87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಧಾರವಾಡದ್ಯಂತ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ

By Kannadaprabha NewsFirst Published Sep 25, 2024, 5:32 PM IST
Highlights

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಜಿಲ್ಲೆಯಾದ್ಯಂತ ಸೆ.30 ಮತ್ತು ಅ.1 ರಂದು ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಸೆ.25): 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಜಿಲ್ಲೆಯಾದ್ಯಂತ ಸೆ.30 ಮತ್ತು ಅ.1 ರಂದು ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ ಈ ಕುರಿತು ಪ್ರಕಟಣೆ ನೀಡಿರುವ ಅವರು ಸೆ, 30 ರಂದು ಬೆಳಿಗ್ಗೆ 9 ಗಂಟೆಗೆ ಅಣ್ಣಿಗೇರಿ ತಾಲೂಕಿನಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥವನ್ನು ಸ್ವಾಗತಿಸಲಾಗುವುದು ರಥವು ಭದ್ರಾಪೂರ, ನಲವಡಿ, ಶಿರಗುಪ್ಪಿ ಯರಗುಪ್ಪಿ, ಬೆನಕನಹಳ್ಳಿ ಮಾರ್ಗದ ಮೂಲಕ ಸಂಚರಿಸಲಿದೆ. ಮಧ್ಯಾಹ್ನ 12.30 ಗಂಟೆಗೆ ಕುಂದಗೋಳ ತಾಲೂಕಿನಿಂದ ಶೇರೆವಾಡ, ನೂಲ್ವಿ, ಅದರಗುಂಚಿ, ಕುಂದಗೋಳ ಕ್ರಾಸ್, ಹುಬ್ಬಳ್ಳಿ ರಿಂಗ್ ರಸ್ತೆ ಮೂಲಕ ಸಂಜೆ 5 ಗಂಟೆಗೆ ಕಲಘಟಗಿ ತಾಲೂಕಿಗೆ ಸಂಚರಿಸಲಿದೆ.

Latest Videos

ಅಕ್ಟೋಬರ್ 1 ರಂದು ಬೆಳಿಗ್ಗೆ 10.30 ಗಂಟೆಗೆ ಕಲಘಟಗಿ ಮಾರ್ಗವಾಗಿ ಮಿಶ್ರಿಕೋಟಿ, ಹುಬ್ಬಳ್ಳಿ ಸಿದ್ಧಾರೋಢ ಮಠ, ಹುಬ್ಬಳ್ಳಿಯ ಕಿತ್ತೂರಾಣಿ ಚನ್ನಮ್ಮ ಸರ್ಕಲ್, ಹುಬ್ಬಳ್ಳಿಯ ಬಿ.ಆರ್.ಟಿ.ಎಸ್ ಮಾರ್ಗವಾಗಿ ಮಧ್ಯಾಹ್ನ 2 ಗಂಟೆಗೆ ಧಾರವಾಡ ಜಿಲ್ಲೆ ಕೇಂದ್ರಕ್ಕೆ ಬಂದು ಮದ್ಯಾಹ್ನ 3 ಗಂಟೆ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೋಗಲಿದೆ. ನಂತರ ಶಿವಳ್ಳಿ ಹೆಬಸೂರ ಮಾರ್ಗವಾಗಿ ನವಲಗುಂದ ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಅವರು ತಿಳಿಸಿದ್ದಾರೆ. ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಯಶಸ್ವಿಯಾಗಿ ಜರುಗಬೇಕು. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡಪರ, ರೈತ, ಕಾರ್ಮಿಕ ಸಂಘಟನೆಗಳು. ವಿದ್ಯಾ ಸಂಸ್ಥೆಗಳು,.

ಎನ್.ಸಿ.ಸಿ., ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೋಟರಿ, ಲಯನ್ಸ್ ಕ್ಲಬ್, ರೇಡ್ ಕ್ರಾಸ್ ಸಂಸ್ಥೆ, ಸ್ತ್ರೀ ಶಕ್ತಿ ಸಂಘಗಳು ಸೇರಿದಂತೆ ಇತರ ಸಂಘ-ಸಂಸ್ಥೆಗಳು, ಹಾಗೂ ಸಾರ್ವಜನಿಕರನ್ನು ಜೊತೆಗೂಡಿಸಿಕೊಂಡು ಕಲಾತಂಡಗಳ ಕಲಾ ಪ್ರದರ್ಶನದ ಜೊತೆಗೆ ಕನ್ನಡ ರಥಕ್ಕೆ ಗೌರವಯುತವಾಗಿ ಧಾರವಾಡ ಜಿಲ್ಲೆಗೆ ಸ್ವಾಗತಿಸಿ, ಆಯಾ ತಾಲ್ಲೂಕುಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಕನ್ನಡ ರಥಯಾತ್ರೆ ಸಂಚರಿಸುವ ವೇಳೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಂತರ ತಾಲ್ಲೂಕಿನ ಗಡಿ ಭಾಗಗಳಲ್ಲಿ ಬೀಳ್ಕೊಡಬೇಕು. ರಥಯಾತ್ರೆಯು ಆಯಾ ತಾಲ್ಲೂಕುಗಳಲ್ಲಿ ಸಂಚರಿಸುವಾಗ ಮತ್ತು ವಾಸ್ತವ್ಯದ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಬೇಕೆಂದು ಅವರು ತಿಳಿಸಿದ್ದಾರೆ. 

ಮುಡಾ ಹಗರಣದಿಂದ ಸಿದ್ದರಾಮಯ್ಯ ಭವಿಷ್ಯ ಅಂತ್ಯ: ಶಾಸಕ ಅರವಿಂದ ಬೆಲ್ಲದ

ತಾಲೂಕು ಆಡಳಿತ, ಜಿಲ್ಲಾ ಸಾಹಿತ್ಯ ಪರಿಷತ್ತು ಸೇರಿದಂತೆ ಆಯಾ ತಾಲ್ಲೂಕಿನ ತಾಲ್ಲೂಕು ಮಟ್ಟದ ಅಧಿಕಾರಿಗಳು ಕನ್ನಡ ಪರ ಸಂಘಟನೆಗಳು, ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ಏರ್ಪಡಿಸುವ ಮೂಲಕ ಕನ್ನಡ ಜ್ಯೋತಿ ರಥಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಮತ್ತು ಎಲ್ಲರೊಂದಿಗೆ ಸೂಕ್ತ ಸಮನ್ವಯ ಸಾಧಿಸಿ, ರಥಯಾತ್ರೆಯನ್ನು ಯಶಸ್ವಿಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಮನ್ವಯಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

click me!