Vijayapura : 4 ವರ್ಷದ ಮೇಲ್ಸೇತುವೆ ಕಾಮಗಾರಿ ಪೂರ್ಣ: ನಿಟ್ಟುಸಿರು ಬಿಟ್ಟ ಇಬ್ರಾಹಿಂಪುರ ಜನ

By Sathish Kumar KHFirst Published Dec 26, 2022, 11:40 AM IST
Highlights

ನಗರದ ಹೊರವಲಯದ ಇಬ್ರಾಹಿಂಪುರ ರೈಲು ಗೇಟ್ ಗೆ ಅಡ್ಡಲಾಗಿ ನಿರ್ಮಾಣವಾಗಿರುವ ಮೇಲ್ಸೆತುವೆ ಲೋಕಾಪರ್ಣೆಗೆ ಕೊನೆಗೂ ಕ್ಷಣಗಣನೆ ಆರಂಭಗೊಂಡಿದೆ. ಈ ಮೂಲಕ ಇಬ್ರಾಹಿಂಪುರ ರೈಲ್ವೆ ಗೇಟ್ ಭಾಗದಲ್ಲಿನ ಜನರಲ್ಲಿ ಸಂತಸ ಮನೆ ಮಾಡಿದೆ.

ವರದಿ- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಡಿ.26): ನಗರದ ಹೊರವಲಯದ ಇಬ್ರಾಹಿಂಪುರ ರೈಲು ಗೇಟ್ ಗೆ ಅಡ್ಡಲಾಗಿ ನಿರ್ಮಾಣವಾಗಿರುವ ಮೇಲ್ಸೆತುವೆ ಲೋಕಾಪರ್ಣೆಗೆ ಕೊನೆಗೂ ಕ್ಷಣಗಣನೆ ಆರಂಭಗೊಂಡಿದೆ. ಈ ಮೂಲಕ ಇಬ್ರಾಹಿಂ ರೈಲ್ವೆ ಗೇಟ್ ಭಾಗದಲ್ಲಿನ ಜನರಲ್ಲಿ ಸಂತಸ ಮನೆ ಮಾಡಿದೆ. ಮೇಲ್ಸೇತುವೆ ಕಾಮಗಾರಿಯಿಂದಾಗಿ ಜನ ಸಾಮಾನ್ಯರು ಅಡ್ಡಾಡಲು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. 

ಕಳೆದ ಮೂರುವರೆ ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿರುವ ಕಾರಣ ರಾಷ್ಡ್ರೀಯ ಹೆದ್ದಾರಿ 50ರಮೇಲೆ ನಗರದಿಂದ ಹೋಗುವ ವಾಹನಗಳು ಹಾಗೂ ರೈಲ್ವೆ ಗೇಟ್ ಈ ಬದಿಯ ಗಣೇಶನಗರ, ಶಾಂತವೀರನಗರ, ರಾಧಾಕೃಷ್ಣನಗರ, ಗುರುಪಾದೇಶ್ವರ ನಗರ, ಲಕ್ಷ್ಮೀ ಗುಡಿ, ತ್ರಿಮೂರ್ತಿ ನಗರ ಸೇರಿದಂತೆ ಸಾವಿರಾರು ಜನ ನಿವಾಸಿಗಳು ನಿತ್ಯ ಯಮಯಾತನೆ ಪಡುತ್ತಿದ್ದರು. ಸುಮಾರು 6ಕಿ.ಮೀ ಸುತ್ತು ಹಾಕಿ ವಜ್ರಹನುಮಾನನಗರ ರೈಲ್ವೆ ಗೇಟ್ ಇಲ್ಲವೇ ಸಿಂದಗಿ ಬೈಪಾಸ್ ಮೂಲಕ ನಗರ ಪ್ರವೇಶಿಸಬೇಕಾಗಿತ್ತು.

ವಿಜಯಪುರ: ಸೂಸೈಡ್‌ ಸ್ಪಾಟ್‌ ಆಗ್ತಿದೆಯಾ ವಿಶ್ವ ವಿಖ್ಯಾತ ಗೋಳಗುಮ್ಮಟ..!

ನಿತ್ಯ ಟ್ರಾಪಿಕ್‌ಜಾಮ್ ಹೈರಾಣಾಗಿದ್ದ ಜನ: ಅದರಲ್ಲಿಯೂ ನಿತ್ಯ ,ಹತ್ತಾರು ರೈಲು ಸಂಚರಿಸುತ್ತಿದ್ದ ಕಾರಣ ವಜ್ರಹನುಮಾನ ರೈಲ್ವೆ ಗೇಟ್ ನಲ್ಲಿ ನಿತ್ಯ ಟ್ರಾಫಿಕ್ ಜಾಮ್ ಆಗುತ್ತಿತ್ತು. ಇದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿತ್ತು. ಒಟ್ಡು 23 ಕೋಟಿ ರೂ. ವೆಚ್ಚದ ಈ ಮೇಲ್ಸೆತುವೆ ಕಾಮಗಾರಿ ವರ್ಷ ದೊಳಗೆ ಮುಗಿಯಬೇಕಾಗಿತ್ತು.‌ ಆದರೆ, ಕೊವಿಡ್ ರೋಗ ಬಂದ ಮೇಲೆ ಇಲ್ಲಿನ ಕೆಲಸ ಮಾಡುತ್ತಿದ್ದ ಕಾರ್ಮಿಕ ರು ಕಾಮಗಾರಿ ಸ್ಥಗಿತಗೊಳಿಸಿ ತಮ್ಮ ಗ್ರಾಮಗಳಿಗೆ ತೆರಳಿದ್ದರು. ಇದರಿಂದ ಕಾಮಗಾರಿ ಸಾಕಷ್ಟು ವಿಳಂಬವಾಯಿತು. ವರ್ಷ ದೊಳಗೆ ಮುಗಿಯಬೇಕಾಗಿದ್ದ ಕಾಮಗಾರಿ ಮೂರುವರೆ ವರ್ಷ ತೆಗೆದುಕೊಂಡಿದೆ. ಹೀಗಾಗಿ ಕಾಮಗಾರಿ ವೆಚ್ಚ ಸಹ ಎರಡು ಪಟ್ಟು ಹೆಚ್ಚಾಗಿದೆ. ಸದ್ಯ ಅಂತೂ ಮೇಲ್ಸೆತುವೆ ಕಾಮಗಾರಿ ಪೂರ್ಣಗೊಂಡಿದ್ದು ನಾಳೆ ಲೋಕಾರ್ಪಣೆಗೊಳ್ಳಲಿದೆ. 

ಪ್ರಾಯೋಗಿಕ ಸಂಚಾರಕ್ಕೆ ಮುಕ್ತ: ಮೇಲ್ಸೆತುವೆ ಕಾಮಗಾರಿ ಪ್ರಾಯೋಗಿಕ ಪರೀಕ್ಷೆಗಾಗಿ ಬೈಕ್ ಹಗುರವಾದ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಾನುವಾರದಿಂದಲೇ ಬೈಕ್, ಕಾರು ಸಂಚಾರ ನಡೆಸುತ್ತಿವೆ. ಕಾಮಗಾರಿ ಸಂಪೂರ್ಣ ಪೂರ್ಣಗೊಳ್ಳದ ಕಾರಣ ಭಾರಿ ವಾಹನಗಳ ಸಂಚಾರ ಇನ್ನೂ ಆರಂಭಿಸಿಲ್ಲ, ಮೇಲ್ಸೆತುವೆ ರಸ್ತೆ ಒಂದು ಬದಿ ಇನ್ನೂ ಡಾಂಬರೀಕರಣ ಪೂರ್ಣವಾಗಿಲ್ಲ, ಅದು ಪೂರ್ಣಗೊಂಡ ನಂತರವಷ್ಡೇ ಭಾರಿ ವಾಹನಗಳ ಸಂಚಾರ ಕ್ಕೆ ಮುಕ್ತವಾಗಲಿದೆ. 

Vijayapura: ಅಕ್ಕಮಹಾದೇವಿ ವಿವಿ ಘಟಿಕೋತ್ಸವ: 4 ಚಿನ್ನದ ಪದಕ ಮುಡಿಗೇರಿಸಿಕೊಂಡ ಗರ್ಭಿಣಿ

ಸರ್ವಿಸ್ ರಸ್ತೆ ಕಾಮಗಾರಿ ಬಾಕಿ: ಮೇಲ್ಸೆತುವೆಯ ಕೆಳಗಿನ ಎರಡು ಬದಿಯ ಸರ್ವಿಸ್ ರಸ್ತೆಯನ್ನು ಈಗಾಗಲೇ ಕಾಮಗಾರಿ ಪೂರ್ಣಗೊಳಿಸಿದ್ದರೂ ಪ್ಯಾಚ್ ವರ್ಕ್ ಇನ್ನೂ ಬಾಕಿ ಉಳಿದಿದೆ. ಸದ್ಯ ಮೇಲ್ಸೆತುವೆ ಗಣೇಶನಗರ ಬಸ್ ನಿಲ್ದಾಣದಿಂದ ಆ ಬದಿಯ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯವರೆಗೆ ಕಾಮಗಾರಿ ಮಾಡಲಾಗಿದೆ. ಮುಂದಿನ ದಿನದಲ್ಲಿ ಬೈಪಾಸ್ ರಸ್ತೆಯವರೆಗೆ ಮೇಲ್ಸೆತುವೆ ಹೊಂದಿಕೊಂಡ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಎರಡು ಬದಿ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. ಮುಂದಿನ ದಿನದಲ್ಲಿ ಬೈಪಾಸ್ ರಸ್ತೆಯವರೆಗೆ ಮೇಲ್ಸೆತುವೆ ರಸ್ತೆ ಜೋಡಿಸುವ ಕಾಮಗಾರಿ ನಡೆಯಲಿದೆ. 

ಜನರಲ್ಲಿ ಮನೆ ಮಾಡಿದ ಸಂತಸ: ಇಬ್ರಾಹಿಂಪುರ ಕ್ರಾಸ್ ಮೇಲ್ಸೆತುವೆ ಕಾಮಗಾರಿ ಲೋಕಾರ್ಪಣೆಗೊಳ್ಳುತ್ತಿರುವದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಮೂರು ವರ್ಷಗಳ ಕಾಲ ಅನುಭವಿಸಿದ ಕಷ್ಟ ಕೊನೆಗೂ ನೆಮ್ಮದಿಯತ್ತ ಸಾಗುತ್ತಿರುವದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.

click me!