ಕಾರ್ಕಳ ಪರಶುರಾಮನ 33 ಎಡಿ ಎತ್ತರದ ವಿಗ್ರಹ ನಕಲಿ: ಲಕ್ಷ್ಮೀ ಹೆಬ್ಬಾಳ್ಕರ್‌

By Kannadaprabha NewsFirst Published Sep 24, 2023, 1:30 AM IST
Highlights

ಈ ಅವ್ಯವಹಾರದ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಉಮಿಕಲ್ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಈ ಯೋಜನೆಯ ಗುತ್ತಿಗೆದಾರರಾದ ಉಡುಪಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸಚಿವೆಗೆ ಸರಿಯಾದ ಉತ್ತರವನ್ನು ನೀಡುವುದಕ್ಕೆ ತಡವರಿಸಿದರು.

ಕಾರ್ಕಳ(ಸೆ.24):  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲಿನ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ ಮೇಲೆ 15 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪರಶುರಾಮ ಥೀಮ್ ಪಾರ್ಕ್ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ದೃಡಪಟ್ಟಿದೆ. ಇದಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಈ ಅವ್ಯವಹಾರದ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಉಮಿಕಲ್ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಈ ಯೋಜನೆಯ ಗುತ್ತಿಗೆದಾರರಾದ ಉಡುಪಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸಚಿವೆಗೆ ಸರಿಯಾದ ಉತ್ತರವನ್ನು ನೀಡುವುದಕ್ಕೆ ತಡವರಿಸಿದರು.

ಮಂಗಳೂರು- ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕುಸಿತ

ಇಲ್ಲಿ ನಿರ್ಮಿಸಲಾಗಿರುವ 33 ಅಡಿ ಎತ್ತರದ ಬೃಹತ್ ಪರಶುರಾಮ ಮೂರ್ತಿ ಕಂಚಿನದಲ್ಲ, ಈಗಿರುವುದು ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಮೂರ್ತಿ, ಅದನ್ನು ತೆಗೆದು ನೈಜ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಸಮಜಾಯಿಸಿ ನೀಡಲು ಅಧಿಕಾರಿಗಳು ಯತ್ನಿಸಿದರು.

ಕಾರ್ಕಳದ ಶಾಸಕ, ಮಾಜಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರ ಮಹಾತ್ವಾಕಾಂಕ್ಷೆಯ ಈ ಪರಶುರಾಮ ಥೀಮ್ ಪಾರ್ಕ್‌ನ್ನು ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ವಿಧಾನಸಭಾ ಚುನಾವಣೆಯ ಮೊದಲು ತರಾತುರಿಯಲ್ಲಿ ಮುಖ್ಯಮಂತ್ರಿ ಬೊಮ್ಮಯಿ ಉದ್ಘಾಟಿಸಿದ್ದರು. ಆಗ ಸಮಯ ಅಭಾವದಿಂದ ಈಗಿರುವ ಮೂರ್ತಿಯನ್ನು ಗಡಿಬಿಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಈ ಉತ್ತರ ಸಚಿವೆಗೆ ಸಮಾಧಾನ ನೀಡಲಿಲ್ಲ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಈ ನಕಲಿ ಮೂರ್ತಿ ಸ್ಥಾಪನೆಯ ಬಗ್ಗೆ ವರದಿ ಪಡೆದು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ ಒಟ್ಟು 4 ಇಲಾಖೆಗಳ ಅನುನಾದದಲ್ಲಿ ಈ ಯೋಜನೆ ನಿರ್ಮಿಸಲಾಗಿದೆ. ಎಲ್ಲಾ ಇಲಾಖೆಗಳಿಂದ ವರದಿ ತರಿಸಿಕೊಳ್ಳುತ್ತೇನೆ. ಯಾವ ಇಲಾಖೆಯಿಂದ ತಪ್ಪಾಗಿದೆ ಎಂದು ಪತ್ತೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ಮೂರ್ತಿಯೇ ನಕಲಿ...

ಇಲ್ಲಿರುವ ಪರಶುರಾಮನ ಮೂರ್ತಿ ನಕಲಿಯೋ ಅಸಲಿಯೋ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮೂರ್ತಿಯ ತಲೆ ಬದಲಾಯಿಸಬೇಕು, ಕೈಕಾಲು ಬದಲಾಯಿಸಬೇಕು ಅಂತಿದ್ದಾರೆ, ಹಾಗಾದ್ರೆ ನೀವೇ ಅರ್ಥ ಮಾಡ್ಕೊಳ್ಳಿ ಎಂದರು. ಕಂಚಿನ ಮೂರ್ತಿ ಈಗ ಎಲ್ಲೋ ತಯಾರಿಗುತ್ತಿದೆಯಂತೆ, ಈ ಮೂರ್ತಿ ರಚಿಸಿದ ಶಿಲ್ಪಿಗೂ ನೋಟಿಸ್‌ ನೀಡಿ ತನಿಖೆ ನಡೆಸಲಾಗುತ್ತದೆ ಎಂದು ಸಚಿವೆ ಹೇಳಿದರು. 

ಬೃಹತ್ ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗುತ್ತಿದ್ದ ಐವರು ಪ್ರವಾಸಿಗರನ್ನ ರಕ್ಷಿಸಿದ ಲೈಫ್‌ ಗಾರ್ಡ್

ಭಾವನಾತ್ಮಕವಾಗಿ ಜನರ ದಿಕ್ಕು ತಪ್ಪಿಸಲಾಗಿದೆ

ಈ ಪರಶುರಾಮ ಥೀಮ್ ಪಾರ್ಕ್ ಯೋಜನೆಯಲ್ಲಿ ಭಾವನಾತ್ಮಕವಾಗಿ ಜನರ ದಿಕ್ಕು ತಪ್ಪಿಸಲಾಗಿದೆ. ಚುನಾವಣೆಗಾಗಿಯೇ ಹೀಗೆ ಮಾಡಿದ್ದರೆ ಅದು ಖಂಡಿತಾ ತಪ್ಪು ಎಂದು ಸಚಿವೆ ಹೇಳಿದರು. ಚುನಾವಣೆಯಲ್ಲಿ ಮತದಾರರ ಭಾವನೆಗಳನ್ನು ಸೆಳೆಯುವುದಕ್ಕಾಗಿ ತರಾತುರಿಯಲ್ಲಿ ಪರಾಶುರಾಮನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸುವ ರಾಜಕಾರಣ ಮಾಡಿದರು ಮತ್ತು ಗೆದ್ದು ಬಂದರು. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉದಯಕುಮಾರ್ ಶೆಟ್ಟಿ ಅವರು ಇಂತಹ ಕೆಲಸ ಮಾಡಲಿಲ್ಲ, ಅದಕ್ಕೆ ಸೋತರು ಎಂದು ಶಾಸಕ ಸುನಿಲ್‌ ಕುಮಾರ್‌ ಹೆಸರು ಹೇಳದೆ ಸಚಿವೆ ಹೆಬ್ಬಾಳ್ಕರ್‌ ಆರೋಪಿಸಿದರು.

ಕಾಮನ್ ಸೆನ್ಸ್ ಇಲ್ವೇನ್ರಿ...

ಪರಶುರಾಮ ಮೂರ್ತಿಯ ಬಳಿ ಬರುವಾಗ ಸಚಿವೆ ಚಪ್ಪಲಿ ಕಳಚಿ ಬಂದಿದ್ದರು. ಆದರೆ ಕೆಲವು ಅಧಿಕಾರಿಗಳು ಚಪ್ಪಲಿ ಮೆಟ್ಟಿಕೊಂಡು ಬಂದಿದ್ದರು. ಇದನ್ನು ಗಮನಿಸಿದ ಸಚಿವೆ, ಚಪ್ಪಲಿ ಹಾಕಿ ಬಂದಿದ್ದೀರಲ್ಲಾ ಅಷ್ಟೂ ಕಾಮನ್‌ ಸೆನ್ಸ್‌ ಇಲ್ವೇನ್ರೀ ಎಂದು ತರಾಟೆಗೆ ತೆಗೆದುಕೊಂಡರು.

click me!