ಬೆಲೆ ಏರಿಕೆಗೆ ತತ್ತರಿಸಿದ್ದ ಜನರಿಗೆ 5 ಗ್ಯಾರಂಟಿ ಅನುಕೂಲ: ಸಚಿವ ದರ್ಶನಾಪೂರ್‌

By Kannadaprabha NewsFirst Published Aug 11, 2023, 11:00 PM IST
Highlights

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ 52 ಸಾವಿರ ಕೋಟಿ ರು.ಗಳ ಅನುದಾನ ವ್ಯಯವಾಗಲಿದ್ದು, ಇದಕ್ಕಾಗಿ ಐತಿಹಾಸಿಕ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಜನತೆಯ ವಿಶ್ವಾಸಕ್ಕೆ ಹಾಗೂ ಸಂತಸಕ್ಕೆ ಕಾರಣವಾಗಿದೆ: ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್‌

ಯಾದಗಿರಿ(ಆ.11): ರಾಜ್ಯ ಸರ್ಕಾರವು ನುಡಿದಂತೆ ನಡೆದಿದೆ. ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ತರಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್‌ ಹೇಳಿದರು.

ನಗರದ ಹೊಸಳ್ಳಿ ರಸ್ತೆ ಪಕ್ಕದಲ್ಲಿರುವ ಕೆಪಿಟಿಸಿಎಲ್‌ ಸಭಾಂಗಣದಲ್ಲಿ ನಡೆದ ಗೃಹಜ್ಯೋತಿ ಯೋಜನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ 52 ಸಾವಿರ ಕೋಟಿ ರು.ಗಳ ಅನುದಾನ ವ್ಯಯವಾಗಲಿದ್ದು, ಇದಕ್ಕಾಗಿ ಐತಿಹಾಸಿಕ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಜನತೆಯ ವಿಶ್ವಾಸಕ್ಕೆ ಹಾಗೂ ಸಂತಸಕ್ಕೆ ಕಾರಣವಾಗಿದೆ ಎಂದರು.

ನಗನೂರು ಗ್ರಾಪಂ ಚುನಾವಣೆಯಲ್ಲಿ ನಡೆಯಿತಾ ಅಕ್ರಮ? ಚುನಾವಣಾಧಿಕಾರಿ ಹಾಕಿದ್ದ ಮತವೇ ಅಸಿಂಧು..!

ರಾಜ್ಯ ಸರ್ಕಾರ ಬಂದ ತಕ್ಷಣ ಕೇವಲ 2 ತಿಂಗಳಲ್ಲಿಯೇ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳನ್ನು ಜಾರಿಗೊಳಿಸಲು ಕೈಗೊಂಡಿರುವ ಕ್ರಮ ಐತಿಹಾಸಿಕ ಹೆಜ್ಜೆಯಾಗಿದೆ. ಬೆಲೆ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದ ನಾಡಿನ ಜನತೆಗೆ ಗ್ಯಾರಂಟಿ ಯೋಜನೆಗಳು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತಿದ್ದು, ಅರ್ಹ ಫಲಾನುಭವಿಗಳು ಕೂಡ ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ಶಕ್ತಿ ಯೋಜನೆಯಡಿ ಮಹಿಳೆಯರ ಪ್ರಯಾಣ ಹೆಚ್ಚಳವಾಗಿದೆ. ಈ ಹಿಂದೆ ಬಸ್‌ಗಳಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದ 50 ಲಕ್ಷ ಪ್ರಯಾಣಿಕರ ಪ್ರಮಾಣದಲ್ಲಿ ಈಗ ಹೆಚ್ಚಳವಾಗಿ 1.30 ಕೋಟಿಗೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದರು.

ರಸ್ತೆ ಸಾರಿಗೆ ನಿಗಮಗಳಲ್ಲಿ ಸುಧಾರಣೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಕೊರತೆ ಇರುವ 13 ಸಾವಿರ ರು. ಸಿಬ್ಬಂದಿಗಳ ನೇಮಕಕ್ಕೂ ಕ್ರಮ ಕೈಗೊಂಡಿದೆ. ಅದರಂತೆ 4 ಸಾವಿರ ಹೊಸ ಬಸ್‌ಗಳನ್ನು ಸಹ ರಾಜ್ಯಕ್ಕೆ ಕೊಡುಗೆ ನೀಡಿದ್ದು, ಜನರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿದೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯ ಮೂಲಕ ಹಸಿದವರಿಗೆ ಅನ್ನ ನೀಡುವ ಕಾರ್ಯ ಸರ್ಕಾರ ಮಾಡಿದೆ. 5 ಕೆಜಿ ಅಕ್ಕಿ ಹಾಗೂ ಬಾಕಿ ನೀಡಬೇಕಾದ 5 ಕೆಜಿ ಅಕ್ಕಿಗೆ 170 ರು.ಗಳು ನೀಡುವ ಮೂಲಕ ಬಡವರಿಗೆ ನೆರವಾಗಿದೆ. ಗೃಹಲಕ್ಷಿ ್ಮೕ ಯೋಜನೆಯಡಿ ಮಹಿಳಾ ಯಜಮಾನಿಗೆ 2 ಸಾವಿರ ರು.ಗಳು ನೀಡುತ್ತಿದ್ದು, ಶೇ.76ರಷ್ಟುಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಇನ್ನುಳಿದ ಫಲಾನುಭವಿಗಳು ಸಹ ನೋಂದಣಿ ಮಾಡಿಕೊಳ್ಳಲು ತಿಳಿಸಿದರು.

ರೈತರ ಅನುಕೂಲಕ್ಕಾಗಿ 7 ಗಂಟೆ ನಿರಂತರ ವಿದ್ಯುತ್‌ ಸರಬರಾಜು ಸೌಲಭ್ಯ ಕಲ್ಪಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ಗುಣಮಟ್ಟದ ಹಾಗೂ ನಿರಂತರ ವಿದ್ಯುತ್‌ ಸರಬರಾಜು ಮಾಡಲು ಅವಶ್ಯಕ ಯೋಜನೆ ರೂಪಿಸಬೇಕು. ಸರ್ಕಾರದ ಮಟ್ಟದಲ್ಲಿಯೂ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟದಲ್ಲಿದ್ದ ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಗಳು ನೆರವಾಗಿವೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಬಲತೆಗೆ ನೆರವಾಗಿದೆ. ಜಿಲ್ಲೆ ಹಾಗೂ ಸುರಪುರ ಭಾಗದಲ್ಲಿ ನಿರಂತರ ಮತ್ತು ಕಡಿತವಿಲ್ಲದ ವಿದ್ಯುತ್‌ ಸರಬರಾಜು ಆಗುವ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರ್‌, ನುಡಿದಂತೆ ನಡೆದ ರಾಜ್ಯ ಸರ್ಕಾರ ರಾಜ್ಯದ ಪ್ರತಿ ಕುಟುಂಬಕ್ಕೆ ನೆರವಾಗಲು ಈ ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದು, ಇದರಿಂದ ಪ್ರತಿ ಕುಟುಂಬದಲ್ಲಿ 4800 ರು.ಗಳಿಂದ 6000 ರು.ಗಳವರೆಗೆ ಉಳಿತಾಯವಾಗಿ, ಆರ್ಥಿಕವಾಗಿ ಅನುಕೂಲವಾಗಲಿದೆ ಎಂದರು.

ಅವೈಜ್ಞಾನಿಕ ಬೆಳೆವಿಮೆ ಪರಿಹಾರ: ಬೆಳೆಗೆ ಖರ್ಚಾಗಿದ್ದು 15 ಸಾವಿರ ರು, ವಿಮೆ ಸಿಕ್ಕಿದ್ದು 960ರೂ!

ಜಿಲ್ಲೆಯ ವಿವಿಧ ತಾಲೂಕುಗಳ ತಲಾ 5 ಫಲಾನುಭವಿಗಳಿಗೆ ಶೂನ್ಯ ಬಿಲ್‌ ನೀಡಲಾಯಿತು. ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿಪಂ ಸಿಇಒ ಗರಿಮಾ ಪನ್ವಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಜೆಸ್ಕಾಂ ಡಿ.ಟಿ. ಚಂದ್ರಶೇಖರ್‌ ಸೇರಿದಂತೆ ಇತರರಿದ್ದರು.

ಗೃಹಜ್ಯೋತಿ ಯೋಜನೆಯಡಿಯಲ್ಲಿ ಸುಮಾರು 1.42 ಕೋಟಿ ರು. ಕುಟುಂಬಗಳು ನೋಂದಣಿಯಾಗಿವೆ. ರಾಜ್ಯದ ಬಡ, ಮಧ್ಯಮ, ಹಾಗೂ ಶ್ರೀಮಂತ ವರ್ಗದವರಿಗೂ ತಲಾ 200 ಯೂನಿಟ್‌ ಉಚಿತ ವಿದ್ಯುತ್‌ ದೊರಕಿಸುವ ಮೂಲಕ ರಾಜ್ಯ ಸರ್ಕಾರ ಎಲ್ಲ ವರ್ಗದ ಜನರ ಹಿತ ಕಾಪಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್‌ ತಿಳಿಸಿದ್ದಾರೆ. 

click me!