ಬೈಂದೂರು-ರಾಣೇಬೆನ್ನೂರು ಹೆದ್ದಾರಿಗೆ ₹1012 ಕೋಟಿ ಮಂಜೂರು

By Kannadaprabha NewsFirst Published Dec 23, 2022, 7:09 AM IST
Highlights

ಬೈಂದೂರು- ರಾಣೇಬೆನ್ನೂರು ಹೆದ್ದಾರಿಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ .1012.75 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗ ನಗರ ಉತ್ತರ ಭಾಗದ ಬೈಪಾಸ್‌ ರಸ್ತೆಗೆ ಒಪ್ಪಿಗೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಶಿವಮೊಗ್ಗ (ಡಿ.23) : ಬೈಂದೂರು- ರಾಣೇಬೆನ್ನೂರು ಹೆದ್ದಾರಿಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ .1012.75 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗ ನಗರ ಉತ್ತರ ಭಾಗದ ಬೈಪಾಸ್‌ ರಸ್ತೆಗೆ ಒಪ್ಪಿಗೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಕರಾವಳಿ ಪ್ರದೇಶ ಬೈಂದೂರಿನಿಂದ ಕೊಲ್ಲೂರು, ನಗರ, ಹೊಸನಗರ, ಆನಂದಪುರ, ಶಿಕಾರಿಪುರ, ಮಾಸೂರು, ರಟ್ಟೇಹಳ್ಳಿ, ಮೂಲಕ ರಾಣೇಬೆನ್ನೂರಿಗೆ ಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ- 766(ಸಿ) ಅನ್ನು ಸಂಪೂರ್ಣವಾಗಿ ಅಗಲೀಕರಣಗೊಳಿ​ಸಿ, ಅಭಿವೃದ್ಧಿಗೊಳಿಸಲು ಕೇಂದ್ರ ಭೂ ಸಾರಿಗೆ ಸಚಿವರಿಗೆ ಮನವಿ ಮಾಡಿದ ಫಲವಾಗಿ ಕೇಂದ್ರ ಭೂಸಾರಿಗೆ ಮಂತ್ರಾಲಯವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಕಳೆದ ವರ್ಷ ಸದರಿ ಹೆದ್ದಾರಿಯ 7 ಕಿರುಸೇತುವೆಗಳು ಹಾಗೂ 27.70 ಕಿಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣಕ್ಕೆ .238.70 ಕೋಟಿ ವೆಚ್ಚದ ಡಿ.ಪಿ.ಆರ್‌.ಗೆ ಮಂಜೂರಾತಿ ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ: ಸಂಸತ್ತಿನ ಗಮನ ಸಳೆದ ಸಂಸದ ರಾಘವೇಂದ್ರ

ಈ ವರ್ಷ ಬೈಂದೂರಿನಿಂದ ಹಾಲ್ಕಲ್‌ ಜಂಕ್ಷನ್‌ ಮತ್ತು ಕೊಲ್ಲೂರು ಮೂಲಕ ನಾಗೋಡಿ ವರೆಗಿನ 40.40 ಕಿಮೀ ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸುವ .394.05 ಕೋಟಿ ಮೊತ್ತದ ಡಿ.ಪಿ.ಆರ್‌.ಗೆ ಕೇಂದ್ರ ಭೂ ಸಾರಿಗೆ ಮಂತ್ರಾಲಯವು ಮಂಜೂರು ಮಾಡಿದೆ. ಇದಲ್ಲದೇ, ಶಿಕಾರಿಪುರ ಪಟ್ಟಣಕ್ಕೆ 6.576 ಕಿಮೀ ಉದ್ದದ ಬೈಪಾಸ್‌ ರಸ್ತೆ ನಿರ್ಮಾಣ ಮಾಡಲು .66.44 ಕೋಟಿ ಮೊತ್ತದ ಡಿ.ಪಿ.ಆರ್‌. ಹಾಗೂ ಹೊಸನಗರ ಮಾವಿನಕೊಪ್ಪ ವೃತ್ತದಿಂದ ಹೊಸನಗರ ಬೈಪಾಸ್‌, ಶರಾವತಿ ಹಿನ್ನೀರಿಗೆ 1.54 ಕಿ.ಮೀ ಮತ್ತು 0.72 ಕಿ.ಮೀ. ಉದ್ದದ 2 ಭಾರಿ ಸೇತುವೆಗಳ ನಿರ್ಮಾಣದೊಂದಿಗೆ ಆಡುಗೋಡಿವರೆಗೆ 13.82 ಕಿಮೀ ಉದ್ದದ ಬದಲೀ ರಸ್ತೆ ನಿರ್ಮಾಣ ಮಾಡಲು .6 ಕೋಟಿ ಡಿ.ಪಿ.ಆರ್‌.ಗೆ ಮಂಜೂರಾತಿ ನೀಡಲಾಗಿದೆ. ಬಾಕಿ ಉಳಿದ ಹೆದ್ದಾರಿ ಅಗಲೀಕರಣ ಮಾಡಲು ಡಿಪಿಆರ್‌ ತಯಾರಿಸಲು ಸಹ ಕೇಂದ್ರ ಭೂಸಾರಿಗೆ ಮಂತ್ರಾಲಯವು ಆದೇಶಿಸಿದೆ ಎಂದು ವಿವರಿಸಿದ್ದಾರೆ.

ಶಿವಮೊಗ್ಗ ನಗರ ಉತ್ತರ ಭಾಗದ ಬೈಪಾಸ್‌ ರಸ್ತೆಗೆ ಒಪ್ಪಿಗೆ

ನಗರದ ಉತ್ತರ ಭಾಗದ ಬಾಕಿ ಉಳಿದ 15 ಕಿಮೀ ಉದ್ದದ ಬೈಪಾಸ್‌ ರಸ್ತೆಗೆ ಮಂಜೂರಾತಿ ನೀಡಿ, ಶಿವಮೊಗ್ಗ ನಗರಕ್ಕೆ 34 ಕಿಮೀ ಉದ್ದದ ರಿಂಗ್‌ ರಸ್ತೆ ಪೂರ್ಣಗೊಳಿಸಲು ನೆರವು ನೀಡಲು ಕೋರಲಾಗಿದೆ. ಕೇಂದ್ರ ಸಾರಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸದಸ್ಯರಿಗೆ ಶಿವಮೊಗ್ಗ ನಗರದ ಉತ್ತರ ಭಾಗದ ಬೈಪಾಸ್‌ ರಸ್ತೆಗೆ ಮಂಜೂರಾತಿ ದೊರಕಿಸಿಕೊಡಲು ಸೂಚನೆ ನೀಡಿದ್ದಾರೆ ಎಂದು ಸಂಸ​ದರು ತಿಳಿಸಿದ್ದಾರೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯಲಿ: ಸಂಸದ ರಾಘವೇಂದ್ರ

ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಒಪ್ಪಿಗೆ:

ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿಗಳಾದ ಶಿವಮೊಗ್ಗ- ಹೊನ್ನಾಳಿ- ಮಲೇಬೆನ್ನೂರು- ಹರಿಹರ- ಹರಪನಹಳ್ಳಿ-ಮರಿಯಮ್ಮನಹಳ್ಳಿ ರಸ್ತೆ, ಶಿವಮೊಗ್ಗ- ಶಿಕಾರಿಪುರ- ಶಿರಾಳಕೊಪ್ಪ- ಹಾನಗಲ…- ತಡಸ ರಸ್ತೆ, ಆಯನೂರು-ರಿಪ್ಪ​ನ್‌ಪೇಟೆ -ಹುಂಚ- ತೀರ್ಥಹಳ್ಳಿ- ಮಾಸ್ತಿಕಟ್ಟೆ- ಕುಂದಾಪುರ ರಸ್ತೆ, ಸಾಗರ -ಸೊರಬ- ಶಿರಾಳಕೊಪ್ಪ- ಆನವಟ್ಟಿರಸ್ತೆಗಳನ್ನು ಸಹ ಮೇಲ್ದರ್ಜೆಗೇರಿಸಿ ಚತು​ಷ್ಪಥ ರಸ್ತೆಗಳನ್ನಾಗಿ ಅಗಲೀಕರಣಕ್ಕೆ ಮನವಿ ಮಾಡಲಾ​ಗಿದೆ. ಇದಕ್ಕೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

click me!