'ರಾಜಕೀಯ ಲಾಭಕ್ಕಾಗಿ ಪ್ರತಾಪ್ ಸಿಂಹ ಯತ್ನ : ಅಪ್ರಬುದ್ಧ ಹೇಳಿಕೆ ನೀಡುತ್ತಿರುವ ಸಂಸದರು'

By Kannadaprabha NewsFirst Published Sep 15, 2021, 10:40 AM IST
Highlights
  • ಧಾರ್ಮಿಕ ಕಟ್ಟಡಗಳ ಧ್ವಂಸ ವಿಚಾರದಲ್ಲಿ ರಾಜ್ಯ ಸರ್ಕಾರವು ವಿವೇಚನೆಯಿಂದ ವರ್ತಿಸಬೇಕು
  • ರಾಜಕೀಯ ಲಾಭಕ್ಕಾಗಿ ಮೈಸೂರಿನ ಸಂಸದರು ಬೊಬ್ಬೆ ಹೊಡೆಯಲು ಪ್ರಾರಂಭಿಸಿದ್ದಾರೆ ಎಂದು ಅಸಮಾಧಾನ

  ಮೈಸೂರು (ಸೆ.15):  ಧಾರ್ಮಿಕ ಕಟ್ಟಡಗಳ ಧ್ವಂಸ ವಿಚಾರದಲ್ಲಿ ರಾಜ್ಯ ಸರ್ಕಾರವು ವಿವೇಚನೆಯಿಂದ ವರ್ತಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಜಿಲ್ಲಾ ಸಂಚಾಲಕಿ ಮಾಲವಿಕ ಗುಬ್ಬಿವಾಣಿ ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮವಾದ ಧಾರ್ಮಿಕ ಕಟ್ಟಡಗಳ ತೆರವು ಪ್ರಕರಣದಲ್ಲಿ ಹೆಚ್ಚಿನವು ಹಿಂದೂ ದೇವಸ್ಥಾನಗಳಾಗಿದ್ದು, ಇದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ನ್ಯಾಯಾಂಗ ನಿಂದನೆ ತಪ್ಪಿಸಿಕೊಳ್ಳಲು ತೆರವಿಗೆ ಮೊದಲು ಸುಮ್ಮನೆ ಇದ್ದು, ನಂತರ ರಾಜಕೀಯ ಲಾಭಕ್ಕಾಗಿ ಮೈಸೂರಿನ ಸಂಸದರು ಬೊಬ್ಬೆ ಹೊಡೆಯಲು ಪ್ರಾರಂಭಿಸಿದ್ದಾರೆ ಎಂದು ಅವರು ಆರೋಪಿಸಿದರು.

ಸಂಸದ ಪ್ರತಾಪ್‌ ಸಿಂಹ ವಿರುದ್ಧ ಡೀಸಿಗೆ ದೂರು

ಬಿಜೆಪಿಯು ಕೇವಲ ವೋಟ್‌ ಬ್ಯಾಂಕ್‌ಗಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ ಎಂಬುದು ದೇಗುಲ ಧ್ವಂಸ ಪ್ರಕರಣದಿಂದ ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರಕ್ಕೆ ಹಿಂದೂ ಧರ್ಮದ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಇಂತಹ ದುರ್ಘಟನೆಗೆ ಅವಕಾಶ ನೀಡುತ್ತಿರಲಿಲ್ಲ. ಸಂಸದರು ಇದೇ ವಿಷಯವನ್ನು ಮುಂದಿಟ್ಟುಕೊಂಡು ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಸಂಸದರಾಗಿರುವ ಅವರು ನಂಜನಗೂಡು ಸಮೀಪದ ಮಹದೇವಮ್ಮ ದೇವಸ್ಥಾನ ಧ್ವಂಸವಾಗುವ ತನಕ ಸುಮ್ಮನಿದ್ದು ಈಗ ವಿರೋಧಿಸುತ್ತಿರುವ ನಾಟಕವಾಡುತ್ತಿದ್ದಾರೆ ಎಂದು ಅವರು ದೂರಿದರು.

ಹಿಂದೂ ದೇವಸ್ಥಾನಗಳ ಜೊತೆಗೆ ಚರ್ಚ್, ಮಸೀದಿಗಳನ್ನೂ ಒಡೆಯಬೇಕೆಂದು ಪ್ರತಾಪ್‌ ಸಿಂಹ ಆಗ್ರಹಿಸುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಪ್ರಬುದ್ಧ ಹೇಳಿಕೆ ನೀಡಿ, ಅಶಾಂತಿ ಸೃಷ್ಟಿಸಲು ಸಂಸದರು ಮುಂದಾಗುತ್ತಿರುವುದು ದುರದೃಷ್ಟಕರ. ಸುಪ್ರೀಂಕೋರ್ಟ್‌ ಆದೇಶವನ್ನು ನೆಪ ಮಾಡಿಕೊಂಡು ಹಲವು ದಶಕಗಳಿಂದ ಇರುವಂತಹ ಮೈಸೂರಿನ ಧಾರ್ಮಿಕ ಕಟ್ಟಡಗಳನ್ನು ಕೆಡವಿ, ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವುದನ್ನು ಸರಿಯಲ್ಲ ಎಂದು ಅವರು ತೀವ್ರವಾಗಿ ಖಂಡಿಸಿದರು.

click me!