ಬಾಗಲಕೋಟೆ: ತೇರದಾಳದಲ್ಲಿ ಮತ್ತೆ ಮೊಸಳೆ ಮರಿಗಳು ಪ್ರತ್ಯಕ್ಷ, ಆತಂಕದಲ್ಲಿ ರೈತರು

By Kannadaprabha NewsFirst Published Aug 11, 2023, 9:02 PM IST
Highlights

ಕಳೆದ ತಿಂಗಳು ಕಾಣಿಸಿಕೊಂಡಿದ್ದ 4 ಮೊಸಳೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ನದಿಗೆ ಬಿಟ್ಟಿದ್ದರು. ಬಳಿಕ ರೈತರು ನಿರ್ಭಯವಾಗಿ ಜಮೀನುಗಳಿಗೆ ತೆರಳುತ್ತಿದ್ದರು. ಆದರೆ ಕಳೆದೊಂದು ವಾರದಿಂದ ಮತ್ತದೇ ಬಾವಿಯಲ್ಲಿ ಐದಾರು ಮೊಸಳೆ ಮರಿಗಳು ಕಾಣಿಸಿಕೊಂಡಿದ್ದು, ತಾಯಿ ಮೊಸಳೆಯೂ ಇಲ್ಲೇ ಇರಬಹುದು ಎಂದು ಶಂಕಿಸಿದ್ದಾರೆ ರೈತರು.

ತೇರದಾಳ(ಆ.11): ಪಟ್ಟಣದ ಶೇಗುಣಸಿ ರಸ್ತೆ ಬಳಿ ಇರುವ ಬಾವಿಯಲ್ಲಿ ಮತ್ತೆ ಸುಮಾರು ದಾರು ಮೊಸಳೆ ಮರಿಗಳು ಗೋಚರಿಸಿವೆ. ಕಳೆದ ತಿಂಗಳಷ್ಟೇ ಬಾವಿಯಲ್ಲಿನ 4 ಮೊಸಳೆ ಮರಿಗಳನ್ನು ಹಿಡಿದು ನದಿಗೆ ಬಿಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಇದೀಗ ಮತ್ತೆ ಐದಾರು ಮೊಸಳೆ ಮರಿಗಳನ್ನು ಹಿಡಿಯುವುದು ತಲೆನೋವಾಗಿ ಪರಿಣಮಿಸಿದೆ.

ಕಳೆದ ತಿಂಗಳು ಕಾಣಿಸಿಕೊಂಡಿದ್ದ 4 ಮೊಸಳೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ನದಿಗೆ ಬಿಟ್ಟಿದ್ದರು. ಬಳಿಕ ರೈತರು ನಿರ್ಭಯವಾಗಿ ಜಮೀನುಗಳಿಗೆ ತೆರಳುತ್ತಿದ್ದರು. ಆದರೆ ಕಳೆದೊಂದು ವಾರದಿಂದ ಮತ್ತದೇ ಬಾವಿಯಲ್ಲಿ ಐದಾರು ಮೊಸಳೆ ಮರಿಗಳು ಕಾಣಿಸಿಕೊಂಡಿದ್ದು, ತಾಯಿ ಮೊಸಳೆಯೂ ಇಲ್ಲೇ ಇರಬಹುದು ಎಂದು ಶಂಕಿಸಿದ್ದಾರೆ ರೈತರು.

ಬಾದಾಮಿ: ಮೃತ ಪ್ರಥಮ ದರ್ಜೆ ಸಹಾಯಕನ ಖಾತೆಗೆ ವೇತನ..!

ಹಣ ಕೇಳುತ್ತಿದ್ದಾರೆ ಅರಣ್ಯ ಸಿಬ್ಬಂದಿ:

ಮತ್ತೆ ಮೊಸಳೆ ಕಾಣಿಸಿಕೊಂಡ ಬಗ್ಗೆ ರೈತರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಮೊಸಳೆ ಹಿಡಿಯಲು ಬಂದ ವೇಳೆ ಅವು ನೀರಿನಲ್ಲಿ ಮುಳುಗುತ್ತಿರುವುದರಿಂದ ಹಿಡಿಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರೈತರಲ್ಲಿ ತೀವ್ರ ಆತಂಕ ಎದುರಾಗಿದೆ. ಈಗಾಗಲೇ ನಾಲ್ಕಾರು ಬಾರಿ ಅರಣ್ಯ ಸಿಬ್ಬಂದಿ ಮೊಸಳೆ ಸೆರೆಗೆಂದು ಬಂದು ಬರಿಗೈಲಿ ತೆರಳುತ್ತಿದ್ದು, ಅವನ್ನು ಹಿಡಿಯಲು ಹಣ ಕೇಳುತ್ತಿದ್ದಾರೆ ಎಂದು ರೈತ ಶ್ರೇಯಾಂಶ ಸುಭಾಸ ನಾಸಿ ಆರೋಪಿಸಿದ್ದಾರೆ.

ಮೊಸಳೆ ಮರಿ ಹಿಡಿಯಲು ಬಾವಿಯತ್ತ ಹೋದರೆ ನೀರಿನಲ್ಲಿ ಮುಳುಗುತ್ತವೆ. ಮಳೆಗಾಲವಾದ್ದರಿಂದ ಬಾವಿ ತುಂಬಿದೆ. ಹೀಗಾಗಿ ಹಿಡಿಯಲು ಸ್ವಲ್ಪ ಕಷ್ಟವಾಗುತ್ತದೆ. ದಿನವಿಡಿ ಕಾದು ಕುಳಿತು ಮೀನಿನ ಬಲೆ ಬಳಸಿ ಹಿಡಿಯಬೇಕು. ಅಲ್ಲದೇ, ನಮ್ಮಲ್ಲಿ ಇಬ್ಬರೇ ಸಿಬ್ಬಂದಿ ಇರುವುದರಿಂದ ಸ್ಥಳೀಯ ಮೀನುಗಾರರನ್ನು ಬಳಸಿಕೊಳ್ಳಬೇಕು ಹಾಗಾಗಿ ಅವರಿಗೆ ಹಣ ನೀಡಲು ಹೇಳಲಾಗಿದೆ. ಸಿಬ್ಬಂದಿಗೆ ಹಣ ಕೇಳಿಲ್ಲ. ಇಲಾಖೆಯಿಂದ ಇದಕ್ಕೆ ಹಣ ನೀಡಲಾಗುವುದಿಲ್ಲ. ಸಾಗಾಣಿಕೆ ವೆಚ್ಚ ಮಾತ್ರ ಇಲಾಖೆ ನೀಡುತ್ತದೆ. ಕೆಲವು ಗ್ರಾಮ ಪಂಚಾಯ್ತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಮಂಗಗಳನ್ನು ಹಿಡಿಯಲು ಪಂಜರ ಮಾತ್ರ ನೀಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳೇ ಅವುಗಳನ್ನು ಹಿಡಿಯುವ ವೆಚ್ಚ ಭರಿಸಬೇಕಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಎಂ.ಎಸ್‌.ನಾವಿ ತಿಳಿಸಿದ್ದಾರೆ.  

click me!