ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನರಗುಂದ ರೈತರಿಗೆ ಬಂಪರ್ ಗಿಫ್ಟ್!

By Gowthami KFirst Published Aug 13, 2022, 5:55 PM IST
Highlights

ನರಗುಂದ ತಾಲೂಕಿನ ವ್ಯಾಪ್ತಿಯ ಜಮೀನುಗಳಿಗೆ ನೀರು ಪೂರೈಸುವ ದೃಷ್ಟಿಯಿಂದ 25 ವರ್ಷಗಳ ಹಿಂದೆ ರೂಪುಗೊಂಡಿದ್ದ ಏತ ನೀರಾವರಿ ಯೋಜನೆಗೆ ಮರು ಜೀವ ನೀಡುವ ನಿಟ್ಟಿನಲ್ಲಿ 80 ಕೋಟಿ ಮೀಸಲಿಡಲಾಗಿದೆ.

ಗದಗ (ಆ.13): ನರಗುಂದ ತಾಲೂಕಿನ ವ್ಯಾಪ್ತಿಯ ಬನಹಟ್ಟಿ, ಕುರ್ಲಗೇರಿ ಸುರಕೋಡ, ಖಾನಾಪುರ, ರೆಡ್ಡೇರನಾಗನೂರು, ಕೊಣ್ಣೂರು  ಗ್ರಾಮದ ಜಮೀನುಗಳಿಗೆ ನೀರು ಪೂರೈಸುವ ದೃಷ್ಟಿಯಿಂದ 25 ವರ್ಷಗಳ ಹಿಂದೆ ರೂಪುಗೊಂಡಿದ್ದ ಏತ ನೀರಾವರಿ ಯೋಜನೆಗೆ ಮರು ಜೀವ ನೀಡುವ ನಿಟ್ಟಿನಲ್ಲಿ 80 ಕೋಟಿ ಮೀಸಲಿಡಲಾಗಿದೆ ಅಂತಾ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ ತಿಳಿಸಿದ್ರು. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಜಾಕ್ ವೆಲ್ ಪೈಪ್ ರೀ ಮಾಡ್ಲಿಂಗ್ ಮಾಡಲು 80 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಪೈಪ್ ಗಳು ದುರಸ್ಥಿಯಾದಲ್ಲಿ, ನರಗುಂದ ಭಾಗದ 15 ರಿಂದ 20 ಸಾವಿರ ಎಕರೆ ಕೃಷಿ ಜಮೀನಿಗೆ ನೀರು  ಹರಿಸಬಹುದಾಗಿದೆ ಅಂತಾ ಹೇಳಿದ್ರು. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನರಗುಂದ ಜನರಿಗೆ ಸಿಹಿ ಸುದ್ದಿಯನ್ನ ಸಚಿವರು ನೀಡಿದ್ರು. ನರಗುಂದ ಪಟ್ಟಣದಲ್ಲಿ ನಡೆದ ತಿರಂಗಾಯಾಂತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಹಿನ್ನೆಲೆ ನರಗುಂದ ಬಿಜೆಪಿ ಯುವ ಘಟಕ, ಲಯನ್ಸ್ ಕ್ಲಬ್ ವತಿಯಿಂದ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ನೂರು ಮೀಟರ್ ಉದ್ದದ ತಿರಂಗಾ ಧ್ವಜದ ಮೆರವಣಿಗೆ ಮಾಡ್ಲಾಗಿದೆ. ನರಗುಂದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗೆ ಮರು ಜೀವ ನೀಡಲಾಗುವುದು ಅಂತಾ ಹೇಳಿದ್ರು.

ಸಚಿವ ಸಂಪುಟದಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಅಸ್ತು;
ಏತ ನೀರಾವರಿ ಯೋಜನೆಗಳಿಗೆ ಒಟ್ಟು 34.610 ಕಿ.ಮೀ. ಉದ್ದದ ಮತ್ತು 0.60 ರಿಂದ 1,00 ಮೀಟರ್ ವ್ಯಾಸದ ಸಿಮೆಂಟ್ ಪೈಪ್‌ ಗಳನ್ನು ಅಳವಡಿಸಲಾಗಿದ್ದು, ಈ ಪೈಪ್‌ಗಳಲ್ಲಿ ನೀರಿನ ಸೋರಿಕೆ ಆಗುತ್ತಿರುವುದರಿಂದ ರೈತರ ಹೊಲಗಳಲ್ಲಿ ನೀರು ನಿಂತು ಕೃಷಿ ಚಟುವಟಿಕೆ ಮಾಡಲು ಅಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳೆಯ ಸಿಮೆಂಟ್ ಪೈಪ್‌ಗಳನ್ನು ಬದಲಾಯಿಸಿ ಎಂ.ಎಸ್‌. ಪೈಪ್ (ಕಬ್ಬಿಣದ ಪೈಪ್) ಅಳವಡಿಸುವ ಕಾಮಗಾರಿ ಕೈ ಗೊಳ್ಳುವ ಉದ್ದೇಶ ಹೊಂದಲಾಗಿದೆ.  ದಿ 12-08-2022 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಯೋಜನೆಗೆ ಬಗ್ಗೆ ಪ್ರಸ್ತಾಪಿಸಿ, ಅಂದಾಜು 80 ಕೋಟಿ ರೂಪಾಯಿ ಬಿಡುಗಡೆಗೊಳಿಸಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿದ ಸಚಿವರು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಅಂತಾ ಹೇಳಿದ್ರು.. 

ಬಂಡಾಯದ ನಾಡಲ್ಲಿ ಗಮನ ಸೆಳೆದ ತ್ರಿವರ್ಣ ಧ್ವಜ ಯಾತ್ರೆ;
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತ್ನಾಡುವ ಮುನ್ನ, ಸಂಗೊಳ್ಳಿರಾಯಣ್ಣ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಚಿವ ಸಿಸಿ ಪಾಟೀಲ ತಿರಂಗಾ ಯಾತ್ರೆಗೆ ಚಾಲನೆ ನೀಡಿದ್ರು. ನಂತ್ರ ನರಗುಂದ ಪ್ರಮುಖ ಬೀದಿಗಳಲ್ಲಿ ತಿರಂಗಾ ಮೆರವಣಿಗೆ ನಡೆಯಿತು. ನರಗುಂದ ಬಿಜೆಪಿ ಯುವ ಘಟಕ, ಲಾಯನ್ಸ್ ಕ್ಲಬ್ ಆಯೋಜಿಸಲಾಗಿದ್ದ ಧ್ವಜ ಯಾತ್ರೆಯಲ್ಲಿ, ನೂರು ಅಡಿ ಉದ್ದದ ಧ್ವಜ ಹಿಡಿದು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ರು. ದಾರಿಯುದ್ದಕ್ಕೂ ಭಾರತಮಾತೆಗೆ ಜೈ ಕಾರ ಕೂಗುತ್ತ ನಡೆದ್ರು.

ಪಟ್ಟಣದ ಲೋದಿ ಗಲ್ಲಿ, ಪುರಸಭೆ ಆವರಣ ಮೂಲಕ ಎಪಿಎಂಸಿ ಆವರಣದ ವರೆಗೆ ಯಾತ್ರೆ ನಡೆಯಿತು. ಪ್ರಮುಖ ಸರ್ಕಲ್ ನಲ್ಲಿನ ಬಾಬಾ ಸಾಹೇಬ, ಬಸವೇಶ್ವರ ಮೂರ್ತಿ, ಛತ್ರಿ ಪತಿ ಶಿವಾಜಿ ಮೂರ್ತಿಗಳಿಗೆ ಮಾಲಾರ್ಪಣೆ ಮಾಡುತ್ತ ಯಾತ್ರೆ ಮುಂದುವರೆಯಿತು. ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಬಂದು ಮಕ್ಕಳು ಗಮನ ಸೆಳೆಯಿತು. ಬೀದಿಯಲ್ಲಿ ಸಾಗುತ್ತಿದ್ದ ತ್ರಿವರ್ಣ ಯಾತ್ರೆಗೆ ಹೂ ಮಳೆಗರೆದು ಜನ ದೇಶಾಭಿಮಾನ ಮೆರೆದ್ರು.

click me!