ಧಾರವಾಡ ಜಿಲ್ಲೆಗೆ 4 ಆಕ್ಸಿಜನ್‌ ಉತ್ಪಾದನಾ ಘಟಕ ಮಂಜೂರು

By Kannadaprabha NewsFirst Published May 7, 2021, 2:59 PM IST
Highlights

ಕೇಂದ್ರ ಸರ್ಕಾರದಿಂದ ಅನುಮೋದನೆ| ಕಿಮ್ಸ್‌ನಲ್ಲಿ 3, ಜಿಲ್ಲಾಸ್ಪತ್ರೆಯಲ್ಲಿ 1 ಘಟಕ ಸ್ಥಾಪನೆ| ಸಚಿವ ಜೋಶಿ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ| ಚಿಕಿತ್ಸೆಗೆ 24‍‍X7 ಸತತ ಆಮ್ಲಜನಕ ಲಭ್ಯ| ಸಾಗಾಣಿಕಾ ವೆಚ್ಚ, ಸಮಯವೂ ಉಳಿತಾಯ| 

ಹುಬ್ಬಳ್ಳಿ(ಮೇ.07): ಮಹಾನಗರದಲ್ಲಿ ದಿನದಿಂದ ದಿನಕ್ಕೆ ಕೋರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಆಮ್ಲಜನಕದ ಕೊರತೆ ನೀಗಿಸುವುದರ ಅವಶ್ಯಕತೆಗೆ ಅನುಗುಣವಾಗಿ ಕೇಂದ್ರ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳಿಂದ, ಧಾರವಾಡ ಜಿಲ್ಲೆಗೆ 4 ಆಮ್ಲಜನಕ ಉತ್ಪಾದನ ಘಟಕಗಳ ಸ್ಥಾಪನೆಗೆ ಅನುಮೋದನೆ ನೀಡಿವೆ.

ಈ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪತ್ರ ಬರೆದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಕೇಂದ್ರ ಸರ್ಕಾರದ ಸ್ವಾಮ್ಯದ ಎಂಆರ್‌ಪಿಎಲ್, ಒಎನ್‌ಜಿಸಿ ಹಾಗೂ ಎನ್‌ಎಂಡಿಸಿ ಕಂಪನಿಗಳಿಗೆ ತಕ್ಷಣ ಆದೇಶಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ನಾಲ್ಕು ಆಕ್ಸಿಜನ್‌ ಉತ್ಪಾದನೆಯ ಘಟಕಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದಾರೆ.

"

ಧಾರವಾಡ: ಸೋಂಕಿತರಿಗೆ ಡಿಮ್ಹಾನ್ಸ್‌ನಲ್ಲಿ ಟೆಲಿಫೋನಿಕ್‌ ಸೈಕೋ ಥೆರಪಿ

ನಾಲ್ಕರ ಪೈಕಿ 3 ಘಟಕಗಳನ್ನು ಕಿಮ್ಸ್‌ನಲ್ಲಿ, ಒಂದು ಧಾರವಾಡ ಜಿಲ್ಲಾ ಸಿವಿಲ್‌ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುವುದು. ಪ್ರತಿ ಘಟಕವು ಪ್ರತಿ ನಿಮಿಷಕ್ಕೆ 1000 ಲೀಟರ್‌ ಆಮ್ಲಜನಕವನ್ನು ಉತ್ಪಾದಿಸಲಿವೆ. ಈಗಾಗಲೇ ಸಂಬಂಧಪಟ್ಟ ಆಕ್ಸಿಜನ್‌ ತಯಾರಿಕಾ ಘಟಕಗಳಿಗೆ ಕಾರ್ಯಾರಂಭ ಮಾಡಲು ಆದೇಶಿಸಲಾಗಿದೆ. ಈ ಘಟಕಗಳ ಸ್ಥಾಪನೆಯಿಂದ ಮಹಾನಗರದಲ್ಲಿ ಆಮ್ಲಜನಕದ ಪೂರೈಕೆಗೆ ಅವಲಂಬನೆ ತಪ್ಪುತ್ತದೆ. ಶಾಶ್ವತ ಪರಿಹಾರ ಕಲ್ಪಿಸಲಿವೆ. ಚಿಕಿತ್ಸೆಗೆ 24‍‍X7 ಸತತ ಆಮ್ಲಜನಕ ಲಭ್ಯವಾಗಲಿದೆ. ಇದರಿಂದ ಸಾಗಾಣಿಕಾ ವೆಚ್ಚ, ಸಮಯವೂ ಉಳಿಯಲಿದೆ.

ತ್ವರಿತವಾಗಿ ಮಹಾನಗರದಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಯ ಪ್ರಸ್ತಾವನೆ ಅನುಮೋದಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಸಚಿವ ಪ್ರಹ್ಲಾದ ಜೋಶಿ ಧನ್ಯವಾದ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!