ಬ್ಯಾಡಗಿ: ಮಧ್ಯಾಹ್ನ 3 ಗಂಟೆ ಬಳಿಕ ಲಾಕ್‌ಡೌನ್‌ ಜಾರಿ

By Kannadaprabha NewsFirst Published Jul 22, 2020, 8:56 AM IST
Highlights

ಲಾಕ್‌​ಡೌ​ನ್‌ಗೆ ಸಹ​ಕ​ರಿ​ಸಲು ಶಾಸಕ ವಿರೂ​ಪಾ​ಕ್ಷಪ್ಪ ಬಳ್ಳಾರಿ ಮನ​ವಿ| ಕೋವಿಡ್‌ ಹೆಚ್ಚಳದಿಂದಾಗಿ ಪಟ್ಟಣದಲ್ಲಿನ ಹಲವು ಓಣಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ| ಸಾರ್ವಜನಿಕರು ಸ್ವಯಂ ಜಾಗೃತರಾಗದಿದ್ದಲ್ಲಿ ಬರುವ ದಿನಗಳಲ್ಲಿ ವೈರಸ್‌ ಸಮುದಾಯಕ್ಕೆ ಹರಡಿಕೊಳ್ಳಲಿದೆ| ಕೊರೋನಾ ವೈರಸ್‌ ತಡೆಗಟ್ಟುವಲ್ಲಿ ಪುರಸಭೆಯೊಂದಿಗೆ ಎಲ್ಲ ವ್ಯಾಪಾರಸ್ಥರು ಸ್ವಚ್ಚತೆ ಕಾಪಾಡಿಕೊಳ್ಳುವ ಮೂಲಕ ಕೈಜೋಡಿಸಬೇಕು|

ಬ್ಯಾಡಗಿ(ಜು.22):  ಕೊರೋನಾ ಮುಕ್ತವಾಗಿದ್ದ ಬ್ಯಾಡಗಿ ತಾಲೂಕಿನಲ್ಲಿ ಸೋಂಕಿತರು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಜು. 22ರ ಬುಧವಾರದಿಂದ ಮಧ್ಯಾಹ್ನ 3ರ ಬಳಿಕ ತಾಲೂಕಿನಾದ್ಯಂತ ಲಾಕ್‌ಡೌನ್‌ ಜಾರಿ ಮಾಡಲಾಗುತ್ತಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ಗೆ ಸಹಕರಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿದ್ದಾರೆ. 

ಪಟ್ಟಣದ ತಹಸೀಲ್ದಾ​ರ್‌ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಖ್ಯಾತಿಯ ಮಾರುಕಟ್ಟೆ ಹೊಂದಿದ್ದರೂ ಯಾವುದೇ ಕೋವಿಡ್‌ ಪ್ರಕರಣಗಳಿಲ್ಲದೇ ಗ್ರೀನ್‌ಝೋನ್‌ನಲ್ಲಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಬ್ಯಾಡಗಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಇದೀಗ ಕೊರೋನಾ ಹಾವಳಿ ಹೆಚ್ಚಾಗಿದ್ದು, ಇಲ್ಲಿ ವರೆಗೂ ತಾಲೂಕಿನಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದರು.

ಸುರಕ್ಷತೆ ಎಲ್ಲರ ಹೊಣೆ:

ಕೊರೋನಾ ತಡೆಗಟ್ಟುವ ಹೊಣೆ ಕೇವಲ ಪುರಸಭೆ, ಪೊಲೀಸ್‌, ತಾಲೂಕಾಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸಾಮೂಹಿಕ ಹೊಣೆಗಾರಿಕೆ ತೋರುವಂತೆ ಸೂಚಿಸಿದರಲ್ಲದೇ, ಪಟ್ಟಣದ ಎಸ್‌ಜೆಜೆಎಂ ಶಾಲೆಯ ಮುಂದೆ ಅನಧಿಕೃತವಾಗಿ ನಡೆಸುತ್ತಿರುವ ಚಿಕನ್‌ ಅಂಗಡಿಗಳನ್ನು ಮಾಲೀಕರೇ ಸ್ವಯಂ ಪ್ರೇರಿತರಾಗಿ ತೆರೆವುಗೊಳಿಸುವುದು ಸೂಕ್ತ. ಇದರಿಂದ ಅಲ್ಲಿ ಉಂಟಾಗುತ್ತಿರುವ ಜನ ಸಂದಣಿ ತಡೆಗಟ್ಟಲು ಸಾಧ್ಯ ಎಂದರು.

'ಕೊರೋನಾದಂತಹ ಸಂದರ್ಭದಲ್ಲೂ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿರುವ ಬಿಜೆಪಿಗರು'

ಮಾಸ್ಕ್‌ ಕಡ್ಡಾಯ:

ತಹಸೀಲ್ದಾರ ಶರಣಮ್ಮ ಕಾರಿ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಪ್ರತಿದಿನ ಮಧ್ಯಾಹ್ನ ಮೂರು ಗಂಟೆ ವರೆಗೆ ಮಾತ್ರ ಎಲ್ಲ ರೀತಿಯ ಅಂಗಡಿ, ವ್ಯಾಪಾರ ವಹಿವಾಟಿಗೆ ಅವಕಾಶವಿದೆ. ಆದರೆ, ಲಾಕ್‌ಡೌನ್‌ ವೇಳೆ ಸಾರ್ವಜನಿಕರು ವ್ಯಾಪಾರಸ್ಥರು ಓಡಾಡದಂತೆ ಹಾಗೂ ಸಾರ್ವಜನಿಕ ಸಭೆ ನಡೆಸದಂತೆ, ಕ್ರೀಡಾಂಗಣದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಮಾಸ್ಕ್‌ ಧರಿಸದವರ ಹಾಗೂ 3 ಗಂಟೆಯ ನಂತರ ಅನಗತ್ಯ ತಿರುಗಾಡುವವರಿಗೆ ದಂಡದ ಜೊತೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಸ್ವಯಂ ಜಾಗೃತರಾಗಿ:

ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಮಾತನಾಡಿ, ಕೋವಿಡ್‌ ಹೆಚ್ಚಳದಿಂದಾಗಿ ಪಟ್ಟಣದಲ್ಲಿನ ಹಲವು ಓಣಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಸಾರ್ವಜನಿಕರು ಸ್ವಯಂ ಜಾಗೃತರಾಗದಿದ್ದಲ್ಲಿ ಬರುವ ದಿನಗಳಲ್ಲಿ ವೈರಸ್‌ ಸಮುದಾಯಕ್ಕೆ ಹರಡಿಕೊಳ್ಳಲಿದೆ. ಕೊರೋನಾ ವೈರಸ್‌ ತಡೆಗಟ್ಟುವಲ್ಲಿ ಪುರಸಭೆಯೊಂದಿಗೆ ಎಲ್ಲ ವ್ಯಾಪಾರಸ್ಥರು ಸ್ವಚ್ಚತೆ ಕಾಪಾಡಿಕೊಳ್ಳುವ ಮೂಲಕ ಕೈಜೋಡಿಸಿ ಎಂದರಲ್ಲದೇ ನಿಯಮ ಉಲ್ಲಂಘನೆ ಮಾಡಿದವರ ಲೈಸೆನ್ಸ್‌ ರದ್ದು ಮಾಡುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಿಪಿಐ ಭಾಗ್ಯವತಿ ಬಂತ್ಲಿ, ಟಿಇಒ ಜಯಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
 

click me!