ಬಳ್ಳಾರಿ: ಮದುವೆ ಆರತಕ್ಷತೆಯಲ್ಲಿ 51 ಜನರ ರಕ್ತದಾನ

By Kannadaprabha NewsFirst Published Aug 27, 2023, 10:52 PM IST
Highlights

ಬಿ.ದೇವಣ್ಣನವರ ಪುತ್ರ ಕೆ.ಶ್ರೀಕಾಂತ್‌ ಹಾಗೂ ಹೇಮಾಶ್ರೀ ದಂಪತಿ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಸ್ವಯಂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ದೇವಣ್ಣನವರ ಕುಟುಂಬ ಸದಸ್ಯರು, ಸ್ನೇಹಿತರು ಸೇರಿದಂತೆ ಒಟ್ಟು 51 ಜನರು ರಕ್ತದಾನ ಮಾಡಿದರು.

ಬಳ್ಳಾರಿ(ಆ.27): ಮಹಾರಕ್ತದಾನಿ ಎಂದೇ ಹೆಸರಾಗಿರುವ ನಗರದ ಎಸ್‌ಬಿಐ ಬ್ಯಾಂಕ್‌ ನೌಕರ ಬಿ. ದೇವಣ್ಣ ಅವರು ಪುತ್ರನ ಮದುವೆಯ ಆರತಕ್ಷತೆ ಸಮಾರಂಭದಲ್ಲೂ ರಕ್ತದಾನ ಏರ್ಪಡಿಸುವ ಮೂಲಕ ಮಾನವೀಯ ಕಾಳಜಿ ಮೆರೆದಿದ್ದಾರೆ.

ನಗರದ ಬಲಿಜ ಭವನದಲ್ಲಿ ಜರುಗಿದ ಬಿ.ದೇವಣ್ಣನವರ ಪುತ್ರ ಕೆ.ಶ್ರೀಕಾಂತ್‌ ಹಾಗೂ ಹೇಮಾಶ್ರೀ ದಂಪತಿ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಸ್ವಯಂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ದೇವಣ್ಣನವರ ಕುಟುಂಬ ಸದಸ್ಯರು, ಸ್ನೇಹಿತರು ಸೇರಿದಂತೆ ಒಟ್ಟು 51 ಜನರು ರಕ್ತದಾನ ಮಾಡಿದರು.

ಲೋಕಸಭೆಗೆ ಶ್ರೀರಾಮುಲು ಸ್ಪರ್ಧಿಸುವುದು ಸೂಕ್ತ: ಸೋಮಶೇಖರ ರೆಡ್ಡಿ

ಅಷ್ಟೇ ಅಲ್ಲ, ಮಗನ ಮದುವೆ ಸಮಾರಂಭ ನಿಮಿತ್ತ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ .10 ಸಾವಿರ ಹಾಗೂ ಶಾಂಭವಿ ಭಜನಾ ಟ್ರಸ್ಟ್‌ಗೆ .51 ಸಾವಿರ ದೇಣಿಗೆ ನೀಡಿ ಸಮಾಜಮುಖಿ ಕೆಲಸಕ್ಕೆ ದೇವಣ್ಣ ನೆರವಾದರು.
ಶ್ರೀಕಾಂತ -ಹೇಮಾಶ್ರೀ ಮದುವೆಗೆ ಆಗಮಿಸಿದ್ದ ಕುಟುಂಬ ಸದಸ್ಯರು ಹಾಗೂ ಬಂಧುಮಿತ್ರರು ಮದುವೆ ಸಮಾರಂಭದ ಬಿಡುವಿಲ್ಲದ ಕೆಲಸದ ನಡುವೆಯೂ ರಕ್ತದಾನ ಶಿಬಿರಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡ ದೇವಣ್ಣನರ ಸೇವಾ ಕಾರ್ಯ ಕಂಡ ಅನೇಕರು, ಆರತಕ್ಷತೆಯ ಸಮಾರಂಭದ ಬಳಿಕ ತಾವೂ ರಕ್ತದಾನ ಮಾಡಿ ಸಾರ್ಥಕಭಾವ ಕಂಡುಕೊಂಡರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕಮ್ಮರಚೇಡು ಮಠದ ಶ್ರೀಕಲ್ಯಾಣಸ್ವಾಮಿ ದೇವಣ್ಣ ಕುಟುಂಬ ಸದಸ್ಯರ ಸೇವಾ ಕಾರ್ಯ ಶ್ಲಾಘಿಸಿದರು.

ಸರ್ಕಾರಿ ನೌಕರರು ರಜೆ ದಿನಗಳಲ್ಲಿ ಕುಟುಂಬ ಜತೆ ಇರಲು ಬಯಸುತ್ತಾರೆ. ಇಲ್ಲವೇ ಗೆಳೆಯರ ಜತೆ ಪ್ರವಾಸ ಮತ್ತಿತರ ಕಡೆ ತೆರಳಿ ಸಂಭ್ರಮಿಸುತ್ತಾರೆ. ಆದರೆ, ದೇವಣ್ಣವರು ಬ್ಯಾಂಕ್‌ ನೌಕರರಾಗಿದ್ದು ರಜೆಗಳನ್ನು ಸಮಾಜಸೇವೆಗೆ ವಿನಿಯೋಗ ಮಾಡಿದ್ದಾರೆ. ಇಂತಹ ವ್ಯಕ್ತಿತ್ವಗಳು ಸಮಾಜದಲ್ಲಿ ಅಪರೂಪ. ಪ್ರತಿಯೊಂದರಲ್ಲೂ ಸ್ವಾರ್ಥದ ಚಿಂತನೆ ಹೆಚ್ಚುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ದೇವಣ್ಣನವರು ವಿಶೇಷವಾಗಿ ಕಾಣುತ್ತಾರೆ ಎಂದರಲ್ಲದೆ, ದೇವಣ್ಣನವರ ಬದುಕು ಬೇರೆಯವರಿಗೆ ಆದರ್ಶವಾಗಿದೆ ಎಂದು ಶ್ಲಾಘಿಸಿದರು.

ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಎಂ.ಎ. ಶಕೀಬ್‌, ಸದಸ್ಯರಾದ ಎಲ್‌ಐಸಿ ರಾಮುಕು, ಕೆ.ಗೋಪಾಲ, ಶಿವಸಾಗರ, ಹರಿಶಂಕರ ಸೇರಿದಂತೆ ಅನೇಕ ಗಣ್ಯರು ಆರಕ್ಷತೆಯಲ್ಲಿ ಪಾಲ್ಗೊಂಡಿದ್ದರು.

ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಆರ್‌ಪಿಪಿಯಿಂದ ಸಾಮೂಹಿಕ ವಿವಾಹ; ಗಣಿಧಣಿಗೆ ಮರಳಿ ಬರುತ್ತಾ ಅದೃಷ್ಟ?

ನಗರದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಉದ್ಯೋಗಿಯಾಗಿರುವ ದೇವಣ್ಣನವರು 1982ರಿಂದ ರಕ್ತದಾನ ಮಾಡುತ್ತಾ ಬಂದಿದ್ದಾರೆ. ಈವರೆಗೆ 108 ಬಾರಿ ರಕ್ತದಾನ ಮಾಡಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ರಕ್ತದಾನದ ಮಹತ್ವ ಕುರಿತು ಅರಿವು ಮೂಡಿಸುವ ಕೆಲಸವೂ ಮಾಡಿದ್ದಾರೆ. ಸ್ಪಂದನಾ ಚಾರಿಟೇಬಲ್‌ ಟ್ರಸ್ಟ್‌ ಹುಟ್ಟು ಹಾಕಿ ಅದರ ಮೂಲಕ ಅನೇಕ ಸೇವಾ ಕಾರ್ಯ ಕೈಗೊಂಡಿದ್ದಾರೆ. ದೇವಣ್ಣ ಎಷ್ಟರ ಮಟ್ಟಿಗೆ ನಗರದಲ್ಲಿ ಖ್ಯಾತಿ ಎಂದರೆ ಎಸ್‌ಬಿಐ ಬ್ಯಾಂಕ್‌ ನೌಕರ ಎನ್ನುವುದಕ್ಕಿಂತ ಬ್ಲಡ್‌ ಡೋನರ್‌ ದೇವಣ್ಣ ಎಂದೇ ಚಿರಪರಿಚಿತರಾಗಿದ್ದಾರೆ.

ರಕ್ತದಾನದಿಂದ ಜೀವ ಉಳಿಸಲು ಸಾಧ್ಯ ಎಂದರಿತ ಬಳಿಕ ರಕ್ತದಾನ ಮಾಡಲು ಶುರು ಮಾಡಿದೆ. ಈವರೆಗೆ 108 ಬಾರಿ ರಕ್ತದಾನ ಮಾಡಿರುವೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿರುವೆ. ಮದುವೆ ಸಮಾರಂಭದಲ್ಲೂ ರಕ್ತದಾನ ಹಮ್ಮಿಕೊಳ್ಳುವ ಮೂಲಕ ಅದರ ಮಹತ್ವ ತಿಳಿಸುವ ಕೆಲಸವಾಗಿದೆ ಎಂದು ಬಳ್ಳಾರಿ ಎಸ್‌ಬಿಐ ನೌಕರ ಬಿ. ದೇವಣ್ಣ ತಿಳಿಸಿದ್ದಾರೆ. 

click me!