ನಂದಿಬೆಟ್ಟಕ್ಕೆ 2 ತಿಂಗಳು ಪ್ರವೇಶ ಬಂದ್‌?

By Kannadaprabha NewsFirst Published Aug 30, 2021, 11:57 AM IST
Highlights
  • ಭಾರೀ ಮಳೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳ ನಂದಿಗಿರಿಧಾಮದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಗುಡ್ಡಕುಸಿತ
  • ಗುಡ್ಡಕುಸಿತದಿಂದ ಕಿತ್ತು ಹೋಗಿದ್ದ ಸಂಪರ್ಕ ರಸ್ತೆ ಬಳಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯೂ ಇದೀಗ ಕೊಚ್ಚಿ ಹೋಗಿದೆ
  • ಈ ಹಿನ್ನೆಲೆಯಲ್ಲಿ 2 ತಿಂಗಳ ಕಾಲ ನಂದಿ ಬೆಟ್ಟಪ್ರವಾಸಿಗರಿಗೆ ಬಂದ್‌ ಆಗುವ ಸಾಧ್ಯತೆ

ಚಿಕ್ಕಬಳ್ಳಾಪುರ (ಆ.30):  ಭಾರೀ ಮಳೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳ ನಂದಿಗಿರಿಧಾಮದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಗುಡ್ಡಕುಸಿತದಿಂದ ಕಿತ್ತು ಹೋಗಿದ್ದ ಸಂಪರ್ಕ ರಸ್ತೆ ಬಳಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯೂ ಇದೀಗ ಕೊಚ್ಚಿ ಹೋಗಿದೆ. ಈ ಹಿನ್ನೆಲೆಯಲ್ಲಿ 2 ತಿಂಗಳ ಕಾಲ ನಂದಿ ಬೆಟ್ಟಪ್ರವಾಸಿಗರಿಗೆ ಬಂದ್‌ ಆಗುವ ಸಾಧ್ಯತೆ ಇದೆ.

ಕೆಲದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿದು ಸುಮಾರು 15 ಅಡಿ ರಸ್ತೆ ಸಂಪೂರ್ಣ ಕಿತ್ತು ಹೋಗಿತ್ತು. ಇದರಿಂದ ನಂದಿಗಿರಿಧಾಮಕ್ಕೆ ಸಂಪರ್ಕ ಕಡಿದು ಹೋಗಿತ್ತು. ಎಚ್ಚೆತ್ತ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಹೇರಿ ಗಿರಿಧಾಮದಲ್ಲಿದ್ದ 25 ಮಂದಿ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್‌ ಕಳುಹಿಸಿಕೊಟ್ಟಿತ್ತು.

ನಂದಿ ಬೆಟ್ಟ ಮಾರ್ಗದಲ್ಲಿ ಭಾರಿ ಭೂ ಕುಸಿತ : ಸಂಚಾರ ಸಂಪೂರ್ಣ ಬಂದ್

 ಅಲ್ಲದೆ, ಗಿರಿಧಾಮದ ಮೇಲೆ ಕಾರ್ಯನಿರ್ವಹಿಸುವವರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ರಸ್ತೆಯೊಂದನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇದೀಗ ತಾತ್ಕಾಲಿಕ ರಸ್ತೆಯ ಸ್ವಲ್ಪಭಾಗ ಮತ್ತೆ ಕುಸಿದಿದೆ. ಹೀಗಾಗಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆಯನ್ನು ಭಾನುವಾರ ಸಂಪೂರ್ಣ ತೆರವುಗೊಳಿಸಲಾಗಿದೆ. ಹಿಟಾಚಿ ಯಂತ್ರದ ಮೂಲಕ ಮಣ್ಣು ತೆರವು ಕಾರ್ಯ ಕೈಗೊಳ್ಳಲಾಗಿದೆ. ಶಾಶ್ವತ ರಸ್ತೆ ನಿರ್ಮಾಣಕ್ಕೆ 2 ತಿಂಗಳಾಗಬಹುದು ಎನ್ನಲಾಗಿದ್ದು, ಅಲ್ಲಿಯವರೆಗೂ ಪ್ರವಾಸಿಗರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಇದೆ.

click me!