ಬಳ್ಳಾರಿಯಲ್ಲಿ ವದಂತಿ ನಂಬಿದ ಜನ: ಲಸಿಕೆಗೆ 4 ಗ್ರಾಮಸ್ಥರು ಹಿಂದೇಟು

By Kannadaprabha NewsFirst Published Jun 12, 2021, 9:44 AM IST
Highlights

* ಯಾವುದೇ ಕಾರಣಕ್ಕೂ ಲಸಿಕೆ ಪಡೆಯಲ್ಲ ಎಂದು ಪಟ್ಟು ಹಿಡಿದಿರುವ ಜನರು
* ಗ್ರಾಮದ ಮುಖಂಡರರಿಂದ ಮನವೊಲಿಸಲು ಯತ್ನ
*  ಪ್ರತಿಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ

ಬಳ್ಳಾರಿ(ಜೂ.12):  ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿದ್ದಂತೆ ವದಂತಿಗಳನ್ನು ನಂಬಿದ ಜನ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಪಂ ವ್ಯಾಪ್ತಿಯ ಯರಬಯ್ಯನಹಳ್ಳಿ, ಸಿಡೆಗಲ್ಲು, ಶ್ರೀಕಂಠಾಪುರ, ಕಸಾಪುರ ಹಾಗೂ ಲಿಂಗನಹಳ್ಳಿ ತಾಂಡದ ಜನರಿಗೆ ಲಸಿಕೆ ಹಾಕಲು ಆರೋಗ್ಯ ಇಲಾಖೆಯ ವೈದ್ಯಕೀಯ ತಂಡ ತೆರಳಿತ್ತು. ಆದರೆ, ಲಸಿಕೆ ಪಡೆಯಲು ನಿರಾಕರಿಸಿರುವ ಗ್ರಾಮಸ್ಥರು, ‘ನಾವು ಆರೋಗ್ಯವಾಗಿಯೇ ಇದ್ದೇವೆ. ನಮಗ್ಯಾಕೆಬೇಕು ವ್ಯಾಕ್ಸಿನ್‌’ ಎಂದು ಪ್ರಶ್ನಿಸಿದ್ದಾರೆ.

ತಗ್ಗಿದ ಕೊರೋನಾ: ಗ್ರಾಮೀಣದಲ್ಲಿ ತೀವ್ರ ಇಳಿಕೆ ಕಂಡ ಸೋಂಕು..!

ಯಾವುದೇ ಕಾರಣಕ್ಕೂ ಲಸಿಕೆ ಪಡೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ವೈದ್ಯಕೀಯ ಸಿಬ್ಬಂದಿ, ಗ್ರಾಮದ ಮುಖಂಡರು ಮನವೊಲಿಸಲು ಪ್ರಯತ್ನಿಸಿದರೂ ಫಲ ಕಂಡಿಲ್ಲ. ಲಸಿಕೆ ಹಾಕಿಸಿಕೊಂಡವರಿಗೆ ಜ್ವರ ಬರಲಿದೆ. ಕೈಕಾಲುಗಳು ಸ್ವಾಧೀನ ತಪ್ಪಲಿವೆ ಎಂಬ ವದಂತಿ ನಂಬಿ ಗ್ರಾಮಸ್ಥರು ಲಸಿಕೆಯಿಂದ ದೂರ ಉಳಿದಿದ್ದಾರೆ. ಪ್ರತಿಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ನಡೆದಿದ್ದು, ಇನ್ನೆರಡು ದಿನಗಳಲ್ಲಿ 4 ಗ್ರಾಮಗಳಲ್ಲಿ ಎಲ್ಲರಿಗೂ ಲಸಿಕೆ ಹಾಕುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
 

click me!