ಚಿಕ್ಕಮಗಳೂರು ಜಿಲ್ಲಾ ಪ್ರವಾಸಿ ತಾಣಗಳ ಅಭಿವೃಧ್ಧಿಗೆ 80 ಕೋಟಿ: ಸಚಿವ ರವಿ

By Web DeskFirst Published Oct 3, 2019, 2:44 PM IST
Highlights

ಜಿಲ್ಲೆಯ ​ಅಯ್ಯನ ಕೆರೆಗೆ ಬಾಗಿನ ಅರ್ಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ| ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ| ಪ್ರವಾಸೋದ್ಯಮ ಇಲಾಖೆಯಿಂದ ಅಯ್ಯನಕೆರೆ ಸಮಗ್ರ ಅಭಿವೃದ್ಧಿ ಹಾಗೂ ಬೋಟಿಂಗ್‌ ವ್ಯವಸ್ಥೆಗೆ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ| ಪ್ರವಾಸಿತಾಣಗಳ ಸಮಗ್ರ ಅಭಿವೃದ್ಧಿಗೆ 80 ಕೋಟಿ ಗೂ ಹೆಚ್ಚು ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ ಸಚಿವ ಸಿ.ಟಿ. ರವಿ| 

ಚಿಕ್ಕಮಗಳೂರು(ಅ.3): ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ 80 ಕೋಟಿಗೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಅಯ್ಯನಕೆರೆಗೆ ಬುಧವಾರ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅಯ್ಯನಕೆರೆ ಸಮಗ್ರ ಅಭಿವೃದ್ಧಿ ಹಾಗೂ ಬೋಟಿಂಗ್‌ ವ್ಯವಸ್ಥೆಗೆ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ನಗರದ ಬಸವನಹಳ್ಳಿ ಕೆರೆ ಸಮಗ್ರ ಅಭಿವೃದ್ಧಿಗೆ 10 ಕೋಟಿ, ಕೋಟೆ ಕೆರೆಗೆ 2 ಕೋಟಿ, ಹಿರೇಕೊಳಲೆ ಕೆರೆಗೆ 1.50 ಕೋಟಿ, ಹಿರೇಮಗಳೂರಿಗೆ 3 ಕೋಟಿ, ಸೀತಾಳಯ್ಯನಗಿರಿಗೆ 1, ಮಾಣಿಕ್ಯಧಾರಾಕ್ಕೆ 2 ಕೋಟಿ, ದೇವೀರಮ್ಮ ದೇವಾಲಯದ ಅಭಿವೃದ್ಧಿಗೆ 4, ಬೋಳರಾಮೇಶ್ವರ ದೇವಾಲಯಕ್ಕೆ 2 ಕೋಟಿ ಸೇರಿದಂತೆ, ಶಕುನಿ ರಂಗನಾಥ ಸ್ವಾಮಿ ದೇವಾಲಯ, ಅಕ್ಕನಾಗಲಾಂಬಿಕಾದೇವಿ ಗದ್ದುಗೆ, ಸಿರಿಮನೆ ಫಾಲ್ಸ್‌, ದಬೆದಬೆ ಫಾಲ್ಸ್‌ ಸೇರಿದಂತೆ ವಿವಿಧ ಪ್ರವಾಸಿತಾಣಗಳ ಸಮಗ್ರ ಅಭಿವೃದ್ಧಿಗೆ 80 ಕೋಟಿಗಳಿಗೂ ಹೆಚ್ಚು ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಕಡೂರು, ಚಿಕ್ಕಮಗಳೂರು ಹಾಗೂ ತರೀಕೆರೆ ತಾಲೂಕುಗಳ 167 ಕೆರೆಗಳಿಗೆ ಭದ್ರಾ ಜಲಾಶಯದಿಂದ ನೀರುಹರಿಸುವ 1200 ಕೋಟಿಗಳ ಪ್ರಸ್ತಾವನೆ ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದೆ. ಈಗಾಗಲೇ ಪ್ರಸ್ತಾವನೆ ಕುರಿತು ಇಲಾಖೆಯಲ್ಲಿ ಚರ್ಚಿಸಲಾಗಿದೆ. ಈ ತಿಂಗಳಲ್ಲಿಯೇ ಮಂಡಳಿ ಸಭೆಯಲ್ಲಿ ವಿಚಾರ ಮಂಡಿಸಲಾಗುವುದು. ಅಲ್ಲಿ ಅನುಮೋದನೆ ದೊರೆತ ನಂತರ ಸಚಿವ ಸಂಪುಟ ಸಭೆಗೆ ವಿಷಯಬರಲಿದೆ. ಈ ಯೋಜನೆಗೆ ಮಂಜೂರಾತಿ ದೊರೆತಲ್ಲಿ ಸದಾಕಾಲ ಬರಗಾಲಕ್ಕೆ ತುತ್ತಾಗುವ 3 ತಾಲೂಕುಗಳ 167 ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಕೆರೆಗಳಲ್ಲಿ ಅಯ್ಯನಕೆರೆ ಮತ್ತು ಮದಗದಕೆರೆಯನ್ನೂ ಸೇರಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ವಿಧಾನಪರಿಷತ್ತು ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ, ವಿಧಾನ ಪರಿಷತ್ತು ಸದಸ್ಯ ಎಸ್‌.ಎಲ್‌.ಬೋಜೆಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ್‌ ಹಾಜರಿದ್ದರು.
 

click me!