ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ

By Kannadaprabha NewsFirst Published Aug 5, 2022, 11:48 AM IST
Highlights

ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಸುಂದರೇಶ ಬಾಬು ಸೂಚಿಸಿದರು.

ಕೊಪ್ಪಳ (ಆ.5) : ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರವಾಹ, ಮಳೆಹಾನಿಯಂಥ ತುರ್ತುಪರಿಸ್ಥಿತಿಯನ್ನು ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ, ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಂ. ಸುಂದರೇಶ ಬಾಬು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜೂನ್‌ದಿಂದ ಆಗಸ್ಟ್‌ವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಆದ ಹಾನಿ ಬಗ್ಗೆ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನೆ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಜಿಲ್ಲಾಡಳಿತ ಭವನದ ಕೆ- ಸ್ವಾನ್‌ನಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

\ಸಚಿವರ ಗ್ರಾಮದಲ್ಲೇ ರಸಗೊಬ್ಬರಕ್ಕಾಗಿ ರೈತರ ಪರದಾಟ!

ಮಳೆಹಾನಿ, ಪ್ರವಾಹದ ಸಂದರ್ಭದಲ್ಲಿ ಜನರಿಗೆ ಪರಿಹಾರ ಒದಗಿಸುವುದು ಕೇವಲ ಕಂದಾಯ ಇಲಾಖೆ ಜವಾಬ್ದಾರಿಯಲ್ಲ. ಮಳೆಹಾನಿ ಎಂದರೆ, ಮನೆಗಳ, ಶಾಲಾ ಕಟ್ಟಡಗಳ ಕುಸಿತ, ಮಾನವ ಅಥವಾ ಪ್ರಾಣಿ ಜೀವ ಹಾನಿ, ರಸ್ತೆಗಳು ಹಾಳಾಗುವುದು, ಕೃಷಿ ಭೂಮಿಗೆ ನೀರು ನುಗ್ಗುವುದು ಮುಂತಾದ ಹಾನಿಗಳು ಸಂಭವಿಸುತ್ತವೆ. ಅದಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಯ ಜವಾಬ್ದಾರಿಯೂ ಇರುತ್ತದೆ. ಸಿಡಿಲಿನ ಆಘಾತ ಅಥವಾ ಮನೆ ಕುಸಿತದಿಂದ ಹಸು, ದನಕರುಗಳು ಮೃತಪಟ್ಟರೆ ಸಂಬಂಧಿಸಿದ ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಣಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಬೇಕು. ದನದ ಮಾಲಿಕರಿಗೆ 24 ಗಂಟೆಯೊಳಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಅದರಂತೆ ಮಾನವ ಜೀವ ಹಾನಿ ಸಂದರ್ಭದಲ್ಲಿಯೂ 24ರಿಂದ 48 ಗಂಟೆಯೊಳಗೆ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳ ವಿಪತ್ತು ನಿರ್ವಹಣೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈಗಾಗಲೇ ರಚನೆಗೊಂಡಿರುವ ಗ್ರಾಪಂ ಅಧ್ಯಕ್ಷರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳನ್ನೊಳಗೊಂಡ ಸಮಿತಿಯು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಗಾಗ್ಗೆ ಸಭೆಗಳನ್ನು ನಡೆಸಿ, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು ಎಂದರು.

ಅಂಜನಾದ್ರಿಗೆ ಇಂದು ಸಿಎಂ ಬೊಮ್ಮಾಯಿ ಭೇಟಿ: ವೈಮಾನಿಕ ಸಮೀಕ್ಷೆ

ಯಾವುದೇ ಕಾರಣಕ್ಕೂ ಶಿಥಿಲಾವಸ್ಥೆ ಹಾಗೂ ಸೋರುವ ಸ್ಥಿತಿಯಲ್ಲಿರುವ ಕೊಠಡಿಗಳಲ್ಲಿ ಶಾಲಾ ತರಗತಿಗಳನ್ನು, ಅಂಗನವಾಡಿಗಳನ್ನು ನಡೆಸುವಂತಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಶೌಚಾಲಯ, ಆವರಣ ಗೋಡೆ, ಶಾಲಾ ಕೊಠಡಿಗಳ ಕಡೆ ಮಕ್ಕಳು ಹೋಗದಂತೆ ಎಚ್ಚರ ವಹಿಸಬೇಕು. ಅಂತಹ ಪ್ರದೇಶದಲ್ಲಿ ಟೇಪ್‌ ಅಥವಾ ಸೂಚನಾ ಫಲಕವನ್ನು ಅಳವಡಿಸುವುದರ ಮೂಲಕ ಮಕ್ಕಳಿಗೆ ಸೂಕ್ತ ಸೂಚನೆ ನೀಡಬೇಕು ಎಂದರು.

ಈ ಸಂದರ್ಭ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ¶ೌಜಿಯಾ ತರನ್ನುಮ್‌, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಸಹಾಯಕ ಆಯಕ್ತರಾದ ಬಸವಣಪ್ಪ ಕಲಶೆಟ್ಟಿಇತರರು ಇದ್ದರು.

click me!