ಮಾಗಡಿಗೆ 5 ಕೆಪಿಎಸ್ಸಿ ಶಾಲೆ ಮಂಜೂರು: ಸಚಿವ ಮಧು ಬಂಗಾರಪ್ಪ

Kannadaprabha News   | Kannada Prabha
Published : Jun 07, 2025, 09:04 PM IST
Madhu Bangarappa Karnataka

ಸಾರಾಂಶ

ಪಂಚಾಯಿತಿಗೊಂದು ಮಾದರಿ ಶಾಲೆ ಮಾಡುವ ನಿಟ್ಟಿನಲ್ಲಿ ಮಾಗಡಿ ತಾಲೂಕಿಗೆ 5 ಕೆಪಿಎಸ್ಸಿ ಶಾಲೆ ಮಂಜೂರಾತಿ ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಹೇಳಿದರು.

ಮಾಗಡಿ (ಜೂ.07): ಪಂಚಾಯಿತಿಗೊಂದು ಮಾದರಿ ಶಾಲೆ ಮಾಡುವ ನಿಟ್ಟಿನಲ್ಲಿ ಮಾಗಡಿ ತಾಲೂಕಿಗೆ 5 ಕೆಪಿಎಸ್ಸಿ ಶಾಲೆ ಮಂಜೂರಾತಿ ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಹೇಳಿದರು. ತಾಲೂಕಿನ ನೇತೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಕಾಮಗಾರಿ ಶಂಕುಸ್ಥಾಪನೆ 5 ಕೋಟಿ ವೆಚ್ಚದಲ್ಲಿ, ಪಟ್ಟಣದಲ್ಲಿ ಗುರುಭವನ ನಿರ್ಮಾಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಚೇರಿ, ಸಮನ್ವಯ ಅಧಿಕಾರಿಗಳ ಕಟ್ಟಡ ಶಂಕುಸ್ಥಾಪನೆ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಠಡಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚಾಯಿತಿಗೊಂದು ಮಾದರಿ ಶಾಲೆ ಮಾಡುವ ನಿಟ್ಟಿನಲ್ಲಿ ಏಷ್ಯನ್ ಡೆವಲಂಪ್ಮೆಂಟ್ ವತಿಯಿಂದ 5 ಸಾವಿರ ಕೋಟಿ ಅನುದಾನ ಮೂಲಕ ಈ ವರ್ಷ 500 ಕೆಪಿಎಸಿ ಶಾಲೆ ಮಾಡಲಾಗುತ್ತಿದ್ದು, ಮಾಗಡಿ ತಾಲೂಕಿಗೆ 2 ರಿಂದ 3 ಶಾಲೆ ಮಂಜೂರಾತಿ ಮಾಡುತ್ತೇನೆ, ಮುಂದಿನ ಸಾಲಿಗೆ ಹೆಚ್ಚುವರಿ ಅನುದಾನ ಪಡೆದು ಇನ್ನು 2 ಶಾಲೆ ಮಂಜೂರಾತಿ ಮಾಡುವುದಾಗಿ ಸಭೆಯಲ್ಲಿ ತಿಳಿಸುತ್ತಿದ್ದಂತೆ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ಶಾಸಕ ಬಾಲಕೃಷ್ಣ ನಮಗೆ 5 ಶಾಲೆಯನ್ನು ಈ ಸಾಲಿನಲ್ಲೆ ಮಂಜೂರಾತಿ ಕೊಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಸಚಿವರು ಹೆಚ್.ಎಂ.ರೇವಣ್ಣನವರು ಸಿದ್ದರಾಮಯ್ಯನವರಿಂದ ಅನುದಾನ ಬಿಡುಗಡೆ ಮಾಡಿಸದರೆ ಈ ಸಾಲಿನಲ್ಲೆ 5 ಕೆಪಿಎಸ್ಸಿ ಶಾಲೆ ಕೊಡಲಾಗುತ್ತದೆಂದು ಭರವಸೆ ನೀಡಿದರು.

ಬಾಲಕೃಷ್ಣರವರಿಗೆ ಸಚಿವ ಸ್ಥಾನ ನೀಡಲಿ: ನಾನು 2 ನೇ ಬಾರಿಗೆ ಶಾಸಕನಾಗಿದ್ದು ಹಲವು ಬಾರಿ ಚುನಾವಣೆಯಲ್ಲಿ ಸೋತ್ತಿದ್ದೇನೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರವರು ನನಗೆ ಮೊದಲ ಬಾರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಕಷ್ಟ ಇರುವ ಇಲಾಖೆಯನ್ನೆ ಕೊಟ್ಟಿದ್ದು 2 ವರ್ಷದಲ್ಲಿ ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತಿದ್ದೇನೆ. ಶಾಸಕ ಬಾಲಕೃಷ್ಣರವರು ಹಿರಿಯರಾಗಿದ್ದು ಅವರ ಸೇವೆ ಮಾಗಡಿಗೆ ಸೀಮಿತವಾಗದೆ ರಾಜ್ಯಕ್ಕೂ ವಿಸ್ತರಿಸಲಿ. ಬೇಕಾದರೆ ನನ್ನ ಖಾತೆಯನ್ನೆ ಅವರಿಗೆ ನೀಡಲು ಸಿದ್ದನಿದ್ದೇನೆ, ಇದನ್ನು ಮುಖ್ಯಮಂತ್ರಿಗಳು ಹಾಗೂ ಹೈಕಮೆಂಡ್ ನಿರ್ಧರಿಸುತ್ತಾರೆಂದು ಹೇಳಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಸರ್ಕಾರ ಗ್ಯಾರಂಟಿಗಳಿಗೆ ಸೀಮಿತವಾಗದೆ ಅಭಿವೃದ್ಧಿ ಕೂಡ ಮಾಡಲಾಗುತ್ತಿದ್ದು ಶಿಕ್ಷಕರ ಅನೇಕ ವರ್ಷದ ಬೇಡಿಕೆಯನ್ನು ಈಡೇರಿಸುವ ಕೆಲಸ ಮಾಡಲಾಗುತ್ತಿದ್ದು, ಇನ್ನು 6 ತಿಂಗಳಲ್ಲಿ ಗುರು ಭವನ ನಿರ್ಮಾಣವಾಗಲಿದ್ದು 5 ಕೋಟಿ ಅನುದಾನ ನೀಡಿದ್ದು ಶಿಕ್ಷಕರು 100 ಕೋಟಿ ಅನುದಾನ ಕೊಡಬೇಕು. ಎಚ್.ಎಂ.ರೇವಣ್ಣನವರು ಓದಿದ ಜಿಕೆಬಿಎಂಎಸ್ ಶಾಲೆಯನ್ನು ಕೆಪಿಎಸ್ಸಿ ಶಾಲೆಯನ್ನಾಗಿ ಪರಿವರ್ತಿಸಲಾಗುತ್ತಿದೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಬಿಪಿಎಲ್ ಕುಟುಂಬಸ್ಥರು ಆಗಿರುವುದರಿಂದ ಸರ್ಕಾರದಿಂದ ಸೌಲಭ್ಯಗಳನ್ನು ಕೊಡುತ್ತೇವೆ,

ಶಿಕ್ಷಕರು ಗುಣಮಟ್ಟದ ಶಿಕ್ಷಕ ಕೊಡಬೇಕು. ಕೆಪಿಎಸ್ಸಿ ಶಾಲೆಯಾದಾಗ ಇಂಗ್ಲೀಷ್ ತರಬೇತಿಯನ್ನು ಶಿಕ್ಷಕರಿಗೆ ನೀಡಬೇಕು ಮಧುಬಂಗಾರಪ್ಪ ನವರ ತಂದೆ ಬಂಗಾರಪ್ಪನವರು ರೈತರಿಗೆ ಉಚಿತ ವಿದ್ಯುತ್ ಶೇ.15 ರಷ್ಟು ಗ್ರಾಮೀಣ ಕೃಪಾಂಕ, ಆರಾಧನೆ ಯೋಜನೆಗಳನ್ನು ಜಾರಿ ಮಾಡಿ ಒಂದು ಜಾತಿಗೆ ಅವರು ಸೀಮಿತರಾಗಿರಲಿಲ್ಲ, ಅದೇ ಹಾದಿಯಲ್ಲಿ ಮಧು ಬಂಗಾರಪ್ಪನವರು ಉತ್ತಮವಾಗಿ ಶಿಕ್ಷಣ ಇಲಾಖೆಯನ್ನು ನಡೆಸುತ್ತಿದ್ದು ನಾನು ಕಾಂಗ್ರೆಸ್‌ಗೆ ಜೆಡಿಎಸ್‌ನಿಂದ ಬೇಗ ಬಂದು ಮಧು ಬಂಗಾರಪ್ಪ ತಡವಾಗಿ ಬಂದರು ಕೂಡ ಮಂತ್ರಿ ಸ್ಥಾನ ಪಡೆದಿದ್ದಾರೆಂದು ಬಾಲಕೃಷ್ಣ ಹೇಳಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ ಮಾತನಾಡಿ, ಕೆಪಿಎಸ್ಸಿ ಶಾಲೆ ಮಾಡಿ ಪ್ರತಿ ವಿಷಯವಾರು ಶಿಕ್ಷಕರನ್ನು ನೇಮಿಸಿ ಆ ಭಾಗಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿಕೊಟ್ಟರೆ ಉತ್ತಮ ಫಲಿತಾಂಶ ಬರುತ್ತದೆ. ಖಾಸಗಿ ಶಾಲೆಗೆ ನಾವು ಪೈಪೋಟಿ ಕೊಡುವ ಅಗತ್ಯವಿಲ್ಲ. ಡಿಡಿಪಿಐ ಬಿಇಒ ರವರಿಗೆ ಒಂದು ಶಾಲೆ ನೇಮಕ ಮಾಡಿ ಅವರು ಪಾಠ ಮಾಡಿ ಎಷ್ಟು ಫಲಿತಾಂಶ ಕೊಡುತ್ತಾರೆಂಬುದನ್ನು ಪರೀಕ್ಷೆ ಮಾಡಲಿ ಉತ್ತಮ ಶಿಕ್ಷಕರಿದ್ದು ಅವರಿಗೆ ಸರಿಯಾದ ಸೌಲಭ್ಯ ಕೊಡದಿದ್ದರೆ ಫಲಿತಾಂಶ ಕೇಳುವುದಾದರೂ ಹೇಗೆ ಎಂದು ಶಿಕ್ಷಣ ಸಚಿವರನ್ನು ಪ್ರಶ್ನೆ ಮಾಡಿದರು.

ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಮಾತನಾಡಿ, ಮಾಗಡಿ ತಾಲೂಕಿಗೆ ಮಂಚನ ಬೆಲೆ ಕುಡಿಯುವ ನೀರು ಯೋಜನೆ, ಮಾಗಡಿ ಬೆಂಗಳೂರು ರಸ್ತೆ ಅಗಲೀಕರಣ ಮಾಡಲು ಬಂಗಾರಪ್ಪನವರೆ ಅನುದಾನ ಕೊಟ್ಟಿದ್ದರು. ಬಾಲಕೃಷ್ಣರವರ ಬೇಡಿಕೆಯನ್ನು 5 ಕೆಪಿಎಸ್ಸಿ ಶಾಲೆ ಮಂಜೂರಾತಿ ಮಾಡುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಎಂಎಲ್ಸಿ ರಾಮೋಜಿ ಗೌಡ, ತಹಸೀಲ್ದಾರ್ ಶರತ್ ಕುಮಾರ್, ತಾ.ಪಂ. ಇಒ ಜೈಪಾಲ್, ಬಿಇಒ ಚಂದ್ರಶೇಖರ್, ಪುರಸಭಾ ಅಧ್ಯಕ್ಷೆ ರಮ್ಯ ನರಸಿಂಹಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಂ, ಗ್ಯಾರಂಟಿ ಅನುಷ್ಠಾನದ ತಾಲೂಕು ಅಧ್ಯಕ್ಷ ಕಲ್ಕರೆ ಶಿವಣ್ಣ, ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಜಿ.ಪಂ. ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ್ಯ ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು.

PREV
Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!