ತಾಯಿ, 3 ವರ್ಷದ ಮಗುವಿನ ಮೇಲೆ ಆ್ಯಸಿಡ್ ದಾಳಿ

By Kannadaprabha NewsFirst Published Jan 25, 2020, 8:35 AM IST
Highlights

ತಾಯಿ ಹಾಗೂ ಮೂರು ವರ್ಷದ ಮುಗಿನ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಘಟನೆ ಮಂಗಳೂರಿನ ಪುತ್ತೂರಿನಲ್ಲಿ ನಡೆದಿದೆ. ರಬ್ಬರ್‌ ಶೀಟ್‌ ಮಾಡಲು ಬಳಸುವ ಅ್ಯಸಿಡ್‌ನ್ನು ಮಹಿಳೆ ಹಾಗೂ ಮಗುವಿನ ಮೇಲೆ ಎರಚಲಾಗಿದೆ.

ಮಂಗಳೂರು(ಜ.25): ತನ್ನ ಸಹೋದರನ ಪತ್ನಿ ಹಾಗೂ ಮಗುವಿನ ಮೇಲೆ ಆ್ಯಸಿಡ್‌ ಎರಚಿ ಗಾಯಗೊಳಿಸಿದ ಅಮಾನವೀಯ ಪ್ರಕರಣ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಎಂಬಲ್ಲಿ ಗುರುವಾರ ಸಂಜೆ ನಡೆದಿದ್ದು, ಆರೋಪಿಯನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರಿನ ಕೋಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ವಿಧವೆ ಮಹಿಳೆ ಸ್ವಪ್ನಾ (35) ಮತ್ತು ಆಕೆಯ ಮೂರು ವರ್ಷದ ಹೆಣ್ಣು ಮಗು ಆ್ಯಸಿಡ್‌ ದಾಳಿಯಿಂದ ಗಾಯಗೊಂಡವರು. ಸ್ವಪ್ನಾ ಅವರ ಪತಿಯ ಅಣ್ಣ ಜಯಾನಂದ ಕೊಠಾರಿ ಅ್ಯಸಿಡ್‌ ಎರಚಿದ ಆರೋಪಿ. ಹಣಕಾಸು ಮತ್ತು ಭೂ ವಿವಾದಕ್ಕೆ ಸಂಬಂಧಿಸಿ ಆರೋಪಿಯು ಈ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.

ಧರ್ಮಕ್ಕೆ ಒಳಿತಾಗುತ್ತದೆ ಎಂದು ಆರೆಸ್ಸೆಸ್‌ ಕಾರ್ಯಕರ್ತನ ಹತ್ಯೆ ಯತ್ನ!

ಆರೋಪಿ ಜಯಾನಂದ ರಬ್ಬರ್‌ ಶೀಟ್‌ ಮಾಡಲು ಬಳಸುವ ಅ್ಯಸಿಡ್‌ ಸ್ವಪ್ನಾ ಅವರ ಮೇಲೆ ಎರಚಿದ್ದು, ಈ ಸಂದರ್ಭ ತಾಯಿಯ ಪಕ್ಕದಲ್ಲಿಯೇ ಇದ್ದ ಮಗುವಿನ ಮೇಲೆಯೂ ಬಿದ್ದಿದೆ. ಇಬ್ಬರೂ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ಹಿನ್ನೆಲೆ:

ಜಯಾನಂದ ಮತ್ತು ಸ್ವಪ್ನ ಅವರ ಪತಿ ರವಿ ಅವರು ಸಹೋದರರಾಗಿದ್ದು, ರವಿ ಮೃತಪಟ್ಟಿದ್ದಾರೆ. ಸ್ವಪ್ನಾ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಜಯಾನಂದ ಮನೆಯ ಪಕ್ಕದಲ್ಲಿಯೇ ಪ್ರತ್ಯೇಕ ಮನೆ ಮಾಡಿ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಹಣಕಾಸು ವಿಚಾರ ಮತ್ತು ಭೂ ವಿಚಾರಕ್ಕೆ ಸಂಬಂಧಿಸಿ ಈ ಕುಟುಂಬಗಳ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದ್ದು, ಪ್ರಕರಣವು ಪೊಲೀಸ್‌ ಠಾಣೆಯ ಮೆಟ್ಟಲೇರಿದ್ದರೂ ಸುಖಾಂತ್ಯಗೊಂಡಿರಲಿಲ್ಲ.

ಮಂಗಳೂರು ಏರ್‌ಪೋರ್ಟ್‌ಗೆ ಮತ್ತೆ ಆದಿತ್ಯ, ಕೃತ್ಯವೆಸಗಿದ ಸ್ಥಳ ಮಹಜರು

ಗುರುವಾರ ಸಂಜೆ ಎಂದಿನಂತೆ ಇವರಿಬ್ಬರ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಜಯಾನಂದ ಆ್ಯಸಿಡ್‌ ಎರಚಿರುವುದಾಗಿ ಎಂದು ತಿಳಿದುಬಂದಿದೆ. ಕಡಬ ಪೊಲೀಸರು ಆರೋಪಿ ಜಯಾನಂದರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

click me!