ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಂದ 6 ಲಕ್ಷ ದೇಣಿಗೆ

By Kannadaprabha NewsFirst Published Jan 21, 2021, 9:52 AM IST
Highlights

ಕೆ.ಆರ್‌.ಪುರ ಕ್ಷೇತ್ರ ವ್ಯಾಪ್ತಿಯ 2 ವಾರ್ಡ್‌ನಿಂದ ಸುಮಾರು 1 ಕೋಟಿ ರು.ನಷ್ಟು ದೇಣಿಗೆ ಸಂಗ್ರಹ| ಕ್ಷೇತ್ರದ ಎಲ್ಲಾ ವಾರ್ಡ್‌ಗಳಲ್ಲೂ ಅಭಿಯಾನ| ದೇಣಿಗೆ ನೀಡುವ ಮೂಲಕ ನಿಧಿ ಸಂಗ್ರಹದಲ್ಲಿ ಕೈಜೋಡಿಸಿದ ಮುಸ್ಲಿಮರು| 

ಬೆಂಗಳೂರು(ಜ.21):  ಸ್ವತಃ ದೇಣಿಗೆ ನೀಡುವ ಮೂಲಕ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಕೈಗೊಂಡಿರುವ ಶ್ರೀರಾಮ ಮಂದಿರ ನಿಧಿ ಸಂಗ್ರಹ ಮಹಾ ಅಭಿಯಾನದಲ್ಲಿ ಮುಸ್ಲಿಂ ಮುಖಂಡರು ಕೈ ಜೋಡಿಸಿದ್ದಾರೆ.

ಕೆ.ಆರ್‌.ಪುರ ಕ್ಷೇತ್ರದ ಬಸವನಪುರ ವಾರ್ಡ್‌ನಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ನೇತೃತ್ವದಲ್ಲಿ ಬುಧವಾರ ನಡೆದ ಶ್ರೀರಾಮ ಮಂದಿರ ನಿಧಿ ಸಂಗ್ರಹ ಅಭಿಯಾನದಲ್ಲಿ 50 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಲಾಯಿತು. ಮುಸ್ಲಿಂ ಮುಖಂಡರು 6 ಲಕ್ಷ ರು. ದೇಣಿಗೆ ನೀಡಿದರು.

'ರಾಮಮಂದಿರ ಏಕೆ ಬೇಡ' : ಭಗವಾನ್‌ರ ವಿವಾದಿತ ಕೃತಿ ಖರೀದಿ ಬಗ್ಗೆ ಸರ್ಕಾರ ಸ್ಪಷ್ಟನೆ

ಈ ವೇಳೆ ಮಾತನಾಡಿದ ಸಚಿವ ಬಸವರಾಜು, ಕೆ.ಆರ್‌.ಪುರ ಕ್ಷೇತ್ರ ವ್ಯಾಪ್ತಿಯ 2 ವಾರ್ಡ್‌ನಿಂದ ಸುಮಾರು 1 ಕೋಟಿ ರು.ನಷ್ಟು ದೇಣಿಗೆ ಸಂಗ್ರಹಿಸಲಾಗಿದೆ. ಕ್ಷೇತ್ರದ ಎಲ್ಲಾ ವಾರ್ಡ್‌ಗಳಲ್ಲೂ ಅಭಿಯಾನ ನಡೆಸಲಾಗುವುದು ಎಂದರು.
ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್‌ ಮಾತನಾಡಿ, ಮುಸ್ಲಿಂ ಬಾಂಧವರಾದ ಅಬ್ದುಲ್‌ ಸಮಾದ್‌ 2 ಲಕ್ಷ, ಕರೀಂಪಾಷಾ ಹಾಗೂ ತನ್ವಿರ್‌ ನೂರುದ್ದಿನ್‌ ತಲಾ 1 ಲಕ್ಷ, ಅಬ್ದುಲ್‌ ನಬಿ, ಸರ್ದಾರ್‌ ಪಾಷ, ಅಬ್ದುಲ್‌ ಸಲಾಂ ಹಾಗೂ ಅಲತಾಂ 50,000 ಸೇರಿದಂತೆ ಒಟ್ಟು 6 ಲಕ್ಷ ನೀಡುವ ಮೂಲಕ ನಿಧಿ ಸಂಗ್ರಹದಲ್ಲಿ ಕೈಜೋಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಜಿಲ್ಲಾ ಉಪಾಧ್ಯಕ್ಷ ಮುನೇಗೌಡ, ಮುಖಂಡರಾದ ಅಂತೋಣಿ ಸ್ವಾಮಿ, ಡಿ.ಕೆ.ದೇವೇಂದ್ರ, ರವಿಕುಮಾರ್‌, ಮೇಡಹಳ್ಳಿ ಜಗದೀಶ್‌, ಶ್ರೀರಾಮ ಇತರರಿದ್ದರು.
 

click me!