Gadag: ಬಸ್‌ ಕಂದಕಕ್ಕೆ ಉರುಳಿ 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ: ತಪ್ಪಿದ ಭಾರೀ ದುರಂತ

By Girish GoudarFirst Published Mar 15, 2022, 4:14 AM IST
Highlights

*  ಗದಗ ಕಡೆಯಿಂದ ಲಕ್ಷ್ಮೇಶ್ವರ ಮಾರ್ಗವಾಗಿ ಹಾವೇರಿಗೆ ತೆರಳುತ್ತಿದ್ದ ಬಸ್‌ 
*  ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ
*  ಗಾಯಗೊಂಡವರ ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದ ಗ್ರಾಮಸ್ಥರು
 

ಲಕ್ಷ್ಮೇ​ಶ್ವ​ರ(ಮಾ.15):  ಸಾರಿಗೆ ಸಂಸ್ಥೆಯ ಬಸ್‌ ಕಂದಕಕ್ಕೆ ಉರುಳಿದ ಪರಿಣಾಮ 40ಕ್ಕೂ ಹೆಚ್ಚು ಪ್ರಯಾಣಿಕರಿಗೆ(Passengers) ಗಾಯಗಳಾಗಿರುವ ಘಟನೆ ಸಮೀಪದ ಗೋವನಾಳ ಹತ್ತಿರ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 25ಕ್ಕೂ ಹೆಚ್ಚು ಪ್ರಯಾಣಿಕರನ್ನು ಜಿಮ್ಸ್‌ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.

ಗದಗ(Gadag) ಕಡೆಯಿಂದ ಲಕ್ಷ್ಮೇಶ್ವರ ಮಾರ್ಗವಾಗಿ ಹಾವೇರಿಗೆ(Haveri) ತೆರಳುತ್ತಿದ್ದ ಬಸ್‌ ಗೋವನಾಳ ಗ್ರಾಮದ ಸ್ಮಶಾನ ಹತ್ತಿರದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಹೊಡೆದಿದೆ. ಮಾಹಿತಿ ಅರಿತ ಗೋವನಾಳ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಬಸ್ಸಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಹೊರತೆಗೆದು ಆ್ಯಂಬುಲೆನ್ಸ್‌ ಮೂಲಕ ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ(Treatment) ನೀಡಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಕೆಲ ಜನರ ಸ್ಥಿತಿ ಗಂಭೀರವಾಗಿದ್ದು, ಕೆಲವರ ಕೈ ಕಾಲು ಮುರಿದಿವೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಗಾಯಗೊಂಡವರ ರೋಧನ ಹೇಳ ತೀರದಾಗಿತ್ತು. 

Latest Videos

Hubballi Dharwad Bypass Road: ನೂರಾರು ಜೀವ ಬಲಿ ಪಡೆದ ಬೈಪಾಸ್‌ಗೆ ಮುಕ್ತಿ

ಘಟನೆಯಲ್ಲಿ ಗಾಯಗೊಂಡ ಸಣ್ಣ ಸಣ್ಣ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯ ಮುಂದೆ ಗಾಯಗೊಂಡ ಪ್ರಯಾಣಿಕರ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ 25ಕ್ಕೂ ಹೆಚ್ಚು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಯಿತು. ಈ ಕುರಿತು ಲಕ್ಷ್ಮೇಶ್ವರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವನಾಳ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಹಾಗೂ ಗಾಯಗೊಂಡವರ ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮದ್ಯದ ಅಮಲಿನಲ್ಲಿ ತಡೆಗೋಡೆಗೆ ಡಿಕ್ಕಿ: ಬೈಕ್‌ ಸವಾರ ಸಾವು

ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ(Death) ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಫೆ.28 ರಂದು ನಡೆದಿತ್ತು..

Road Accident: ಒಂದೇ ಬೈಕ್‌ನಲ್ಲಿ ಬೆಳಗಾವಿಯ ನಾಲ್ವರು ಸ್ನೇಹಿತರು.. ಮೃತ್ಯು ಅಪ್ಪಿಕೊಂಡರು

ವಿಜಯನಗರದ ಮೂಡಲಪಾಳ್ಯದ ನಿವಾಸಿ ಯತೀಶ್‌ ಕುಮಾರ್‌(23) ಮೃತ ಸವಾರ. ಹಿಂಬದಿ ಸವಾರ ಹರ್ಷಿತ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಗರದ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ ಪದವಿ ವ್ಯಾಸಂಗ ಮಾಡುತ್ತಿದ್ದ ಯತೀಶ್‌ಕುಮಾರ್‌ ಹಾಗೂ ಹರ್ಷಿತ್‌ ಭಾನುವಾರ ರಾತ್ರಿ ಕಲ್ಯಾಣ ನಗರದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ರಾತ್ರಿ 10.15ರ ಸುಮಾರಿಗೆ ಮೂಡಲಪಾಳ್ಯದ ಮನೆಗೆ ವಾಪಸಾಗುವಾಗ ಮಾರ್ಗ ಮಧ್ಯೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು(Police) ತಿಳಿಸಿದ್ದರು

ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್‌ ಸಮೀಪದ ಸರ್ವೀಸ್‌ ರಸ್ತೆಯಲ್ಲಿ ಬರುವಾಗ ಯತೀಶ್‌ ಕುಮಾರ್‌ ಏಕಾಏಕಿ ದ್ವಿಚಕ್ರ ವಾಹನದ ಬ್ರೇಕ್‌ ಹಾಕಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ದ್ವಿಚಕ್ರ(Bike)ವಾಹನ ತಡೆಗೋಡೆಗೆ ಅಪ್ಪಳಿಸಿ ರಸ್ತೆಗೆ ಬಿದ್ದಿದೆ. ಈ ವೇಳೆ ಯತೀಶ್‌ ಕುಮಾರ್‌ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಅಂತೆಯೆ ಇಬ್ಬರೂ ಹೆಲ್ಮೆಟ್‌ ಹಾಕಿರಲಿಲ್ಲ. ಹೆಲ್ಮೆಟ್‌(Helmet) ಧರಿಸಿದ್ದರೆ ಯತೀಶ್‌ ಕುಮಾರ್‌ ಬದುಕುಳಿಯುವ ಸಾಧ್ಯತೆಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  
 

click me!