ಕುವೈತ್‌, ಯುಎಇ, ಮಸ್ಕತ್‌ನಿಂದ 422 ಮಂದಿ ಮಂಗಳೂರಿಗೆ

By Kannadaprabha NewsFirst Published Jun 18, 2020, 7:22 AM IST
Highlights

ಕುವೈಟ್‌, ಯುಎಇ ಮತ್ತು ಮಸ್ಕತ್‌ನಲ್ಲಿ ಸಿಲುಕಿ ತೀವ್ರ ಸಂಕಷ್ಟದಲ್ಲಿದ್ದ ಒಟ್ಟು 422 ಮಂದಿ ಅನಿವಾಸಿ ಭಾರತೀಯರು ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮೂರು ವಿಮಾನಗಳಲ್ಲಿ ಮಂಗಳೂರಿಗೆ ಆಗಮಿಸಿದ್ದಾರೆ. ಈಗಾಗಲೇ ಮಂಗಳೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮಂಗಳೂರು(ಜೂ.18): ಕುವೈಟ್‌, ಯುಎಇ ಮತ್ತು ಮಸ್ಕತ್‌ನಲ್ಲಿ ಸಿಲುಕಿ ತೀವ್ರ ಸಂಕಷ್ಟದಲ್ಲಿದ್ದ ಒಟ್ಟು 422 ಮಂದಿ ಅನಿವಾಸಿ ಭಾರತೀಯರು ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮೂರು ವಿಮಾನಗಳಲ್ಲಿ ಮಂಗಳೂರಿಗೆ ಆಗಮಿಸಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಅವರನ್ನು ನಗರದ ವಿವಿಧ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮೂರು ವಿಮಾನಗಳಲ್ಲಿ ಎರಡು ಚಾರಿಟಿ ವಿಮಾನಗಳಾಗಿದ್ದು, ಒಂದು ವಿಮಾನವು ಮಂಗಳವಾರ ತಡರಾತ್ರಿ ಯುಎಇಯಿಂದ 174 ಪ್ರಯಾಣಿಕರೊಂದಿಗೆ ಆಗಮಿಸಿದ್ದರೆ, ಇನ್ನೊಂದು ಬುಧವಾರ ಸಂಜೆ 168 ಪ್ರಯಾಣಿಕರನ್ನು ಹೊತ್ತು ಕುವೈಟ್‌ನಿಂದ ಬಂದಿಳಿದಿದೆ. ವಿಮಾನ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಒಂದು ವಿಮಾನ ಮಸ್ಕತ್‌ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ 80 ಪ್ರಯಾಣಿಕರನ್ನು ಕರೆತಂದಿದೆ.

'ಹೊರ ರಾಜ್ಯಗಳಿಂದ ಬಂದವರಿಂದಲೇ ಕೊರೋನಾ ಸೋಂಕು ಹೆಚ್ಚಳ'

ಕುವೈಟ್‌ನಿಂದ 168 ಪ್ರಯಾಣಿಕರ ಖರ್ಚನ್ನು ಅಲ್ಲಿನ ಅಕ್ಬರ್‌ ಟ್ರಾವೆಲ್ಸ್‌ ಆಫ್‌ ಇಂಡಿಯಾ ಭರಿಸಿದ್ದು, ಈ ವಿಮಾನವು ಬುಧವಾರ ಸಂಜೆ 5 ಗಂಟೆಯ ವೇಳೆಗೆ ಮಂಗಳೂರಿಗೆ ಬಂದಿದೆ. 80 ಪ್ರಯಾಣಿಕರನ್ನು ಹೊತ್ತ ಮಸ್ಕತ್‌- ಬೆಂಗಳೂರು- ಮಂಗಳೂರು ವಂದೇ ಭಾರತ್‌ ಮಿಷನ್‌ನ ವಿಮಾನವು ಬುಧವಾರ ರಾತ್ರಿ 7.30ರ ವೇಳೆಗೆ ಆಗಮಿಸಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಯತೀಶ್‌ ಉಳ್ಳಾಲ್‌ ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿ ಯುಎಇಯ ಶಾರ್ಜಾದಿಂದ ಆಗಮಿಸಿದ 174 ಪ್ರಯಾಣಿಕರನ್ನೊಳಗೊಂಡ ಚಾರಿಟಿ ಫ್ಲೈಟ್‌ನ ಖರ್ಚನ್ನು ಅಲ್ಲಿನ ಫಾರ್ಚೂನ್‌ ಗ್ರೂಪ್‌ ಆಫ್‌ ಹೊಟೇಲ್ ಮತ್ತು ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿಭರಿಸಿದ್ದಾರೆ.

5 ದಶಕ ತೆಪ್ಪಗಿದ್ದ ಚೀನಾ ಈಗ ಹಿಂಸೆ ನಡೆಸಿದ್ದೇಕೆ?: ಅಕ್ಸಾಯ್‌ಚಿನ್ ರಹಸ್ಯ!

ಎಲ್ಲ ವಿಮಾನ ಪ್ರಯಾಣಿಕರನ್ನು ಆರಂಭಿಕ ಆರೋಗ್ಯ ತಪಾಸಣೆಯ ನಂತರ ಏಳು ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ವಿವಿಧ ಹೊಟೇಲ್‌ಗಳಿಗೆ ಕಳುಹಿಸಲಾಗಿದೆ. ಐದು ದಿನಗಳ ನಂತರ ಕೋವಿಡ್‌-19 ಪರೀಕ್ಷೆಗಾಗಿ ಅವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!