ತರಳಬಾಳು ಶ್ರೀಗೆ ಒಲಿದ ಆದಿಕವಿ ಪುರಸ್ಕಾರ

By Kannadaprabha NewsFirst Published Feb 15, 2021, 7:26 AM IST
Highlights

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನಿಂದ ಕೊಡುವ ಆದಿಕವಿ ಪುರಸ್ಕಾರಕ್ಕೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ. 

 ಚಿತ್ರದುರ್ಗ (ಫೆ.15):  ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನಿಂದ ಕೊಡಮಾಡುವ ಆದಿಕವಿ ಪುರಸ್ಕಾರಕ್ಕೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪರಿಷತ್‌ ಪ್ರಧಾನ ಕಾರ್ಯದರ್ಶಿ ರಘುನಂದನ್‌ಭಟ್‌ ವಾಗ್ದೇವಿ ಪ್ರಶಸ್ತಿಗೆ ಸಂಸ್ಕೃತ ವಿದ್ವಾಂಸ ಬೆಂಗಳೂರಿನ ಡಾ.ಶಂಕರ ರಾಜಾರಾಮನ್‌ ಪರಿಣಗನೆ ಮಾಡಲಾಗಿದೆ ಎಂದರು.

ಪ್ರಶಸ್ತಿಯು ತಲಾ ಒಂದು 1 ಲಕ್ಷ ನಗದು, ಕಂಚಿನ ಫಲಕ ಹಾಗೂ ಸನ್ಮಾನ ಪತ್ರ ಹೊಂದಿರುತ್ತದೆ. ಫೆ.21ರ ಬೆಳಗ್ಗೆ 10.30ಕ್ಕೆ ಸಿರಿಗೆರೆ ತರಳಬಾಳು ಬೃಹನ್ಮಠದ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ರೈತ ರತ್ನ ಪ್ರಶಸ್ತಿ ತೀರ್ಪುಗಾರರ ಮನದಾಳದ ಮಾತುಗಳು ...

ಶ್ರೇಷ್ಠ ಸಾಧನೆ ಮಾಡಿರುವ ಹಿರಿಯರಿಗೆ ಪ್ರಶಸ್ತಿ ನೀಡುತ್ತ ಬರಲಾಗಿದೆ. ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಐದು ದಶಕಗಳಿಗೂ ಹೆಚ್ಚು ಕಾಲ ಧಾರ್ಮಿಕ, ಸಾಹಿತ್ಯ, ಆಧುನಿಕ ತಂತ್ರಜ್ಞಾನ ಸೇರಿ ಮತ್ತಿತರ ಕ್ಷೇತ್ರಗಳಲ್ಲಿ ಅತ್ಯುತ್ತಮ ಹಾಗೂ ಉಪಯುಕ್ತ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಇವು ಸಮಾಜದ ಸದೃಢತೆಗೆ ಸಹಕಾರಿಯಾಗಿವೆ. ಈ ಕಾರಣಕ್ಕಾಗಿ ಶ್ರೀಗಳನ್ನು ಆದಿಕವಿ ಪುರಸ್ಕಾರಕ್ಕೆ ಈ ಬಾರಿ ಆಯ್ಕೆ ಮಾಡಲಾಗಿದೆ. ಅದೇ ರೀತಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯಮಟ್ಟದಲ್ಲಿ ಛಾಪು ಮೂಡಿಸಿರುವ ಸಂಸ್ಕೃತ ವಿದ್ವಾಂಸ ಬೆಂಗಳೂರಿನ ಡಾ.ಶಂಕರ ರಾಜಾರಾಮನ್‌ ಅವರನ್ನು ವಾಗ್ದೇವಿ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಹೇಳಿದರು.

ಫೆ.21ರಂದು ಸಿರಿಗೆರೆಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ, ಕರ್ನಾಟಕ ಉತ್ತರದ ಧರ್ಮಜಾಗರಣ ಪ್ರಾಂತ ಸಹಸಂಯೋಜಕ ಡಾ.ಹನುಮಂತ ಮಳಲಿ, ಮುಖ್ಯವಕ್ತಾರರಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಕರ್ನಾಟಕ ಅಧ್ಯಕ್ಷ ಪ್ರೊ.ಪ್ರೇಮಶೇಖರ, ಹಿರಿಯ ಉಪಾಧ್ಯಕ್ಷ ಬಾಗಲಕೋಟೆಯ ಎಸ್‌.ಜಿ.ಕೋಟಿ, ಇಸ್ರೋ ಮಾಜಿ ವಿಜ್ಞಾನಿ ಕೆ.ಹರೀಶ್‌, ಉದ್ಯಮಿಗಳಾದ ವೀಣಾ ಜಯರಾಮ್‌, ಎಸ್‌.ಜಯರಾಮ್‌ ಉಪಸ್ಥಿತರಿರುವರು ಎಂದು ಹೇಳಿದರು.

ಪರಿಷತ್‌ನಿಂದ ಈಗಾಗಲೇ ಎರಡು ಪ್ರಾಂತ ಸಮ್ಮೇಳನ ನಡೆಸಲಾಗಿದೆ. ಮೊದಲನೆಯದು ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಎರಡನೆಯದು ಮೈಸೂರಿನಲ್ಲಿ ನಡೆಸಲಾಗಿದೆ. ಮೂರನೇ ಸಮ್ಮೇಳನವನ್ನು ಡಿಸೆಂಬರ್‌ನಲ್ಲಿ ಉಜಿರೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಸಂಸ್ಕಾರ ಭಾರತೀಯ ಡಾ.ಕೆ.ರಾಜೀವಲೋಚನ, ಸಂಘಟಕ ಡಿ.ಓ.ಮುರಾರ್ಜಿ ಸುದ್ದಿಗೋಷ್ಠಿಯಲ್ಲಿ ಇದ್ದರು.

click me!