ್ದವರನ್ನು ಮಾತ್ರ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಅವಕಾಶ ಇದೆ. ಈ ನಿರ್ಬಂಧಗಳು ಅನಿವಾರ್ಯವಾಗಿವೆ ಎಂದರು.

click me!