ತಾಲಿಬಾನಿಗಳು ನಮ್ಮಲ್ಲಿದ್ದ ಎಲ್ಲವನ್ನೂ ಕಸಿದರು

By Kannadaprabha NewsFirst Published Aug 22, 2021, 9:01 AM IST
Highlights
  • ನಾನು ಸೇರಿದಂತೆ 50ಕ್ಕೂ ಹೆಚ್ಚು ಭಾರತೀಯ ಯೋಧರು ಹೊಸ ಟೀವಿಗಳನ್ನು ಖರೀದಿ ಮಾಡಿದ್ದೆವು
  • ತಾಲಿಬಾನ್‌ ಭಯೋತ್ಪಾದಕರು ನಮ್ಮ ಟೀವಿಗಳನ್ನು ಹಾಗೂ ನಮ್ಮ ಬಳಿ ಇದ್ದ ಬ್ಯಾಗ್‌ ಸೇರಿ ಇನ್ನುಳಿದ ಸಾಮಗ್ರಿಗಳನ್ನು ಕಸಿದುಕೊಂಡರು
  • ಆಷ್ಘಾನಿಸ್ತಾನದಲ್ಲಿನ ಭಾರತದ ರಾಯಭಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ರವಿ ನೀಲಗಾರ ಹೇಳಿಕೆ

ವರದಿ : ಶಿವಕುಮಾರ ಕುಷ್ಟಗಿ

 ಗದಗ (ಆ.22): ‘ನಾನು ಸೇರಿದಂತೆ 50ಕ್ಕೂ ಹೆಚ್ಚು ಭಾರತೀಯ ಯೋಧರು ಹೊಸ ಟೀವಿಗಳನ್ನು ಖರೀದಿ ಮಾಡಿದ್ದೆವು. ಅವುಗಳನ್ನು ಮನೆಗೆ ತರಬೇಕೆಂದು ನಮ್ಮ ಬಳಿ ಇಟ್ಟುಕೊಂಡಿದ್ದೆವು. ಆದರೆ ತಾಲಿಬಾನ್‌ ಭಯೋತ್ಪಾದಕರು ನಮ್ಮ ಟೀವಿಗಳನ್ನು ಹಾಗೂ ನಮ್ಮ ಬಳಿ ಇದ್ದ ಬ್ಯಾಗ್‌ ಸೇರಿ ಇನ್ನುಳಿದ ಸಾಮಗ್ರಿಗಳನ್ನು ಕಸಿದುಕೊಂಡು, ಸುಮ್ಮನೆ ತೆರಳಬೇಕು ಎಂದು ತಾಕೀತು ಮಾಡಿದ್ದಲ್ಲದೇ ಬೆದರಿಕೆ ಕೂಡಾ ಹಾಕಿದರು. ಜೀವ ಉಳಿದರೆ ಸಾಕು ಎಂದು ಎಲ್ಲ ವಸ್ತುಗಳನ್ನು ಬಿಟ್ಟು ಬಂದಿದ್ದೇವೆ’

- ಇದು ಆಷ್ಘಾನಿಸ್ತಾನದಲ್ಲಿನ ಭಾರತದ ರಾಯಭಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗದಗ ತಾಲೂಕಿನ ಬಳಗಾನೂರಿನ ಯೋಧ ರವಿ ನೀಲಗಾರ  ಹಂಚಿಕೊಂಡ ಅನುಭವ.

ಒಂದೆಡೆ ಹಿಂಸೆ, ಇನ್ನೊಂದೆಡೆ ತನಿಖೆ: ತಾಲಿಬಾನ್‌ ನಾಟಕ!

ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌(ಐಟಿಬಿಪಿ) ಯೋಧರಾಗಿ ರವಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. 2 ವರ್ಷಗಳ ಹಿಂದೆ ಅಷ್ಘಾನಿಸ್ತಾನದಲ್ಲಿನ ಭಾರತದ ರಾಯಭಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆಗೆ ನಿಯೋಜನೆಗೊಂಡಿದ್ದರು. ತಾಲಿಬಾನಿಗಳು ಕಾಬೂಲ್‌ ನಗರವನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಲ್ಲಿದ್ದ ಎಲ್ಲ ಕಚೇರಿಗಳು ಸ್ಥಗಿತಗೊಂಡಿದ್ದವು. ಯೋಧ ರವಿ ಸೇರಿದಂತೆ ಭಾರತದ 200 ಯೋಧರು, ಕೈಯಲ್ಲಿಯೇ ಜೀವ ಹಿಡಿದುಕೊಂಡು ಅಲ್ಲಿ ಸಮಯ ಕಳೆದಿದ್ದರು.

ಪೂರ್ವ ನಿಗದಿಯಂತೆ ಅವರು ಆ.16ಕ್ಕಿಂತ ಮುಂಚೆಯೇ ಭಾರತಕ್ಕೆ ವಾಪಸಾಗಬೇಕಿತ್ತು. ಆದರೆ ಅಷ್ಟರಲ್ಲಿ ಆಷ್ಘಾನಿಸ್ತಾನ ದೇಶವನ್ನು ತಾಲಿಬಾನ್‌ ಭಯೋತ್ಪಾದಕರು ವಶಪಡಿಸಿಕೊಂಡಿದ್ದರಿಂದ ಸಾಧ್ಯವಾಗಿರಲಿಲ್ಲ. ಆ.16ರಂದು ರವಿ ಸುರಕ್ಷಿತವಾಗಿ ಗುಜರಾತಿಗೆ ಬಂದಿಳಿದಿದ್ದು, ದೆಹಲಿಯಲ್ಲಿ ಕ್ವಾರಂಟೈನ್‌ ಆಗಿದ್ದಾರೆ.

click me!